ಸಾರಾಂಶ
ಲಖನೌ: ತಮ್ಮೂರಿನ ಹುಡುಗ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಹಾರಿದ ದೃಶ್ಯವನ್ನು ಕಣ್ತುಂಬಿಕೊಂಡ ಲಖನೌ ಜನ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ. ಶುಕ್ಲಾರ ಹೆತ್ತವರು ಆನಂದಬಾಷ್ಟ ಸುರಿಸಿ ಹೆಮ್ಮೆಪಟ್ಟಿದ್ದಾರೆ.
ಶುಕ್ಲಾ ಅವರ ಹೆತ್ತವರು ಹಾಗೂ ಸಹೋದರಿ ಸಿಎಂಸ್ ಕಾನ್ಪುರದ ವರ್ಲ್ಡ್ ಯೂನಿಟಿ ಕನ್ವೆನ್ಷನ್ ಸೆಂಟರ್(ಡಬ್ಲ್ಯುಯುಸಿಸಿ)ನ ಸಭಾಂಗಣದಲ್ಲಿ ಉಡ್ಡಯನದ ನೇರಪ್ರಸಾರವನ್ನು ವೀಕ್ಷಿಸಿದರು. ಈ ವೇಳೆ ಶುಕ್ಲಾ ಅವರ ತಂದೆ ಶಂಭು ಶುಕ್ಲಾ ಮಾತನಾಡಿ, ‘ಇದು ನಮಗೆ ಮಾತ್ರವಲ್ಲ, ದೇಶದ ಪಾಲಿಗೂ ಅದ್ಭುತ ಕ್ಷಣ. ನನಗೆ ಈಗ ಪದಗಳೇ ಸಿಗುತ್ತಿಲ್ಲ. ನನ್ನ ಆಶೀರ್ವಾದ ಮಗನ ಮೇಲೆ ಯಾವಾಗಲೂ ಇರುತ್ತದೆ’ ಎಂದು ಶುಭ ಹಾರೈಸಿದ್ದಾರೆ.
ತಾಯಿ ಆಶಾ ಪ್ರತಿಕ್ರಿಯಿಸಿ, ‘ನನಗೆ ಸಂತೋಷವಾಗಿದೆ. ಇದನ್ನು ಬಿಟ್ಟು ಹೇಳಲು ಏನೂ ಇಲ್ಲ. ಅವನು ಯಶಸ್ವಿಯಾಗುತ್ತಾನೆಂದು ನನಗೆ ಗೊತ್ತು. ಅವನು ಹಿಂತಿರುಗುವುದನ್ನು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಆ ಬಳಿಕ ಅವನು ನಮ್ಮೊಂದಿಗೆ ಇರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ’ ಎಂದು ಹೆಮ್ಮೆಯ ಮಾತುಗಳಾಡಿದ್ದಾರೆ. ಅತ್ತ ಲಖನೌ ನಗರದಾದ್ಯಂತ ಶುಕ್ಲಾ ಅವರಿಗೆ ಶುಭ ಕೋರುವ ಪೋಸ್ಟರ್ಗಳದ್ದೇ ರಾಜ್ಯಭಾರ ಶುರುವಾಗಿದೆ.
ಶಾಲೆಯಲ್ಲೂ ಸಂಭ್ರಮ:
ಶುಕ್ಲಾ ಅವರು ವಿದ್ಯಾಭ್ಯಾಸ ಮಾಡಿದ ಸಿಎಂಎಸ್ನ ಆವರಣವನ್ನು ಬಾಹ್ಯಾಕಾಶ ಕೇಂದ್ರದಂತೆ ಸಜ್ಜುಗೊಳಿಸಲಾಗಿದ್ದು, ‘ಬ್ಯೋಮೋತ್ಸವ’ವನ್ನು ಆಚರಿಸಲಾಯಿತು. ಅಂತೆಯೇ, ದಿನವಿಡೀ ಆಕ್ಸಿಯೋಂ ಮಿಷನ್ನ ನೇರಪ್ರಸಾರವನ್ನು ಆಯೋಜಿಸಲಾಗಿದ್ದು, ಐಎಸ್ಎಸ್ ಕುಪೋಲಾ ಮಾಡ್ಯೂಲ್ನ ಪ್ರತಿಕೃತಿ, ಡಿಫೈ ಗ್ರಾವಿಟಿ ಹೆಸರಿನ ಫೋಟೋ ಬೂತ್, ಟೆಲೆಸ್ಕೋಪ್ ಮತ್ತು ಸಿಮ್ಯುಲೇಟೆಡ್ ಮಿಷನ್ ನಿಯಂತ್ರಣ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ.
ಗಗನಯಾನಿ ಶುಕ್ಲಾ ಅವರು 1985ರಲ್ಲಿ ಲಖನೌನಲ್ಲಿ ಜನಸಿದ್ದು, 12ನೇ ತರಗತಿಯ ವರೆಗೆ ಸಿಎಂಎಸ್ನಲ್ಲಿ ವ್ಯಾಸಂಗ ಮಾಡಿದ್ದರು. ಬಳಿಕ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ಪದವಿ ಪಡೆದು 2006 ರಲ್ಲಿ ಭಾರತೀಯ ವಾಯುಪಡೆಗೆ ನಿಯೋಜನೆಗೊಂಡರು. ಯುದ್ಧ ವಿಮಾನಗಳಲ್ಲಿ 2,000 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವ ಹೊಂದಿರುವ ಅವರನ್ನು 2019ರಲ್ಲಿ ಭಾರತದ ಗಗನಯಾನ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಯಿತು. ಅವರೀಗ ಆಕ್ಸಿಯೋಂ-4ರ ಪೈಲಟ್ ಆಗಿದ್ದಾರೆ.