ಭಾರತೀಯ ಫುಟ್‌ ಬಾಲ್‌ಗೆ ಗುರು, ಗುರಿ ಎರಡೂ ಇಲ್ಲ! ಶೋಚನೀಯ ಪರಿಸ್ಥಿತಿ

| N/A | Published : Jun 16 2025, 03:35 AM IST / Updated: Jun 16 2025, 04:50 AM IST

ಸಾರಾಂಶ

 ಭಾರತದಲ್ಲಿ ಕೋಟ್ಯಂತರ ಫುಟ್ಬಾಲ್‌ ಪ್ರೇಮಿಗಳು, ಲಕ್ಷಾಂತರ ಯುವ ಫುಟ್ಬಾಲ್‌ ಪ್ರತಿಭೆಗಳು, ನೂರಾರು ವೃತ್ತಿಪರ ಆಟಗಾರರು ಇದ್ದಾರೆ. ಆದರೆ ಎಲ್ಲವೂ ಇದ್ದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಫುಟ್ಬಾಲ್‌ನ ಈಗಿನ ಪರಿಸ್ಥಿತಿ ಮಾತ್ರ ಶೋಚನೀಯ.

ನಾಸಿರ್‌ ಸಜಿಪ

ಬೆಂಗಳೂರು : ಕ್ರಿಕೆಟ್‌ ನಂತರ ಭಾರತದಲ್ಲಿ ಹೆಚ್ಚಿನ ಕ್ರೇಜ್‌ ಇರುವುದು ಫುಟ್ಬಾಲ್‌ ಮೇಲೆ. ದೇಶದೆಲ್ಲೆಡೆ ಕೋಟ್ಯಂತರ ಫುಟ್ಬಾಲ್‌ ಪ್ರೇಮಿಗಳು, ಲಕ್ಷಾಂತರ ಯುವ ಫುಟ್ಬಾಲ್‌ ಪ್ರತಿಭೆಗಳು, ನೂರಾರು ವೃತ್ತಿಪರ ಆಟಗಾರರು ಇದ್ದಾರೆ. ಆದರೆ ಎಲ್ಲವೂ ಇದ್ದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಫುಟ್ಬಾಲ್‌ನ ಈಗಿನ ಪರಿಸ್ಥಿತಿ ಮಾತ್ರ ಶೋಚನೀಯ.

1950-60ರ ದಶಕದಲ್ಲಿ ಭಾರತ ಫುಟ್ಬಾಲ್‌ ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲೇ ತನ್ನ ಛಾಪು ಮೂಡಿಸಿತ್ತು. ಏಷ್ಯನ್‌ ಗೇಮ್ಸ್‌ನಲ್ಲಿ ಚಾಂಪಿಯನ್‌ ಆಗುತ್ತಿದ್ದ ತಂಡ, ಒಲಿಂಪಿಕ್ಸ್‌ನಲ್ಲೂ ಆಡಿ ವಿಶ್ವದ ಬಲಿಷ್ಠ ತಂಡಗಳಿಗೆ ಕಠಿಣ ಪೈಪೋಟಿ ನೀಡುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಒಲಿಂಪಿಕ್ಸ್‌, ಫಿಫಾ ವಿಶ್ವಕಪ್‌ನ ಆಸೆ ಇಡುವುದು ಕನಸಿನ ಮಾತಾಯ್ತು, ಕನಿಷ್ಠ ಪಕ್ಷ ಎಎಫ್‌ಸಿ ಏಷ್ಯನ್‌ ಕಪ್‌ಗೆ ಅರ್ಹತೆ ಪಡೆಯಲೂ ಪರದಾಟ ನಡೆಸುತ್ತಿದೆ. ಜೋರ್ಡಾನ್‌, ಉಜ್ಬೇಕಿಸ್ತಾನದಂತಹ ಸಣ್ಣ ಪುಟ್ಟ ದೇಶಗಳು ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತಿದ್ದರೂ, 140+ ಕೋಟಿ ಜನಸಂಖ್ಯೆಯ ಭಾರತ ಏಷ್ಯಾ ಮಟ್ಟದ ಲೀಗ್‌ಗಳಿಗೂ ಅರ್ಹತೆ ಗಿಟ್ಟಿಸಲು ಹೆಣಗಾಡುತ್ತಿರುವುದು ಖೇದಕರ.

