ರಾಜ್ಯ ರಾಜಕೀಯದಲ್ಲಿ ಸೆಪ್ಟೆಂಬರ್‌ ಕ್ರಾಂತಿ: ಸಚಿವ ರಾಜಣ್ಣ ಬಾಂಬ್‌

| N/A | Published : Jun 27 2025, 07:15 AM IST

Minister KN Rajanna

ಸಾರಾಂಶ

ರಾಜ್ಯ ರಾಜಕಾರಣದಲ್ಲಿ ಆಗಸ್ಟ್‌-ಸೆಪ್ಟೆಂಬರ್‌ ನಂತರ ಭಾರಿ ಬದಲಾವಣೆಯಾಗಲಿದೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ‘ಬಾಂಬ್‌’ ಸಿಡಿಸಿದ್ದಾರೆ.

 ಬೆಂಗಳೂರು :  ರಾಜ್ಯ ರಾಜಕಾರಣದಲ್ಲಿ ಆಗಸ್ಟ್‌-ಸೆಪ್ಟೆಂಬರ್‌ ನಂತರ ಭಾರಿ ಬದಲಾವಣೆಯಾಗಲಿದೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ‘ಬಾಂಬ್‌’ ಸಿಡಿಸಿದ್ದಾರೆ.

ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯಲ್ಲಿ (2013-2018) ಇದ್ದಂತೆ ಈಗ (ಎರಡನೇ ಅವಧಿಯಲ್ಲಿ) ಇಲ್ಲ ಎಂದು ನೀವು (ಮಾಧ್ಯಮಗಳು) ಹೇಳಬಹುದು. ಬಹುತೇಕ ಜನರ ಅಭಿಪ್ರಾಯ ಕೂಡ ಇದೇ ಆಗಿದೆ. ಇದಕ್ಕೆ ಪಕ್ಷದಲ್ಲಿ ಹಲವು ಪವರ್ ಸೆಂಟರ್‌ಗಳಿರುವುದೇ ಕಾರಣ ಎಂದು ವಿಶ್ಲೇಷಿಸಿದರು.

ಹಿಂದೆ ಪಕ್ಷದಲ್ಲಿ ಒಂದೇ ಪವರ್‌ ಸೆಂಟರ್‌ ಇತ್ತು. ಆಗ ಒಂದೇ ತೀರ್ಮಾನ ಆಗುತ್ತಿತ್ತು. ಆದರೆ, ಈಗ ಕಾಂಗ್ರೆಸ್‌ನಲ್ಲಿ ಪವ‌ರ್ ಸೆಂಟರ್‌ ಜಾಸ್ತಿ ಆಗಿವೆ. ಈಗ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರು, ದೆಹಲಿ ಹೈಕಮಾಂಡ್‌ ಮೂರು ಪವರ್‌ ಸೆಂಟರ್ ಆಗಿವೆ. ನೀವು ಬೇಕಿದ್ದರೆ, ಒಂದು, ಎರಡು, ಮೂರು ಹೀಗೆ ಎಷ್ಟು ಬೇಕಾದರೂ ಪವರ್ ಸೆಂಟರ್‌ಗಳನ್ನು ಲೆಕ್ಕ ಹಾಕಬಹುದು. ಪವರ್‌ ಸೆಂಟರ್‌ ಜಾಸ್ತಿ ಇದ್ದಾಗ ಜಂಜಾಟ ಸಹ ಜಾಸ್ತಿ ಇರುತ್ತದೆ. ಆದರೂ ಸಿದ್ದರಾಮಯ್ಯ ಅವರು ತಮ್ಮ ಅನುಭವದಿಂದ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ಈ ಎಲ್ಲವೂ ಆಗಸ್ಟ್‌ನಿಂದ ನವೆಂಬರ್‌ ವೇಳೆಗೆ ಸರಿ ಹೋಗಬಹುದು. ಬದಲಾವಣೆಯ ಸಣ್ಣ ಸುಳಿಗಾಳಿ ಬೀಸುತ್ತಿದೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

ಆರ್ಥಿಕ ಮುಗ್ಗಟ್ಟಿಲ್ಲ:

