ಸಾರಾಂಶ
ಕೋಲಾರ : ವಿಧಾನಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ನಡೆದ ಮತದಾನದಲ್ಲಿ ಶಿಕ್ಷಕರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದು ಜಿಲ್ಲೆಯಲ್ಲಿ ಒಟ್ಟು ಶೇ.95.82 ಮತದಾನವಾಗಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಜಿಲ್ಲೆಯ ಎಲ್ಲಾ ಆರು ತಾಲ್ಲೂಕು ಕೇಂದ್ರಗಳಲ್ಲಿ ನಡೆದ ಮತದಾನ ಶಾಂತಿಯುತವಾಗಿದ್ದು, ಒಟ್ಟು ನೋಂದಾಯಿಸಿದ್ದ 4360 ಮತಗಳ ಪೈಕಿ2297 ಮತಗಳು ಚಲಾವಣೆಯಾಗಿ ಶೇ.95.82 ರಷ್ಟು ಮತದಾನವಾಯಿತು. 2063 ಮಹಿಳಾ ಮತದಾರರು,2297 ಪುರುಷ ಮತದಾರರು ತಮ್ಮ ಹಕ್ಕು ಚಲಾಯಸಿದ್ದಾರೆ. ತಾಲೂಕುವಾರು ಮತದಾನ ವಿವರ
ಮಾಲೂರಿನಲ್ಲಿ 693 ಮತದಾರರ ಪೈಕಿ669 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಅತಿ ಹೆಚ್ಚು ಅಂದರೆ ಶೇ.98.29 ರಷ್ಟು ಮತದಾನವಾಗಿದೆ. ಉಳಿದಂತೆ ಶ್ರೀನಿವಾಸಪುರದಲ್ಲಿ ಒಟ್ಟು 731 ಮತದಾರರ ಪೈಕಿ 705 ಮಂದಿ ಹಕ್ಕು ಚಲಾಯಿಸಿದ್ದು, ಶೇ.96.44 ಮತದಾನವಾಗಿದೆ. ಮುಳಬಾಗಿಲು ತಾಲೂಕಿನಲ್ಲಿ ಒಟ್ಟು 631 ಮತದಾರರ ಪೈಕಿ 615 ಮಂದಿ ಮತದಾನ ಮಾಡಿದ್ದು, ಶೇ97.46 ಮತದಾನವಾಗಿದೆ. ಜಿಲ್ಲಾ ಕೇಂದ್ರವಾದ ಕೋಲಾರದ ಎರಡು ಮತಗಟ್ಟೆಗಳಲ್ಲಿ ಒಟ್ಟು 1733 ಮತದಾರರ ಪೈಕಿ 1430 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಶೇ.93.16 ಮತದಾನವಾಗಿದೆ. ಉಳಿದಂತೆ ಬಂಗಾರಪೇಟೆ ತಾಲೂಕಿನಲ್ಲಿ ಒಟ್ಟು 435 ಮತದಾರರ ಪೈಕಿ 423 ಮಂದಿ ಹಕ್ಕು ಚಲಾಯಿಸಿದ್ದು ಶೇ.97.24 ಮತದಾನವಾಗಿದೆ. ಕೆಜಿಎಫ್ ತಾಲೂಕಿನಲ್ಲಿ ಒಟ್ಟು 693 ಮತದಾರರಿದ್ದು, 669 ಮಂದಿ ಹಕ್ಕು ಚಲಾಯಿಸಿದ್ದರಿಂದ 96.54 ಮತದಾನವಾಗಿದೆ. ಮಧ್ಯಾಹ್ನ 2 ಗಂಟೆಗೆ ಶೇ.68.64 ಮತದಾನ
ಜಿಲ್ಲಾದ್ಯಂತ ಎಲ್ಲಾ ತಾಲೂಕು ಕಚೇರಿಗಳಲ್ಲೇ ಮತದಾನ ನಡೆದಿದ್ದು ನಗರದ ತಹಸೀಲ್ದಾರ್ ಕಚೇರಿಯಲ್ಲಿ ಅಳವಡಿಸಿದ್ದ ಎರಡು ಮತಗಟ್ಟೆಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತದಾನ ಆರಂಭಗೊಂಡಿದ್ದು, ಆರಂಭದಲ್ಲಿ ನಿರುತ್ಸಾಹ ಕಂಡು ಬಂತು. 11 ಗಂಟೆಯಾಗುತ್ತಿದ್ದಂತೆ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಯತ್ತ ಧಾವಿಸಿದ್ದರಿಂದ ಮತಗಟ್ಟೆಗಳ ಮುಂದೆ ಉದ್ದುದ್ದ ಸಾಲುಗಳು ಕಂಡು ಬಂದಿದ್ದು, ಮಧ್ಯಾಹ್ನ 2 ಗಂಟೆ ವೇಳೆಗೆ ಶೇ.68.64 ರಷ್ಟು ಮತದಾನವಾಗಿತ್ತು.