ಅದರಲ್ಲೂ ಭಾರತದ ಕಳೆದೆರಡು ವರ್ಷಗಳ ಪ್ರದರ್ಶನ ನೋಡಿದರೆ ಸಿಟ್ಟು ಬರುತ್ತದೆ. ಕಳೆದ 18 ತಿಂಗಳಲ್ಲಿ ಅಂದರೆ 2023ರ ನವೆಂಬರ್‌ ಬಳಿಕ ಭಾರತ ತಂಡ 16 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಕೇವಲ ಒಂದರಲ್ಲಿ ಗೆದ್ದಿದೆ. 2023ರ ನವೆಂಬರ್‌ನಲ್ಲಿ ಕುವೈತ್‌ ವಿರುದ್ಧ ವಿಶ್ವಕಪ್ ಅರ್ಹತಾ ಟೂರ್ನಿಯ 2ನೇ ಸುತ್ತಿನಲ್ಲಿ ಗೆದ್ದ ಬಳಿಕ ತಂಡ, ಇತ್ತೀಚೆಗೆ ಮಾರ್ಚ್‌ನಲ್ಲಿ ಮಾಲ್ಡೀವ್ಸ್‌ ತಂಡವನ್ನು ಸೋಲಿಸಿತ್ತು. ರ್‍ಯಾಂಕಿಂಗ್‌ನಲ್ಲಿ ತನಗಿಂತ ಕೆಳಗಿರುವ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಸಿಂಗಾಪುರ, ಹಾಂಕಾಂಗ್‌ ವಿರುದ್ಧವೂ ಗೆಲ್ಲಲಾಗದೆ ಇರುವುದು ತಂಡ ಅದೆಷ್ಟು ಪಾತಾಳಕ್ಕೆ ಕುಸಿದಿದೆ ಎಂಬುದಕ್ಕೆ ಸಾಕ್ಷಿ.

18 ತಿಂಗಳಲ್ಲಿ 7 ಗೋಲು!:

2023ರ ನವೆಂಬರ್‌ ಬಳಿಕ ಭಾರತ ಆಡಿರುವ ಒಟ್ಟು ಪಂದ್ಯಗಳಲ್ಲಿ ಗಳಿಸಿದ ಗೋಲು ಕೇವಲ ಏಳು ಮಾತ್ರ. ಈ ಗೋಲುಗಳೆಲ್ಲಾ 5 ಪಂದ್ಯಗಳಲ್ಲೇ ದಾಖಲಾಗಿದೆ. ಅಂದರೆ ಬರೋಬ್ಬರಿ 11 ಪಂದ್ಯಗಳಲ್ಲಿ ಗೋಲಿನ ಖಾತೆಯನ್ನೂ ತೆರೆಯಲು ಭಾರತಕ್ಕೆ ಸಾಧ್ಯವಾಗಿಲ್ಲ. ವಿಶ್ವ ರ್‍ಯಾಂಕಿಂಗ್‌ನಲ್ಲಿ 178ನೇ ಸ್ಥಾನದಲ್ಲಿರುವ ಮಾರಿಷಸ್‌ ವಿರುದ್ಧವೂ ಭಾರತ ಗೆದ್ದಿಲ್ಲ ಮತ್ತು ಒಂದೂ ಗೋಲು ಬಾರಿಸಿಲ್ಲ ಎನ್ನುವುದು ಮತ್ತೊಂದು ದುರಂತ.

ಏಷ್ಯನ್‌ ಕಪ್‌ಗೇರಲು ಪರದಾಟ:

1956ರಿಂದ ನಡೆಯುತ್ತಿರುವ ಎಎಫ್‌ಸಿ ಏಷ್ಯನ್‌ ಕಪ್‌ನಲ್ಲಿ ಭಾರತ ಕೇವಲ 5 ಬಾರಿ ಮಾತ್ರ ಆಡಿದೆ. 2007ರ ವರೆಗೆ 2 ಬಾರಿ ಟೂರ್ನಿಗೆ ಅರ್ಹತೆ ಪಡೆದಿದ್ದರೆ, 2011ರ ಬಳಿಕ 3 ಬಾರಿ(2011, 2019 ಮತ್ತು 2023) ಟೂರ್ನಿಯಲ್ಲಿ ಕಣಕ್ಕಿಳಿದಿದೆ. ಆದರೆ ಈಗ 2027ರ ಲೀಗ್‌ಗೆ ಅರ್ಹತೆ ಪಡೆಯುವುದೇ ಅನುಮಾನ ಎನಿಸಿದೆ. ತಂಡ ಆಡಿರುವ 2 ಪಂದ್ಯಗಳಲ್ಲೂ(ಬಾಂಗ್ಲಾದೇಶ, ಹಾಂಕಾಂಗ್‌) ಗೆಲ್ಲಲು ವಿಫಲವಾಗಿದೆ. ಹೀಗಾಗಿ ಮುಂದಿನ ಎಲ್ಲಾ ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

2 ವರ್ಷದಲ್ಲಿ 30+ ಸ್ಥಾನ ಕುಸಿದ ಭಾರತ ತಂಡ!

