ಸಾರಾಂಶ
ಅಹಮದಾಬಾದ್: ಕೆಲ ಸಮಯದ ಹಿಂದಷ್ಟೇ ಮಂಗಳ ಗ್ರಹದಲ್ಲಿ ಪತ್ತೆ ಮಾಡಲಾದ ಮೂರು ಗುಂಡಿಗಳಿಗೆ ಭಾರತದ ವಿಜ್ಞಾನಿ ದೇವೇಂದ್ರ ‘ಲಾಲ್’ ಹಾಗೂ ಉತ್ತರಪ್ರದೇಶ ಮತ್ತು ಬಿಹಾರದ ಹಳ್ಳಿಗಳಾದ ಮುರ್ಸಾನ್ ಹಾಗೂ ಹಿಲ್ಸಾ ಎಂಬ ಹೆಸರನ್ನು ನಾಮಕರಣ ಮಾಡಲಾಗಿದೆ.
2021ರಲ್ಲಿ ಅಹಮದಾಬಾದ್ನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ (ಪಿಆರ್ಎಲ್)ನ ವಿಜ್ಞಾನಿಗಳನ್ನು ಒಳಗೊಂಡ ತಂಡ ಮಂಗಳಗ್ರಹದಲ್ಲಿ ಮೂರು ಗುಂಡಿ ಪತ್ತೆ ಮಾಡಿತ್ತು. ಅದಕ್ಕೆ ಪಿಆರ್ಎಲ್ನ ಮಾಜಿ ಮುಖ್ಯಸ್ಥ, ಖ್ಯಾತ ವಿಜ್ಞಾನಿ ದೇವೇಂದ್ರ ಲಾಲ್ ಹೆಸರಿಡುವಂತೆ ಇಂಟರ್ನ್ಯಾಷನಲ್ ಆಸ್ಟ್ರೋನಾಮಿಕಲ್ ಯೂನಿಯನ್ಗೆ ಶಿಫಾರಸು ಮಾಡಲಾಗಿತ್ತು.
ಅದೇ ರೀತಿ ಪಿಆರ್ಎಲ್ನ ಹಾಲಿ ಮುಖ್ಯಸ್ಥ ಡಾ.ಅನಿಲ್ ಭಾರದ್ವಾಜ್ ಅವರ ಹುಟ್ಟೂರು ‘ಮುರ್ಸಾನ್’ ಇಡುವಂತೆ ಹಾಗೂ, ಗುಂಡಿಗೆ ಮಂಗಳನ ಅನ್ವೇಷಣೆ ಕಾರ್ಯಕ್ರಮದಲ್ಲಿದ್ದ ಮತ್ತೋರ್ವ ವಿಜ್ಞಾನಿ ರಾಜೀವ್ ರಂಜನ್ ಭಾರ್ತಿ ಅವರ ಹುಟ್ಟೂರು ‘ಹಿಲ್ಸಾ’ ಹೆಸರು ನಾಮಕರಣ ಮಾಡುವಂತೆ ಶಿಫಾರಸು ಮಾಡಲಾಗಿತ್ತು. ಅದಕ್ಕೆ ಇದೀಗ ಅನುಮೋದನೆ ನೀಡಲಾಗಿದೆ.
ದೇವೇಂದ್ರ ಲಾಲ್ ಅವರು ಕಾಸ್ಮಿಕ್ ಕಿರಣಗಳ ಕುರಿತು ಅಧ್ಯಯನ ಮಾಡಿದ ವಿಜ್ಞಾನಿಯಾಗಿದ್ದರು. ಇವರು 1972-1983ರವರೆಗೆ ಪಿಆರ್ಎಲ್ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಇದು ಯಾವ ಗುಂಡಿ?
ಲಾಲ್ ಗುಂಡಿಯು 65 ಕಿಲೋಮೀಟರ್ ಸುತ್ತಳತೆಯನ್ನು ಹೊಂದಿದ್ದು, ಇದರ ಮೇಲ್ಮೈ 45 ಮೀಟರ್ಗಳು ಲಾವಾ ರಸದಿಂದ ರಚಿಸಲ್ಪಟ್ಟಿದೆ. 45 ಮೀಟರ್ ಆಳದಲ್ಲಿ ನೀರಿನ ಕುರುಹುಗಳು ಪತ್ತೆಯಾಗಿದೆ. ಇದಕ್ಕೆ ಪೂರಕವಾಗಿ ನೀರಿನ ಕುರುಹು ಇರುವ ಮಣ್ಣಿನ ಪದರಗಳು ನಾಸಾ ಸಂಸ್ಥೆಯ ಶರದ್ ಎಂಬ ವಾಹಕಕ್ಕೆ ಸಿಕ್ಕಿದೆ. ಲಾಲ್ ಗುಂಡಿಯ ಅಕ್ಕ ಪಕ್ಕದಲ್ಲಿಯೇ ಮುರ್ಸಾನ್ ಹಾಗೂ ಹಿಲ್ಸಾ ಗುಂಡಿಗಳಿದ್ದು, ಇವು10 ಕಿಲೋಮೀಟರ್ ಸುತ್ತಳತೆ ಹೊಂದಿದೆ.