ದಾಂತೇವಾಡ: ಛತ್ತೀಸ್‌ಗಢದ ನಕ್ಸಲ್‌ ಪೀಡಿತ ಪ್ರದೇಶ ದಾಂತೇವಾಡದಲ್ಲಿ ಸಚಿನ್ ತೆಂಡುಲ್ಕರ್‌ ಫೌಂಡೇಶನ್ 50 ಕ್ರೀಡಾ ಅಕಾಡೆಮಿಗಳನ್ನು ನವೀಕರಣಗೊಳಿಸಲು ಮುಂದಾಗಿದೆ. 

ಜಿಲ್ಲೆಯಲ್ಲಿ ಮಾವೋವಾದಿ ಚಟುವಟಿಕೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಮನ್‌ ದೇಶಿ ಫೌಂಡೇಶನ್ ಮತ್ತು ಸಚಿನ್ ತೆಂಡುಲ್ಕರ್‌ ಫೌಂಡೇಶನ್ ಸಹಯೋಗದೊಂದಿಗೆ ಮೈದಾನ್ ಕಪ್‌ ಪರಿಚಯಿಸಿದ್ದು, ಇದರ ಅಡಿಯಲ್ಲಿ ದಾಂತೇವಾಡದಲ್ಲಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು 50 ಆಟದ ಮೈದಾನಗಳ ಅಭಿವೃದ್ಧಿಗೆ ಮುಂದಾಗಿದೆ. ರನ್ನಿಂಗ್ ಟ್ರ್ಯಾಕ್, ಶಾಟ್‌ಪುಟ್‌, ಜಾವೆಲಿನ್ ಥ್ರೋ, ಡಿಸ್ಕಸ್‌ ಥ್ರೋ, ವಾಲ್‌ ಕ್ಲೈಂಬಿಂಗ್ ಸೇರಿದಂತೆ 13 ಕ್ರೀಡೆಗಳ ಸೌಲಭ್ಯದೊಂದಿಗೆ ಮೈದಾನವನ್ನು ನವೀಕರಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಛತ್ತೀಸ್‌ಗಢದ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.

ಇಂಗ್ಲೆಂಡ್‌ ಸರಣಿ: ಪಟೌಡಿ


ಹೆಸರು ಮುಂದುವರಿಸಲು

ಸಚಿನ್‌ ತೆಂಡುಲ್ಕರ್‌ ಮನವಿ

ಲಂಡನ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಸರಣಿಗೆ ‘ಆ್ಯಂಡರ್‌ಸನ್‌-ತೆಂಡುಲ್ಕರ್‌ ಟ್ರೋಫಿ’ ಎಂದು ಹೆಸರಿಡಲು ಬಿಸಿಸಿಐ ಹಾಗೂ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ) ನಿರ್ಧರಿಸಿತ್ತು. ಆದರೆ ಸರಣಿಗೆ ಈ ಹಿಂದೆ ಇದ್ದ ‘ಪಟೌಡಿ ಟ್ರೋಫಿ’ ಎಂಬ ಹೆಸರನ್ನೇ ಮುಂದುವರಿಸಲು ಬಿಸಿಸಿಐ ಹಾಗೂ ಇಸಿಬಿಗೆ ಸಚಿನ್‌ ತೆಂಡುಲ್ಕರ್‌ ಮನವಿ ಮಾಡಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಕೆಲ ದಿನಗಳಲ್ಲೇ ಉಭಯ ಮಂಡಳಿಗಳು ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

ಭಾರತದ ಮಾಜಿ ಕ್ರಿಕೆಟಿಗರಾದ ಇಫ್ತಿಖಾರ್‌ ಅಲಿ ಖಾನ್‌ ಪಟೌಡಿ ಹಾಗೂ ಅವರ ಪುತ್ರ ಮನ್ಸೂರ್‌ ಅಲಿ ಖಾನ್‌ ಪಟೌಡಿ ಸ್ಮರಣಾರ್ಥ, ಭಾರತ ಹಾಗೂ ಇಂಗ್ಲೆಂಡ್‌ ಸರಣಿಯಲ್ಲಿ ಗೆಲ್ಲುವ ತಂಡಗಳಿಗೆ ನೀಡುವ ಟ್ರೋಫಿಗೆ 2007ರಲ್ಲಿ ಪಟೌಡಿ ಟ್ರೋಫಿ ಎಂದು ಹೆಸರಿಡಲಾಗಿತ್ತು.