ಐಪಿಎಲ್‌ನಲ್ಲಿ ಮಿಂಚಿದ್ದ ಎಕ್ಸ್‌ಪ್ರೆಸ್‌ ವೇಗಿಗೆ ಮೊದಲ ಬಾರಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ. ಅ.6ರಿಂದ ಬಾಂಗ್ಲಾದೇಶ ವಿರುದ್ಧದ ಸರಣಿ ಆರಂಭ.

ನವದೆಹಲಿ: ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ ಪ್ರಕಟಗೊಂಡಿದ್ದು, ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ತಮ್ಮ ಮಾರಕ ವೇಗದ ಬೌಲಿಂಗ್‌ ದಾಳಿಯಿಂದ ಗಮನ ಸೆಳೆದಿದ್ದ ಮಯಾಂಕ್‌ ಯಾದವ್‌ಗೆ ಸ್ಥಾನ ನೀಡಲಾಗಿದೆ.

ಏ.30ರಂದು ಪಕ್ಕೆಲುಬು ನೋವಿನಿಂದಾಗಿ ಐಪಿಎಲ್‌ನಿಂದ ಹೊರಬಿದ್ದಿದ್ದ ಮಯಾಂಕ್‌, ಆನಂತರ ವೃತ್ತಿಪರ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದೀಗ ಅವರನ್ನು ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಅ.6ರಿಂದ ಸರಣಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯ ಗ್ವಾಲಿಯರ್‌ನಲ್ಲಿ ನಡೆಯಲಿದೆ. ತಂಡವನ್ನು ಸೂರ್ಯಕುಮಾರ್‌ ಯಾದವ್‌ ಮುನ್ನಡೆಸಲಿದ್ದು, ವರುಣ್‌ ಚಕ್ರವರ್ತಿ ಹಾಗೂ ಜಿತೇಶ್‌ ಶರ್ಮಾ ತಂಡಕ್ಕೆ ಮರಳಿದ್ದಾರೆ. ಋತುರಾಜ್‌ ಗಾಯಕ್ವಾಡ್‌ಗೆ ಅವಕಾಶ ಸಿಕ್ಕಿಲ್ಲ.

ತಂಡ: ಸೂರ್ಯಕುಮಾರ್‌ (ನಾಯಕ), ಅಭಿಷೇಕ್‌ ಶರ್ಮಾ, ಸ್ಯಾಮ್ಸನ್‌, ರಿಂಕು, ಹಾರ್ದಿಕ್‌, ರಿಯಾನ್‌, ನಿತೀಶ್‌ ರೆಡ್ಡಿ, ಶಿವಂ ದುಬೆ, ವಾಷಿಂಗ್ಟನ್‌, ರವಿ ಬಿಷ್ಣೋಯ್‌, ವರುಣ್‌ ಚಕ್ರವರ್ತಿ, ಜಿತೇಶ್‌, ಅರ್ಶ್‌ದೀಪ್‌, ಹರ್ಷಿತ್‌, ಮಯಾಂಕ್‌ ಯಾದವ್‌.