ಮತಗಟ್ಟೆ ಮುಂದೆ ಜನಜಾತ್ರೆ
ಮತದಾನ ನಡೆದ ತಾಲ್ಲೂಕು ಕಚೇರಿ ಮುಂದೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ವೈ.ಎ.ನಾರಾಯಣಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್, ಪಕ್ಷೇತರ ಅಭ್ಯರ್ಥಿ ವಿನೋದ್ ಶಿವರಾಜ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಹತ್ತಾರು ಪೆಂಡಾಲ್ ಹಾಕಿ ಶಿಕ್ಷಕರಲ್ಲಿ ಮತಯಾಚನೆ ನಡೆಸುವುದರ ಜತೆಗೆ ಬಂದ ಶಿಕ್ಷಕರಿಗೆ ನೀರು, ಊಟದ ವ್ಯವಸ್ಥೆ ಮಾಡಿದ್ದರು. ತಾಲೂಕು ಕಚೇರಿ ಆವರಣದೊಳಗೆ ಪ್ರಚಾರಕ್ಕೆ ಅವಕಾಶ ನೀಡದ ಪೊಲೀಸರು ಗೇಟ್ನಲ್ಲಿ ಮತದಾರರಿಗೆ ಮಾತ್ರ ಒಳ ಪ್ರವೇಶಿಸಲು ಅವಕಾಶ ಕಲ್ಪಿಸಿದರು. ವೈಎಎನ್ ಪರವಾಗಿ ಸಂಸದ, ಮುಖಂಡರು
ಡಾ.ವೈ.ಎ.ನಾರಾಯಣಸ್ವಾಮಿ ಪರವಾಗಿ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಮುಖಂಡರಾದ ಸಿಎಂಆರ್.ಶ್ರೀನಾಥ್,ಬಣಕನಹಳ್ಳಿ ನಟರಾಜ್, ಬಿಜೆಪಿ ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ಮಮತಮ್ಮ, ಮಾಗೇರಿ ನಾರಾಯಣಸ್ವಾಮಿ, ಸಿ.ಡಿ.ರಾಮಚಂದ್ರೇಗೌಡ, ಅರುಣಮ್ಮ, ತಿಮ್ಮರಾಯಪ್ಪ, ಸಹ್ಯಾದ್ರಿ ಉದಯಕುಮಾರ್, ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಖಾಸಗಿ ಶಾಲೆಗಳ ಸಂಘದ ಸೋಮಶೇಖರ್, ಮಂಜುನಾಥ್, ಮತ್ತಿತರರು ಕಾರ್ಯನಿರ್ವಹಿಸುತ್ತಿದ್ದರು.ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರವಾಗಿ ಶಾಸಕ ಕೊತ್ತೂರು ಮಂಜುನಾಥ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೆಂಜಿಮಲೆ ರಮೇಶ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಗೌಡ,ಮೈಲಾಂಡಹಳ್ಳಿ ಮುರಳಿ ಶಿಕ್ಷಕ, ಉಪನ್ಯಾಸಕ ಸಂಘಟನೆಗಳ ನಾಗಾನಂದ್ ಕೆಂಪರಾಜ್ ಮತ್ತಿತರರು ಕಾರ್ಯ ನಿರ್ವಹಿಸಿದರು.