ಸಾರಾಂಶ
ಬೆಂಗಳೂರು : ಯುವಜನರು ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಕ್ರಾಂತಿ ತರಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ। ಶಾಲಿನಿ ರಜನೀಶ್ ಕರೆ ನೀಡಿದರು.
‘ಕೃಷಿ ಮೇಳ’ದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ಬಗ್ಗೆ ಇರುವ ಅಧಿಕ ಮಾಹಿತಿ, ನೂತನ ತಂತ್ರಜ್ಞಾನಗಳ ಬಳಕೆಯಿಂದಾಗಿ ಇತರೆ ದೇಶಗಳೂ ಸಹ ನಮ್ಮ ಆಧುನಿಕ ಕೃಷಿಯನ್ನು ಹೊಗಳುವಂತಾಗಿದೆ.ಕೃಷಿ ಮೇಳಕ್ಕೆ ಭೇಟಿ ನೀಡಿದ ರೈತರು ತಾವು ನೋಡಿದ ತಾಂತ್ರಿಕತೆ, ತಳಿಗಳ ಬಗ್ಗೆ ಹತ್ತಾರು ರೈತರಿಗೆ ಮಾಹಿತಿ ನೀಡಿದಾಗ ಮೇಳಕ್ಕೆ ಅರ್ಥ ಸಿಗುತ್ತದೆ ಎಂದರು,
ವಿವಿ ಕುಲಪತಿ ಡಾ। ಎಸ್.ವಿ.ಸುರೇಶ ಮಾತನಾಡಿ, ಕೃತಕ ಬುದ್ಧಿಮತ್ತೆ, ಡ್ರೋನ್ಗಳ ಬಳಕೆ, ಹವಾಮಾನ ಆಧಾರಿತ ಕೃಷಿಯು ಆಹಾರ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ ರೈತರನ್ನು ಆರ್ಥಿಕವಾಗಿ ಸಧೃಡರನ್ನಾಗಿ ಮಾಡಬಲ್ಲದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ವಿವಿಯ ಡಾ। ಶಾಲಿನಿ ಅವರಿಗೆ ‘ಡಾ। ಆರ್.ದ್ವಾರಕೀನಾಥ್ ರಾಜ್ಯ ಮಟ್ಟದ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತೆ ಪ್ರಶಸ್ತಿ’ ಸೇರಿದಂತೆ ಹಲವು ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ.ಸುಧೀಂದ್ರ, ವಿವಿ ಕುಲಸಚಿವ ಡಾ। ಕೆ.ಸಿ.ನಾರಾಯಣಸ್ವಾಮಿ, ಸಂಶೋಧನಾ ನಿರ್ದೇಶಕ ಡಾ। ಎಚ್.ಎಸ್.ಶಿವರಾಮು, ವಿಸ್ತರಣಾ ನಿರ್ದೇಶಕ ಡಾ। ವೈ.ಎನ್.ಶಿವಲಿಂಗಯ್ಯ ಉಪಸ್ಥಿತರಿದ್ದರು.
ಟ್ರ್ಯಾಕ್ಟರ್ ಓಡಿಸಿ ಗಮನ ಸೆಳೆದ ಶಾಲಿನಿ ರಜನೀಶ್: ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ। ಶಾಲಿನಿ ರಜನೀಶ್ ಅವರು ಒಂದು ಗಂಟೆಗೂ ಅಧಿಕ ಕಾಲ ಮಳಿಗೆಗೆಳು, ಹೊಸ ತಳಿ, ನೂತನ ತಾಂತ್ರಿಕತೆಗಳನ್ನು ವೀಕ್ಷಿಸಿದರು. ಟ್ರ್ಯಾಕ್ಟರ್ ಮೂಲಕ ರಸಗೊಬ್ಬರ, ಔಷಧಿ ಸಿಂಪಡಿಸುವ ತಾಂತ್ರಿಕತೆಯನ್ನು ವೀಕ್ಷಿಸಿದ ಅವರು ಖುದ್ದು ಟ್ರ್ಯಾಕ್ಟರ್ ಚಲಾಯಿಸಿ ಗಮನ ಸೆಳೆದರು.