ಸಾರಾಂಶ
ಬೊಡೇಲಿ (ಗುಜರಾತ್): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡು ಮತ್ತು ರಾಯ್ಬರೇಲಿ ಕ್ಷೇತ್ರಗಳಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ಕಾಂಗ್ರೆಸ್ ಭದ್ರಕೋಟೆಯಾದ ರಾಯ್ಬರೇಲಿಯಲ್ಲಿ ದೊಡ್ಡ ಅಂತರದಲ್ಲಿ ಸೋಲಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ.
ಇಲ್ಲಿನ ಬುಡಕಟ್ಟು ಜನಾಂಗದ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಚುನಾವಣೆಯನ್ನು ಎದುರಿಸುತ್ತಿದೆ. 2019ರ ಚುನಾವಣೆಯಲ್ಲೂ ಅಮೇಠಿ ಮತ್ತು ವಯನಾಡಿನಿಂದ ಸ್ಪರ್ಧೆ ಮಾಡಿದ್ದರು. ಆದರೆ ಅಮೇಠಿಯಲ್ಲಿ ಸೋಲನ್ನು ಕಂಡಿದ್ದಾರೆ. ಅದೇ ರೀತಿ ಈ ಬಾರಿ ವಯನಾಡಿನಲ್ಲಿ ಸೋಲಬಹುದೆಂಬ ಭೀತಿಯಿಂದ ರಾಯ್ಬರೇಲಿಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದರು.
‘ರಾಹುಲ್ ಬಾಬಾ ಸಮಸ್ಯೆ ಇರುವುದು ನಿಮ್ಮಲ್ಲೇ ಹೊರತು ಸೀಟುಗಳ ಹಂಚಿಕೆಯಲ್ಲಿ ಅಲ್ಲ. ನೋಡ್ತಾ ಇರಿ ಈ ಬಾರಿ ರಾಯ್ಬರೇಲಿಯಲ್ಲಿ ಭಾರಿ ಅಂತರದಲ್ಲಿ ಸೋಲಲಿದ್ದೀರಿ’ ಎಂದು ಶಾ ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುತ್ತಾರೆ ಎಂದು ಇಂಡಿಯಾ ಕೂಟ ಮತ್ತು ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ. ಮೋದಿ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುವುದಿಲ್ಲ ಹೇಳಿದರು.
ಇಂಡಿಯಾ ಕೂಟ ಕೆಲವು ರಾಜ್ಯಗಳಲ್ಲಿ ದಲಿತರು, ಬುಡಕಟ್ಟುಗಳು ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾದ ಕೋಟಾವನ್ನು ಲೂಟಿ ಮಾಡಿ ಮುಸ್ಲೀಮರಿಗೆ ನೀಡುತ್ತಿದ್ದಾರೆ ಎಂದೂ ಶಾ ಆರೋಪಿಸಿದರು.