ಸಾರಾಂಶ
ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಲೋಕಸಭೆ ಚುನಾವಣೆ ಮುಗಿದ ನಂತರ ಬಿಹಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬಹುದು ಹಾಗೂ ನರೇಂದ್ರ ಮೋದಿ ಅವರ ಸಚಿವ ಸಂಪುಟ ಸೇರಬಹುದು ಎಂಬ ಊಹಾಪೋಹಗಳು ಹರಡಿವೆ.
ಪಟನಾ: ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಲೋಕಸಭೆ ಚುನಾವಣೆ ಮುಗಿದ ನಂತರ ಬಿಹಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬಹುದು ಹಾಗೂ ನರೇಂದ್ರ ಮೋದಿ ಅವರ ಸಚಿವ ಸಂಪುಟ ಸೇರಬಹುದು ಎಂಬ ಊಹಾಪೋಹಗಳು ಹರಡಿವೆ.
ಇದೇ ವೇಳೆ, ಬಿಜೆಪಿ ನಾಯಕರಾದ ಹಾಲಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಮುಖ್ಯಮಂತ್ರಿ ಆಗಬಹುದು ಇಲ್ಲವೇ ರಾಜ್ಯದಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟವು ವಿಧಾನಸಭೆ ವಿಸರ್ಜಿಸಿ ಅವಧಿಪೂರ್ವ ಚುನಾವಣೆಗೆ ಮುಂದಾಗಬಹುದು ಎಂದೂ ಮೂಲಗಳು ಹೇಳಿವೆ. ಈಗಿನ ಪ್ರಕಾರ ಬಿಹಾರ ವಿಧಾನಸಭೆ ಅವಧಿ 2025ರ ಅಕ್ಟೋಬರ್ಗೆ ಮುಗಿಯಬೇಕಿದೆ.
ಇದೇ ವೇಳೆ, ನಿತೀಶ್ ಕುಮಾರ್ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ದಿಲ್ಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಏನು ಮಾತುಕತೆ ನಡೆಯಿತು ಎಂಬುದನ್ನು ಯಾರೂ ಬಹಿರಂಗಪಡಿಸಿಲ್ಲ.
ಆದರೆ ಜೆಡಿಯು ಮೂಲಗಳು ಇದೆಲ್ಲ ಊಹಾಪೋಹ ಎಂದಿವೆ. ಆದಾಗ್ಯೂ ಬಿಜೆಪಿ ಮೂಲಗಳು ಪ್ರತಿಕ್ರಿಯಿಸಿ, ‘ನಿತೀಶ್ಗೆ ವಯಸ್ಸಾಗಿದೆ. ಮುಂದಿನ ಚುನಾವಣೆ ಅವರ ನೇತೃತ್ವದಲ್ಲಂತೂ ನಡೆಯದು’ ಎಂದಿವೆ.