ಭಾರತ ತಂಡ ಸದ್ಯ ಫಿಫಾ ಲೈವ್‌ ರ್‍ಯಾಂಕಿಂಗ್‌ನಲ್ಲಿ 133ನೇ ಸ್ಥಾನಕ್ಕೆ ಕುಸಿದಿದೆ. 2 ವರ್ಷಗಳ ಹಿಂದೆ ಅಂದರೆ 2023ರ ಜುಲೈನಲ್ಲಿ ಭಾರತ ಅಗ್ರ-100ರಲ್ಲಿ ಸ್ಥಾನ ಪಡೆದಿತ್ತು. ಬಳಿಕ ತಂಡದ ಕಳಪೆ ಪ್ರದರ್ಶನದಿಂದಾಗಿ ರ್‍ಯಾಂಕಿಂಗ್‌ನಲ್ಲಿ ಕುಸಿಯುತ್ತಲೇ ಇದೆ. 1996ರಲ್ಲಿ 94ನೇ ಸ್ಥಾನ ಪಡೆದಿದ್ದು ಭಾರತ ತಂಡದ ಈ ವರೆಗಿನ ಶ್ರೇಷ್ಠ ಪ್ರದರ್ಶನ.

ವಿಜಯನ್‌, ಭುಟಿಯಾ, ಚೆಟ್ರಿ ಬಳಿಕ ಇನ್ಯಾರು?

1960ರ ಬಳಿಕ ಕುಸಿಯುತ್ತಿದ್ದ ಭಾರತೀಯ ಫುಟ್ಬಾಲ್‌ನ ಗುಣಮಟ್ಟ ಏರಿಕೆ ಕಂಡಿದ್ದು 1990ರ ದಶಕದಲ್ಲಿ. ಆಗ ಐ.ಎಂ.ವಿಜಯನ್‌ ಭಾರತದ ಸ್ಟಾರ್‌ ಆಟಗಾರ. ಅವರ ಕಾಲ್ಚಳಕ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ನೆರವಾಗಿದ್ದಲ್ಲದೇ, ದೇಶದಲ್ಲಿ ಫುಟ್ಬಾಲ್‌ ಪ್ರೇಮಿಗಳ ಸಂಖ್ಯೆಯನ್ನೂ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿತ್ತು. ಇದೇ ವೇಳೆಯಲ್ಲಿ ಅಂದರೆ, 1996ರಲ್ಲಿ ಭಾರತ ರ್‍ಯಾಂಕಿಂಗ್‌ನಲ್ಲಿ 94ನೇ ಸ್ಥಾನಕ್ಕೇರಿದ್ದು ಈಗಲೂ ತಂಡದ ಶ್ರೇಷ್ಠ ಸಾಧನೆ. ವಿಜಯನ್ ನೇಪಥ್ಯಕ್ಕೆ ಸರಿಯುತ್ತಿದ್ದಂತೆಯೇ ಬಾಯ್ಚುಂಗ್‌ ಭುಟಿಯಾ ಭಾರತದ ಫುಟ್ಬಾಲ್‌ ತಾರೆಯಾಗಿ ಹೊರಹೊಮ್ಮಿದ್ದರು. ತಂಡದ ಪರ ಗೋಲು ಗಳಿಸುವ ಹೊಣೆಗಾರಿಕೆ ಭುಟಿಯಾ ಹೆಗಲ ಮೇಲಿತ್ತು. 1995ರಲ್ಲಿ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದ್ದ ಭುಟಿಯಾ, 2011ರ ವರೆಗೂ ಆಡಿದ್ದರು.2011ರಲ್ಲಿ ಭುಟಿಯಾ ನಿವೃತ್ತಿಯಾಗುವಾಗ ಸುನಿಲ್‌ ಚೆಟ್ರಿ ಸಣ್ಣ ಮಟ್ಟಿಗೆ ಸ್ಟಾರ್‌ ಆಗಿ ಹೊರಹೊಮ್ಮಿದ್ದರು. 2005ರಲ್ಲಿ ಭಾರತ ಪರ ಆಡಲು ಶುರು ಮಾಡಿದ್ದ ಚೆಟ್ರಿ, ಈಗ ಭಾರತದ ಧ್ರುವ ತಾರೆ. ಅವರಿಲ್ಲದಿದ್ದರೆ ತಂಡವೇ ಇಲ್ಲ ಎನ್ನುವಂತ ಸ್ಥಿತಿ ಇದೆ. ಇತ್ತೀಚೆಗಷ್ಟೇ ಅವರು ನಿವೃತ್ತಿ ಘೋಷಿಸಿದ್ದರೂ, ಅನಿವಾರ್ಯವಾಗಿ ನಿವೃತ್ತಿ ಹಿಂಪಡೆದು ತಂಡಕ್ಕೆ ಮರಳಿದ್ದಾರೆ. ಇನ್ನೇನು ಕೆಲ ಸಮಯದಲ್ಲೇ ಅವರೂ ನಿವೃತ್ತಿಯಾಗಲಿದ್ದಾರೆ. ಆದರೆ ಭಾರತ ತಂಡವನ್ನು ಮುನ್ನಡೆಸಬಲ್ಲ ಸಮರ್ಥ ಆಟಗಾರರು ತಂಡದಲ್ಲಿಲ್ಲ. ಫುಟ್ಬಾಲ್‌ ಪ್ರೇಮಿಗಳನ್ನು ಕ್ರೀಡಾಂಗಣಕ್ಕೆ ಕರೆತರಬಲ್ಲ, ತಂಡದ ಪರ ನಿರಂತರವಾಗಿ ಗೋಲು ಗಳಿಸಬಲ್ಲ ಒಂದಿಬ್ಬರು ಆಟಗಾರರೂ ಸದ್ಯ ಭಾರತದ ಟೀಮ್‌ನಲ್ಲಿ ಕಾಣಸಿಗುತ್ತಿಲ್ಲ ಎಂಬುದಂತೂ ಸತ್ಯ.

