- ಕೇಂದ್ರವಷ್ಟೇ ಅಲ್ಲ, ರಾಜ್ಯಗಳೂ ಹೊಣೆಗಾರ
- ಈ ಘೋರ ಪಾಪಕ್ಕೆ ಕಠಿಣ ಶಿಕ್ಷೆ ಆಗಬೇಕು- ಹೀಗೆಂದು ಮೋದಿ ಹೇಳಿದ್ದಾರೆ: ಸಚಿವ ರಿಜಿಜು
----- ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲು ಯಾರಿಗೂ ಬಿಡಲ್ಲ । ಸೋರಿಕೆ ಮಾಡಿದವರ ವಿರುದ್ಧ ಕಠಿಣ ಕ್ರಮ
- ಪರೀಕ್ಷಾ ಅಕ್ರಮ ತಡೆಯುವುದು ದೇಶದ ಹೊಣೆ । ಇದು ಕೇವಲ ಕೇಂದ್ರಕ್ಕೆ ಮಾತ್ರ ಸಂಬಂಧಿಸಿದ್ದಲ್ಲ । ರಾಜಕೀಯ ಸಲ್ಲ
- ಮಕ್ಕಳನ್ನು ಪ್ರಚೋದಿಸಬೇಡಿ, ಸರಿ ದಾರಿ ತೋರಿಸಿ । ಭವಿಷ್ಯದಲ್ಲಿ ಇಂಥ ಅಕ್ರಮ ತಡೆಯಲು ಸರ್ಕಾರ ಬದ್ಧ: ಪ್ರಧಾನಿ
=--ಪಿಟಿಐ ನವದೆಹಲಿನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಬೃಹತ್ ಪ್ರತಿಭಟನೆ ಮತ್ತು ಈ ವೇಳೆ ನಡೆದ ಹಿಂಸಾಚಾರಕ್ಕೆ ದೇಶವ್ಯಾಪಿ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿಒರುವ ಪ್ರಧಾನಿ ನರೇಂದ್ರ ಮೋದಿ, ‘ಪ್ರಶ್ನೆ ಪತ್ರಿಕೆ ಸೋರಿಕೆ ಘೋರ ಪಾಪ. ಪರೀಕ್ಷಾ ಅಕ್ರಮ ತಡೆಯುವುದು ದೇಶದ ಹೊಣೆ. ಇದು ಕೇವಲ ಕೇಂದ್ರ ಸರ್ಕಾರದ ಹೊಣೆಯಲ್ಲ. ರಾಷ್ಟ್ರದ ಹಿತದೃಷ್ಟಿಯಿಂದ ಈ ಪಿಡುಗನ್ನು ಎದುರಿಸಲು ರಾಜ್ಯಗಳು ಕೇಂದ್ರದೊಂದಿಗೆ ಕೈಜೋಡಿಸಬೇಕು.’ ಎಂದು ಮಂಗಳವಾರ ಕರೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಸಿದ್ದಾರೆ.
ಅಲ್ಲದೆ, ‘ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲು ಯಾರಿಗೂ ಬಿಡಲ್ಲ. ಸೋರಿಕೆ ಮಾಡಿದವರ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಯುವಕರ ಭವಿಷ್ಯವೇ ನಮ್ಮ ಆದ್ಯತೆ’ ಎಂದೂ ಮೋದಿ ಹೇಳಿದರೆಂದು ರಿಜಿಜು ಮಾಹಿತಿ ನೀಡಿದ್ದಾರೆ.ದೆಹಲಿಯಲ್ಲಿ ನಡೆದ ಎನ್ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಮೋದಿ, ‘ಪ್ರಶ್ನೆಪತ್ರಿಕೆ ಸೋರಿಕೆ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ, ಸರ್ಕಾರ ತುರ್ತಾಗಿ ಕಾರ್ಯನಿರ್ವಹಿಸಿದ್ದು, 13 ಆರೋಪಿಗಳನ್ನು ಬಂಧಿಸಲಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು, ಮರುಪರೀಕ್ಷೆಗೆ ಆದ್ಯತೆ ನೀಡಿ ಅದನ್ನು ಯಶಸ್ವಿಯಾಗಿ ನಡೆಸಲಾಗಿದೆ ಮತ್ತು ಫಲಿತಾಂಶಗಳನ್ನು ವಿಳಂಬವಿಲ್ಲದೆ ಪ್ರಕಟಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಅಕ್ರಮಗಳನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು ಎಂದು ಸಭೆಯ ಬಳಿಕ ರಿಜಿಜು ಸುದ್ದಿಗಾರರಿಗೆ ತಿಳಿಸಿದರು.ಕೈಜೋಡಿಸಿ:‘ಪ್ರಶ್ನೆಪತ್ರಿಕೆ ಸೋರಿಕೆ ರಾಜಕೀಯ ವಿಷಯವಲ್ಲ, ಬದಲಿಗೆ ರಾಷ್ಟ್ರೀಯ ಹಿತಾಸಕ್ತಿಯ ವಿಷಯ. ಯಾವುದೇ ಒಂದು ರಾಜ್ಯಕ್ಕೆ ಅಥವಾ ಕೇಂದ್ರಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಹಾಗಾಗಿ ಭವಿಷ್ಯದಲ್ಲಿ ಇಂಥ ಅಕ್ರಮಗಳನ್ನು ತಡೆಯಲು, ಎಲ್ಲ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಕೈಜೋಡಿಸಬೇಕು’ ಎಂದು ಪ್ರಧಾನಿ ಕರೆ ನೀಡಿದರು.ಸರಿ ದಾರಿ ತೋರಿಸಿ:‘ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಪ್ರಯತ್ನಗಳಾಗುತ್ತಿವೆ. ಅವರನ್ನು ಪ್ರಚೋದಿಸಬೇಡಿ, ಅವರಿಗೆ ಸರಿಯಾದ ದಾರಿ ತೋರಿಸಿ. ತಪ್ಪು ದಾರಿಯಲ್ಲಿ ಸಾಗುವುದು ಸುಲಭ, ಆದರೆ ಸರಿಯಾದ ದಾರಿಗೆ ಮರಳುವುದು ಬಹಳ ಕಷ್ಟ. ಆದರೂ ನಾವು ಅವರನ್ನು ಸರಿಯಾದ ದಾರಿಗೆ ಕರೆತರಲೇಬೇಕು. ಅದು ನಮ್ಮ ಜವಾಬ್ದಾರಿ’ ಎಂದು ಸಂಸದರಿಗೆ ಮೋದಿ ತಿಳಿಸಿದರು.ನೀಟ್ ವೈಫಲ್ಯದ ಕಾರಣ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಕಳೆದ 22 ದಿನಗಳಿಂದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿತ್ತು. ಸೋಮವಾರ ಸಂಸತ್ ಅಧಿವೇಶನದ ಮೊದಲ ದಿನವೇ ಸಂಸತ್ ಚಲೋಗೆ ಕರೆ ನೀಡಿ ಭಾರಿ ಕೋಲಾಹಲ ಸೃಷ್ಟಿಸಿತ್ತು.