ಸಾರಾಂಶ
ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಬಾಹ್ಯಾಕಾಶ ಯಾನಿಗಳನ್ನು ಹೊತ್ತ ಅಮೆರಿಕದ ಆ್ಸಕ್ಸಿಯೋಂ ನೌಕೆ ಗುರುವಾರ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ (ಐಎಸ್ಎಸ್) ಕೇಂದ್ರ ಪ್ರವೇಶಿಸಿದೆ
ನವದೆಹಲಿ: ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಬಾಹ್ಯಾಕಾಶ ಯಾನಿಗಳನ್ನು ಹೊತ್ತ ಅಮೆರಿಕದ ಆ್ಸಕ್ಸಿಯೋಂ ನೌಕೆ ಗುರುವಾರ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ (ಐಎಸ್ಎಸ್) ಕೇಂದ್ರ ಪ್ರವೇಶಿಸಿದೆ. ಇದರೊಂದಿಗೆ ಮೊದಲ ಬಾರಿಗೆ ಭಾರತದ ಗಗನಯಾನಿಯೊಬ್ಬರು ಐಎಸ್ಎಸ್ ಪ್ರವೇಶಿಸಿದ ಇತಿಹಾಸ ನಿರ್ಮಾಣವಾಗಿದೆ.
ಉಪಗ್ರಹ ಉಡ್ಡಯನ ಸೇರಿದಂತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಹೊಸ ಕನಸುಗಳಿಗೆ ಗುರುವಾರದ ಘಟನೆ ಮತ್ತಷ್ಟು ನೀರೆರೆದಿದೆ. ಶೀಘ್ರವೇ ಭಾರತ ಸ್ವಯಂ ಗಗನಯಾನ ಮತ್ತು ಮುಂದಿನ ದಶಕಗಳಲ್ಲಿ ತನ್ನದೇ ಆದ ಪ್ರತ್ಯೇಕ ಬಾಹ್ಯಾಕಾಶ ಕೇಂದ್ರ ನಿರ್ಮಾಣದ ಗುರಿ ಹೊಂದಿದೆ. ಇದೆಲ್ಲದಕ್ಕೂ ಗುರುವಾರದ ಬೆಳವಣಿಗೆ ಭಾರೀ ನೆರವು ನೀಡಲಿದೆ.
ಹೊಸ ಇತಿಹಾಸ:
ಆ್ಯಕ್ಸಿಯೋಂ ನೌಕೆ ಹೊತ್ತ ಸ್ಪೇಸ್ ಕಂಪನಿಯ ರಾಕೆಟ್ ಬುಧವಾರ ಬಾಹ್ಯಾಕಾಶಕ್ಕೆ ನೆಗೆದಿತ್ತು. ನೌಕೆಯನ್ನು ನಿಗದಿತ ಕಕ್ಷೆಗೆ ರವಾನಿಸಿದ ಬಳಿಕ ರಾಕೆಟ್ ಭೂಮಿಗೆ ಮರಳಿತ್ತು. ಹೀಗೆ ಬಾಹ್ಯಾಕಾಶಕ್ಕೆ ನೆಗೆದು ವಿವಿಧ ಕಕ್ಷೆಗಳಲ್ಲಿ ಸಂಚರಿಸಿದ್ದ ನೌಕೆ 28 ಗಂಟೆಗಳ ಪ್ರಯಾಣದ ಬಳಿಕ ಗುರುವಾರ ಸಂಜೆ 4 ಗಂಟೆಗೆ ಐಎಸ್ಎಸ್ ಜತೆ ಜೋಡಣೆಯಾಗಿದೆ. ಬಳಿಕ ಎರಡು ಗಂಟೆ ನಡೆದ ಪ್ರಕ್ರಿಯೆಗಳ ಬಳಿಕ 6 ಗಂಟೆ ವೇಳೆಗೆ ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಐಎಸ್ಎಸ್ನೊಳಗೆ ಪ್ರವೇಶಿದ್ದಾರೆ. ಈ ವೇಳೆ ಒಳಗಿದ್ದ ಯಾತ್ರಿಗಳು, ನಾಲ್ವರನ್ನೂ ಆಲಂಗಿಸಿ ಸಂಭ್ರಮದಿಂದ ಬರ ಮಾಡಿಕೊಂಡಿದ್ದಾರೆ. ಶುಕ್ಲಾ ಐಎಸ್ಎಸ್ ಪ್ರವೇಶಿಸಿದ 634ನೇ ವ್ಯಕ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಪ್ರವೇಶದ ಬೆನ್ನಲ್ಲೇ ಜೈ ಹಿಂದ್, ಜೈ ಭಾರತ್ ಎಂಬ ಘೋಷಣೆಯನ್ನು ಶುಕ್ಲಾ ಮೊಳಗಿಸಿದ್ದಾರೆ.
ಯಾರ್ಯಾರು ಪ್ರಯಾಣ:
ಮಿಷನ್ ಕಮಾಂಡರ್ ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್ನ ಸಾಲ್ವೋಜ್ ಮತ್ತು ಹಂಗೇರಿಯ ಕಾಪು, ಶುಕ್ಲಾ ಜೊತೆ ಐಎಸ್ಎಸ್ ಪ್ರವೇಶಿಸಿದರು.
41 ವರ್ಷದ ಬಳಿಕ.