ಕೋಚ್‌ ಬದಲಾದರೂ

ಬದಲಾಗದ ಹಣೆಬರಹ

ಭಾರತ ತಂಡಕ್ಕೆ ವಿದೇಶದ ಕೆಲ ತಾರಾ ಫುಟ್ಬಾಲಿಗರು ಕೋಚ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಆದರೆ ತಂಡದ ಪ್ರದರ್ಶನದಲ್ಲಿ ಬದಲಾವಣೆ ಕಂಡುಬರುತ್ತಿಲ್ಲ. ಇಂಗ್ಲೆಂಡ್‌ನ ಸ್ಟೀಫನ್‌ ಕಾನ್ಸ್‌ಟಾಂಟಿನ್‌ 2002ರಿಂದ 2005ರ ವರೆಗೆ ಕೋಚ್‌ ಆಗಿದ್ದರು. ಬಳಿಕ 2015ರಿಂದ 2019ರ ವರೆಗೆ ಮತ್ತೆ ಭಾರತದ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ಕೋಚ್‌ ಆಗಿ ನೇಮಕಗೊಂಡ ಕ್ರೊವೇಷಿಯಾದ ಇಗೊರ್‌ ಸ್ಟಿಮಾಕ್‌ ಭಾರತ ತಂಡವನ್ನು ಉನ್ನತಿಯತ್ತ ಕೊಂಡೊಯ್ಯುವ ಪಣ ತೊಟ್ಟಿದ್ದರು. ಆದರೆ ಎಐಎಫ್‌ಎಫ್‌ ವಿರುದ್ಧ ಬಹಿರಂಗವಾಗಿ ಕಿಡಿಕಾರುತ್ತಿದ್ದ ಅವರನ್ನು, ಕಳೆದ ವರ್ಷ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಸದ್ಯ ಸ್ಪೇನ್‌ನ ಮನೋಲೋ ಮಾರ್ಕೆಜ್‌ ಭಾರತದ ಕೋಚ್‌. ಇವರ ಅವಧಿಯಲ್ಲಿ ಭಾರತ ಆಡಿದ 8 ಪಂದ್ಯಗಳಲ್ಲಿ ಗೆದ್ದಿದ್ದು 1ರಲ್ಲಿ ಮಾತ್ರ.

ಕರ್ನಾಟಕ ಫುಟ್ಬಾಲ್‌ ಬಗ್ಗೆ ಕೇಳುವವರೇ ಇಲ್ಲ!

