ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಹಾಗೂ ಆರ್ಥಿಕ ರಾಜಧಾನಿಯ ಪ್ರಮುಖ ಸ್ಥಳಗಳಲ್ಲಿ ಉಗ್ರದಾಳಿಗೆ ಸಂಚು ರೂಪಿಸಿದ್ದ 9 ಶಂಕಿತ ಉಗ್ರರನ್ನು ದೆಹಲಿ ಪೊಲೀಸರ ವಿಶೇಷ ಸೆಲ್ ಬಂಧಿಸಿದ್ದು, ಸಂಭವಿಸಬಹುದಾಗಿದ್ದ ಬಹುದೊಡ್ಡ ಅನಾಹುತವನ್ನು ತಪ್ಪಿಸಿದೆ.
ಬಂಧಿತರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಹಾಗೂ ಭೂಗತಲೋಕದ ಡಾನ್ ದಾವೂದ್ ಇಬ್ರಾಹಿಂ ಜತೆ ನಂಟು ಹೊಂದಿದ್ದು, ಇವರ ಮೇಲೆ ಬಹುಕಾಲದಿಂದ ಕಣ್ಣಿಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಗ್ರ ದಾಳಿ ನಡೆವ ಬಗ್ಗೆ ಭದ್ರತಾ ಇಲಾಖೆಗೆ ಮಾಹಿತಿ ಲಭಿಸಿ, ಆ ಬಗ್ಗೆ ಅವರು ಸಾರ್ವಜನಿಕರನ್ನು ಎಚ್ಚರಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆಯಾಗಿದೆ.
ಸೆರೆಸಿಕ್ಕವರಲ್ಲಿ ದೆಹಲಿ, ಮುಂಬೈ, ಪಂಜಾಬ್ ನಿವಾಸಿಗಳ ಜತೆ ವಿದೇಶಿಗರೂ ಇದ್ದಾರೆ. ಅವರಿಂದ ಭಾರೀ ಪ್ರಮಾಣದ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಇವರಿಗೆ ಆರ್ಥಿಕ ನೆರವು ಹರಿದುಬರುತ್ತಿದ್ದ ಮಾರ್ಗ ಹಾಗೂ ಅದರ ಹಿಂದಿರುವ ಮಾರ್ಗದರ್ಶಕರ ಪತ್ತೆಗೆ ವಿಚಾರಣೆ ನಡೆಸಲಾಗುತ್ತಿದೆ.ಏನೇನು ಗುರಿ?:
ಜನಸ್ತೋಮವಿರುವ ವಿಮಾನ ನಿಲ್ದಾಣ, ರೈಲು ನಿಲ್ದಾಣದಂತಹ ಪ್ರದೇಶಗಳು, ಪರಮಾಣು, ವಿದ್ಯುತ್ ಸ್ಥಾವರಗಳು, ಧಾರ್ಮಿಕ ಸ್ಥಳಗಳು, ಹಾಗೂ ಭದ್ರತಾ ಸಿಬ್ಬಂದಿ ಬಂಧಿತರ ಗುರಿಯಾಗಿದ್ದರು ಎಂದು ತಿಳಿದುಬಂದಿದೆ.
- ವಿಮಾನ ನಿಲ್ದಾಣ, ರೈಲು ನಿಲ್ದಾಣ, ಅಣು ವಿದ್ಯುತ್ ಸ್ಥಾವರ, ಯೋಧರು ಇವರ ಗುರಿ
- ಬಹುಕಾಲದಿಂದ ಇವರ ಮೇಲೆ ಭದ್ರತಾ ಪಡೆ ಕಣ್ಣು. ಕೊನೆಗೂ ಇವರು ಅಂದರ್
- ಬಂಧಿತರಲ್ಲಿ ದೆಹಲಿ, ಮುಂಬೈ, ಪಂಜಾಬ್ ನಿವಾಸಿಗಳ ಜತೆ ವಿದೇಶಿಗರೂ ಉಂಟು
- ಅವರಿಂದ ಭಾರೀ ಪ್ರಮಾಣದ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳು ವಶಕ್ಕೆ