ಕೇಂದ್ರದ ವಿರುದ್ಧ ಜೆನ್‌ ಜೀಗಳ ನೀಟ್‌ ಹೋರಾಟ ಯಶ ಕಂಡ ಬೆನ್ನಲ್ಲೇ, ಇದೀಗ ಕಾಂಗ್ರೆಸ್‌ ಆಡಳಿತವಿರುವ ತೆಲಂಗಾಣ ರಾಜ್ಯ ಯುವ ಸಮೂಹವನ್ನು ಸೆಳೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ಹೈದರಾಬಾದ್‌ : ಕೇಂದ್ರದ ವಿರುದ್ಧ ಜೆನ್‌ ಜೀಗಳ ನೀಟ್‌ ಹೋರಾಟ ಯಶ ಕಂಡ ಬೆನ್ನಲ್ಲೇ, ಇದೀಗ ಕಾಂಗ್ರೆಸ್‌ ಆಡಳಿತವಿರುವ ತೆಲಂಗಾಣ ರಾಜ್ಯ ಯುವ ಸಮೂಹವನ್ನು ಸೆಳೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ‘ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಸ್ಪರ್ಧಿಸುವ ಕನಿಷ್ಠ ವಯೋಮಿತಿಯನ್ನು 25 ವರ್ಷದಿಂದ 21 ವರ್ಷಕ್ಕಿಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಗೊತ್ತುವಳಿ ಅಂಗೀಕರಿಸಲು ತೆಲಂಗಾಣ ಸರ್ಕಾರ ವಿಶೇಷ ಅಧಿವೇಶನ ಕರೆಯಲಿದೆ’ ಎಂದು ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ ತಿಳಿಸಿದ್ದಾರೆ.

ಮೊಂಬತ್ತಿ ಮೆರವಣಿಗೆಯಲ್ಲಿ ಮಾತನಾಡಿದ ರೆಡ್ಡಿ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಶನಿವಾರ ರಾತ್ರಿ ಹೈದರಾಬಾದ್‌ನಲ್ಲಿ ನಡೆದ ಮೊಂಬತ್ತಿ ಮೆರವಣಿಗೆಯಲ್ಲಿ ಮಾತನಾಡಿದ ಅವರು ಈ ವಿಚಾರ ತಿಳಿಸಿದರು.

ಲೋಕಸಭೆಯಲ್ಲಿ ಅ‍ವರ ಸಂಖ್ಯೆ ಶೇ.1ಕ್ಕಿಂತಲೂ ಕಡಿಮೆ

ಜೆನ್‌ಜೀಗಳು ದೇಶದ ಜನಸಂಖ್ಯೆಯ ಶೇ.30ರಷ್ಟಿದ್ದರೂ ಲೋಕಸಭೆಯಲ್ಲಿ ಅ‍ವರ ಸಂಖ್ಯೆ ಶೇ.1ಕ್ಕಿಂತಲೂ ಕಡಿಮೆ ಇದೆ. ಒಂದು ವೇಳೆ 21 ವರ್ಷದ ಮೇಲಿನ ಯುವಕರು ಸಚಿವರಾದರೆ ದೇಶದ ಭವಿಷ್ಯ ಬದಲಾಗಿದೆ ಎಂದ ಅವರು, ನಾವು ಆಗಸ್ಟ್‌ ಮೊದಲ ವಾರ ವಿಶೇಷ ಅಧಿವೇಶನ ಕರೆದು ಅಸೆಂಬ್ಲಿ ಮತ್ತು ಲೋಕಸಭೆಗೆ ನಡೆಯುವ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಗಿರುವ ಕನಿಷ್ಠ ವಯೋಮಿತಿಯನ್ನು 25ರಿಂದ 21 ವರ್ಷಕ್ಕಿಳಿಸುವ ಸಂಬಂಧ ನಿರ್ಣಯ ಕೈಗೊಳ್ಳಲಿದ್ದೇವೆ. ಬಳಿಕ ಆ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಿದ್ದೇವೆ ಎಂದು ತಿಳಿಸಿದರು.

ಸಂವಿಧಾನ ತಿದ್ದುಪಡಿ ಮಾಡಿ ಕನಿಷ್ಠ 21 ವರ್ಷದವರಿಗೆ ಲೋಕಸಭೆ, ವಿಧಾನಸಭೆಗೆ ಸ್ಪರ್ಧಿಸಲು ಸಂವಿಧಾನ ತಿದ್ದುಪಡಿ ಮಾಡಿ ಅವಕಾಶ ಮಾಡಿಕೊಡುವ ಅಗತ್ಯವಿದೆ ಎಂದು ಹೇಳಿದರು.