ದೇಶದ ಫುಟ್ಬಾಲ್‌ ಶೋಚನೀಯ ಪರಿಸ್ಥಿತಿ ತಲುಪಿದ್ದರೆ, ಕರ್ನಾಟಕದಲ್ಲಂತೂ ಫುಟ್ಬಾಲ್‌ನ ಅವಸ್ಥೆ ಬಗ್ಗೆ ಕೇಳುವವರೇ ಇಲ್ಲ ಎಂಬಂತಾಗಿದೆ. ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆಯ ಅಧೀನದಲ್ಲಿ, ಬೆಂಗಳೂರಿನಲ್ಲಿರುವ ಫುಟ್ಬಾಲ್‌ ಕ್ರೀಡಾಂಗಣವನ್ನೊಮ್ಮೆ ನೋಡಿದರೆ ಸಾಕು. ಇಲ್ಲಿನ ಫುಟ್ಬಾಲ್‌ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದು ಗೊತ್ತಾಗುತ್ತದೆ. ಒಂದೆಡೆ ಕಸ ಕಡ್ಡಿ ತುಂಬಿ ಸ್ಟೇಡಿಯಂ ಗಬ್ಬುನಾರುತ್ತಿದ್ದರೆ, ಗ್ಯಾಲರಿಗಳು ಗಾಂಜಾ ಅಡ್ಡೆಯಾಗಿ ಬದಲಾಗಿದೆ. ಗ್ಯಾಲರಿ, ಮೇಲ್ಚಾವಣಿ, ಡ್ರೆಸ್ಸಿಂಗ್‌ ರೂಮ್‌ನ ಸಿಮೆಂಟ್‌ಗಳು ಕಿತ್ತುಬರುತ್ತಿವೆ. ಶೌಚಾಲಯಗಳಿಗೆ ಕಾಲಿಡಲೂ ಆಗದಂತ ಸ್ಥಿತಿ ಇದೆ.

ರಾಜ್ಯದ ಫುಟ್ಬಾಲ್‌ ವ್ಯವಸ್ಥೆಯೂ ಅಷ್ಟಕ್ಕಷ್ಟೇ. ಕೊನೆ ಬಾರಿ ಕರ್ನಾಟಕದ ಆಟಗಾರರೊಬ್ಬರು ಭಾರತ ತಂಡವನ್ನು ಪ್ರತಿನಿಧಿಸಿದ್ದು 2013ರಲ್ಲಿ. ಅಂದರೆ, ಕಳೆದ 12 ವರ್ಷಗಳಲ್ಲಿ ರಾಜ್ಯದ ಯಾವುದೇ ಆಟಗಾರ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ಹೀಗಾಗಿ ಇಲ್ಲಿನ ಫುಟ್ಬಾಲ್‌ ಬಗ್ಗೆ ಹೇಳಿದರೆಷ್ಟು, ಕೇಳಿದರಷ್ಟು?

ಫುಟ್ಬಾಲ್‌ ಹಿನ್ನಡೆಗೆ ಕಾರಣ

1. ತಳಮಟ್ಟದಲ್ಲಿ ಯುವ ಪ್ರತಿಭೆಗಳಿಗೆ ಸೂಕ್ತ ಬೆಂಬಲವಿಲ್ಲ2. ದೇಶದ ಬಹುತೇಕ ರಾಜ್ಯ ಫುಟ್ಬಾಲ್‌ ಸಂಸ್ಥೆಗಳಲ್ಲಿ ಅವ್ಯವಸ್ಥೆ3. ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಕ್ರೀಡಾಂಗಣ ಕೊರತೆ 4. ಕ್ರಿಕೆಟ್‌ ಬಗೆಗಿನ ಪೋಷಕರ ಒಲವು ಫುಟ್ಬಾಲ್‌ ಮೇಲಿಲ್ಲದಿರುವುದು5. ಜಿಲ್ಲೆ, ರಾಜ್ಯ, ದೇಶದ ತಂಡಕ್ಕೆ ಆಟಗಾರರ ಆಯ್ಕೆ ವೇಳೆ ತಾರತಮ್ಯ6. ಯುವ ಫುಟ್ಬಾಲಿಗರಿಗೆ ವಿದೇಶಿ ಆಟಗಾರರ ಜೊತೆ ಆಡಲು ಅವಕಾಶ ಸಿಗದಿರುವುದು7. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡಕ್ಕೆ ಸೀಮಿತ ಪಂದ್ಯಗಳು.

Read more Articles on