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆಯಾಗಿದೆ. ಆದರೆ ಹಣಕಾಸು ಮುಗ್ಗಟ್ಟಿಲ್ಲ. ತಿಂಗಳಲ್ಲಿ 15 ರಿಂದ 20 ದಿನ ಮುಖ್ಯಮಂತ್ರಿಯವರು ಜಿಲ್ಲಾ ಪ್ರವಾಸ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದಾರೆ. ಹಣ ಇಲ್ಲದೆ ಇದ್ದರೆ ಈ ರೀತಿ ಕಾಮಗಾರಿ ಆರಂಭಿಸಲು ಸಾಧ್ಯವೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಶಕ್ತಿ ಮೀರಿ ಪಕ್ಷಭೇದ ಮರೆತು ಎಲ್ಲ ಶಾಸಕರ ಕ್ಷೇತ್ರಗಳಿಗೂ ಅನುದಾನ ನೀಡುತ್ತಿದ್ದಾರೆ. ಆಡಳಿತ ಪಕ್ಷ, ವಿರೋಧ ಪಕ್ಷ ಅಂತ ಯಾವುದೇ ತಾರತಮ್ಯ ಮಾಡುವುದಿಲ್ಲ. ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಹಣಕಾಸು ಒದಗಿಸುತ್ತಿದ್ದೇವೆ. ಒಬ್ಬರಿಗೆ ಹೆಚ್ಚಿಗೆ ನಿರೀಕ್ಷೆ ಇರಬಹುದು. ಅದಕ್ಕೆ ತಕ್ಕಂತೆ ಕೆಲಸಗಳು ಆಗದೇ ಇರಬಹುದು. ಏನೂ ಅಭಿವೃದ್ಧಿ ಅಗುತ್ತಿಲ್ಲ, ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲ ಎನ್ನುವುದೆಲ್ಲ ಸತ್ಯಕ್ಕೆ ದೂರವಾದ ಮಾತು ಎಂದರು.

ಶಾಸಕ ಬಿ.ಆರ್‌.ಪಾಟೀಲ್‌ ಅವರ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಜಣ್ಣ ಅವರು, ಅವರ ಹೇಳಿಕೆಯಲ್ಲಿ ಸತ್ಯ ಇದೆಯೇ ಅಸತ್ಯ ಇದೆಯೇ ಎಂದು ನಾನು ಹೇಳುವುದಿಲ್ಲ. ಅವರ ಅನುಭವದ ಮೇಲೆ ಹೇಳಿದ್ದಾರೆ. ಆಡಿಯೋ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಯಾವುದೇ ಶಾಸಕರು ಮಂತ್ರಿಗಳ ಬಗ್ಗೆ ಅಸಮಾಧಾನ, ಬೇಸರ ವ್ಯಕ್ತಪಡಿಸಿದರೆ ಸಂಬಂಧಪಟ್ಟವರು ಅದನ್ನು ತಿದ್ದಿಕೊಂಡರೆ ಅವರಿಗೆ ಒಳ್ಳೆಯದು, ಇಲ್ಲದಿದ್ದರೆ ಸರಿ ಇದ್ದೇವೆ ಎಂದು ತಿಳಿದುಕೊಂಡು ಬಿಡುತ್ತಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಆಕಾಂಕ್ಷಿ:

ನಾನು ಸಹ ಕೆಪಿಸಿಸಿ ಅಧ್ಯಕ್ಷ ಆಕಾಂಕ್ಷಿ ಎಂದು ಹೇಳಿದ್ದು ಸತ್ಯ, ಈಗಲೂ ಆಗ ಸ್ಥಾನ ಕೊಟ್ಟರೆ ಸಚಿವ ಸ್ಥಾನ ಬಿಡುತ್ತೇನೆ. ನಾನು ಯಾವತ್ತೂ ಅಧಿಕಾರ ಕೇಳಿಲ್ಲ. ಕೊಟ್ಟ ಜವಾಬ್ದಾರಿ ನಿಭಾಯಿಸುವ ಶಕ್ತಿಯನ್ನು ಕ್ಷೇತ್ರದ ಜನ ಕೊಟ್ಟಿದ್ದಾರೆ ಎಂದರು.

ಬದಲಾವಣೆ ಭಾರಿ ಅಲ್ಲ, ಮಂತ್ರಿಗಳಷ್ಟೇ ಬದಲು: ಜಾರಕಿಹೊಳಿ

ಬೆಂಗಳೂರು: ಮಾಧ್ಯಮಗಳು ಹೇಳಿದಂತೆ ವರ್ಷಾಂತ್ಯಕ್ಕೆ ಸರ್ಕಾರದ ಮಟ್ಟದಲ್ಲಿ ಭಾರೀ ಬದಲಾವಣೆಯೇನೂ ಆಗುವುದಿಲ್ಲ. ಆದರೆ, ಸಚಿವರ ಬದಲಾವಣೆ ಆಗಲಿದೆ ಎಂದು ಹಿರಿಯ ಸಚಿವ ಸತೀಶ್‌ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೀವು (ಮಾಧ್ಯಮ) ಹೇಳಿದಂತೆ ಭಾರಿ ಬದಲಾವಣೆ ಆಗುವುದಿಲ್ಲ, ಸಚಿವರ ಬದಲಾವಣೆಯಾಗಬಹುದು. ವರಿಷ್ಠರು ಎಲ್ಲವನ್ನೂ ಗಮನಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

Read more Articles on