ಈ ಹಿಂದೆ 1984ರಲ್ಲಿ ಭಾರತದ ರಾಕೇಶ್ ಶರ್ಮಾ, ರಷ್ಯಾದ ಸೊಯೆಜ್ ನೌಕೆ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ ಐಎಸ್ಎಸ್ಗೆ ತೆರಳಿರಲಿಲ್ಲ. ಅವರು ಬಾಹ್ಯಾಕಾಶದಲ್ಲೇ 7 ದಿನಗಳ ಕಾಲ ಇದ್ದು ಬಂದಿದ್ದರು. ಆದರೆ ಇದೀಗ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಸಹಯೋಗದೊಂದಿಗೆ ಭಾರತವು ತನ್ನ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಂಭಾಶು ಶುಕ್ಲಾ ಅವರನ್ನು ಐಎಸ್ಎಸ್ಗೆ ಕಳುಹಿಸಿಕೊಟ್ಟಿದೆ. ಗುರುವಾರದಿಂದ 14 ದಿನಗಳ ಕಾಲ ಐಎಸ್ಎಸ್ನಲ್ಲಿ ಇರುವ ಶುಕ್ಲಾ ಈ ಅವಧಿಯಲ್ಲಿ 7 ಸಂಶೋಧನೆಗಳನ್ನು ನಡೆಸಲಿದ್ದಾರೆ. ಈ ಉಡ್ಡಯನಕ್ಕಾಗಿ ಭಾರತ ಅಂದಾಜು 500 ಕೋಟಿ ರು. ವೆಚ್ಚ ಮಾಡಿದೆ.
ಪೋಷಕರ ಸಂಭ್ರಮ:
ಶುಕ್ಲಾ ಐಎಸ್ಎಸ್ ಪ್ರವೇಶವನ್ನು ಅವರ ಕುಟುಂಬ ಸದಸ್ಯರು ಲಖನೌದಲ್ಲಿ ವೀಕ್ಷಿಸಿದರೆ ಉಳಿದಂಂತೆ ದೇಶವ್ಯಾಪಿ ಕೋಟ್ಯಂತರ ಜನರು ಈ ಸಂಭ್ರಮ ಕ್ಷಣಗಳನ್ನು ಕಣ್ತುಂಬಿಕೊಂಡರು.
ಹೆಸರುಕಾಳು, ಮೆಂತ್ಯವೇ ಏಕೆ ಬಳಕೆ
ಧಾರವಾಡ ಕೃಷಿ ವಿವಿಯಿಂದ ಹೆಸರುಕಾಳು ಹಾಗೂ ಮೆಂತೆ ಒಣ ಬೀಜಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗಿದೆ. ಗಗನಯಾತ್ರಿಗಳು ಹೆಚ್ಚಾಗಿ ಬಾಹ್ಯಾಕಾಶದಲ್ಲಿ ಪೌಷ್ಟಿಕಾಂಶದ ಕೊರತೆ ಎದುರಿಸುತ್ತಾರೆ. ಹೆಸರುಕಾಳು ಹೆಚ್ಚಿನ ಪೌಷ್ಟಿಕಾಂಶ ಹೊಂದಿದ್ದು, ಅರೆ-ಶುಷ್ಕ ಪರಿಸ್ಥಿತಿಗಳಲ್ಲಿ ಬೆಳೆಯುತ್ತದೆ. ಬಾಹ್ಯಾಕಾಶ ಕೃಷಿಗೂ ಸೂಕ್ತವಾಗಿದೆ. ಮೆಂತೆ ರೋಗನಿರೋಧಕ ಶಕ್ತಿ ಸೇರಿದಂತೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಜೊತೆಗೆ ಇವು ಅತಿ ಶೀಘ್ರದಲ್ಲಿ ಮೊಳಕೆ ಒಡೆಯುವ ಕಾರಣ ಪ್ರಯೋಗಕ್ಕೆ ಇವುಗಳನ್ನೇ ಬಳಸಲಾಗಿದೆ. ಶುಭಾಂಶು ಶುಕ್ಲಾ ಈ ಬೀಜಗಳಿಗೆ ನೀರು ಸೇರಿಸಿ, 2ರಿಂದ 4 ದಿನಗಳಲ್ಲಿ ಮೊಳಕೆಯೊಡೆಯವಂತೆ ಮಾಡುತ್ತಾರೆ. ನಂತರ, ಬೀಜಗಳನ್ನು ಫ್ರೀಜ್ ಮಾಡಿ ಭೂಮಿಗೆ ಕಳಿಸುತ್ತಾರೆ. ಅವುಗಳು ಹಿಂತಿರುಗಿದ ನಂತರ, ಕೃಷಿ ವಿವಿಯಲ್ಲಿ ಮೊಳಕೆಯ ಪ್ರಮಾಣ, ಅವುಗಳ ಪೋಷಕಾಂಶ ಗುಣಮಟ್ಟ, ಫೈಟೊಹಾರ್ಮೋನ್ ಡೈನಾಮಿಕ್ಸ್ನಲ್ಲಿನ ಬದಲಾವಣೆಗಳು ಮತ್ತು ಬಾಹ್ಯಾಕಾಶ ಪರಿಸ್ಥಿತಿಗಳಿಗೆ ಹೊಂದುಕೊಳ್ಳುವ ಗುಣಗಳ ಕುರಿತು ಅಧ್ಯಯನ ಮಾಡಲಾಗುತ್ತದೆ.