ಪುತ್ರಿಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇರಳ ಮಾಜಿ ಸಿಎಂಗೆ ಶಾಕ್ ದಾಳಿ ನಡೆಸಿ ತೆರಳುತ್ತಿದ್ದ ಅಧಿಕಾರಿಗಳ ಮೇಲೆ ಸಿಪಿಎಂ ಕಲ್ಲು, ಮೊಟ್ಟೆ ದಾಳಿ
ಸುದ್ದಿ ತಿಳಿದು ತಿರುವನಂತಪುರದಲ್ಲಿರುವ ವಿಜಯನ್ ಅವರ ಮನೆ ಮುಂದೆ ಜಮಾಯಿಸಿದ್ದ ಸಿಪಿಎಂ ಕಾರ್ಯಕರ್ತರು ಭದ್ರತಾ ಸಿಬ್ಬಂದಿ ಹಾಗೂ ಇ.ಡಿ. ಅಧಿಕಾರಿಗಳಿದ್ದ ವಾಹನಗಳ ಮೇಲೆ ಕಲ್ಲು, ಇಟ್ಟಿಗೆ, ಮೊಟ್ಟೆ ತೂರಾಟ ನಡೆಸಿದ್ದಾರೆ. ಈ ವೇಳೆ ವಾಹನದ ಚಾಲಕ ಗಾಯಗೊಂಡಿದ್ದು, ವಾಹನಕ್ಕೆ ಹಾನಿಯಾಗಿದೆ.ವಿಜಯನ್ ಪುತ್ರಿ ವೀಣಾ ಒಡೆತನದ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿ. ಸಾಫ್ಟ್ವೇರ್ ಕಂಪನಿಗೆ ಕೊಚ್ಚಿನ್ ಮಿನರಲ್ಸ್ ಆ್ಯಂಡ್ ರೂಟೈಲ್ ಲಿ. (ಸಿಎಂಆರ್ಎಲ್)ಸಂಸ್ಥೆ ಅಕ್ರಮವಾಗಿ ಹಣ ವರ್ಗಾಯಿಸಿದ ಪ್ರಕರಣ ಸಂಬಂಧ ಈ ದಾಳಿ ನಡೆದಿದೆ. ಸಿಎಂಆರ್ಎಲ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ. ತನಿಖೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾ ಮಾಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ.ರಾಜಕೀಯ ಸೇಡು: ಈ ದಾಳಿಯು ದೇಶಾದ್ಯಂತ ಪ್ರತಿಪಕ್ಷಗಳ ನಾಯಕರನ್ನು ಹೆಡೆಮುರಿಕಟ್ಟುವ ಬಿಜೆಪಿ ಸರ್ಕಾರ ಪ್ರಯತ್ನದ ಭಾಗವಾಗಿದೆ ಎಂದು ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ. ಈ ರೀತಿಯ ದಾಳಿಗಳು ನನ್ನನ್ನಾಗಲಿ ಅಥವಾ ಸಿಪಿಎಂ ಅನ್ನಾಗಲಿ ದುರ್ಬಲಗೊಳಿಸಲು ಸಾಧ್ಯವಿಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ನಡೆಸುತ್ತಾ ಬರಲಾಗಿದೆ. ಈಗ ನನ್ನ ಮೇಲೆ ನಡೆದಿರುವ ದಾಳಿಯೂ ಆ ತಂತ್ರಗಾರಿಕೆಯ ಭಾಗ ಎಂದು ದೂರಿದ್ದಾರೆ.
==ಏನಿದು ಪ್ರಕರಣ?ಕೊಚ್ಚಿನ್ ಮಿನರಲ್ಸ್ ಆ್ಯಂಡ್ ರೂಟೈಲ್ ಕಂಪನಿಯು ಪಿಣರಾಯಿ ವಿಜಯನ್ ಪುತ್ರಿ ಒಡೆತನದ ಎಕ್ಸಾ ಲಾಜಿಕ್ ಸೊಲ್ಯೂಷನ್ಸ್ ಐಟಿ ಸಂಸ್ಥೆಗೆ 2018-19ರಲ್ಲಿ 1.72 ಕೋಟಿ ರು. ಪಾವತಿಸಿತ್ತು. ಯಾವುದೇ ಸೇವೆ ಬಳಸಿಕೊಳ್ಳದೆಯೂ, ಲಾಜಿಕ್ ಸೊಲ್ಯೋಷನ್ ಖಾತೆಗೆ ಮತ್ತು ವೀಣಾ ಅವರಿಗೆ ನಗದು ರೂಪದಲ್ಲಿ ಹಣ ಪಾವತಿಸಿದ್ದು ಅನುಮಾನಕ್ಕೆ ಕಾರಣವಾಗಿತ್ತು. ಇದು ಲಂಚದ ಹಣವನ್ನು ಬೇರೆ ರೂಪದಲ್ಲಿ ನೀಡಿದ್ದು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.