ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತುಮಿತ್ರಪಕ್ಷ, ವಿಪಕ್ಷ ನಾಯಕರಿಗೆ ಪರೋಕ್ಷ ಎಚ್ಚರಿಕೆಹಳೆ ಸರ್ಕಾರದಿಂದ ₹10 ಲಕ್ಷ ಕೋಟಿ ಸಾಲತಮಿಳುನಾಡಿನ ಬೊಕ್ಕಸ ಸಂಪೂರ್ಣ ಖಾಲಿ
ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುವೆ
ಪಿಟಿಐ ಚೆನ್ನೈ‘ನನ್ನ ಆಡಳಿತದಲ್ಲಿ ನಾನೊಬ್ಬನೇ ‘ಪವರ್ ಸೆಂಟರ್’ ಆಗಿರುತ್ತೇನೆ. ಇಲ್ಲಿ ಒಂದೇ ಒಂದು ಕೇಂದ್ರವಿರುತ್ತದೆ. ಅದು ನನ್ನ ನಾಯಕತ್ವದ ಕೇಂದ್ರ. ಈ ಕಡೆ ಒಂದು ಕೇಂದ್ರ, ಆ ಕಡೆ ಒಂದು ಪವರ್ ಸೆಂಟರ್, ಅಲ್ಲೊಂದು ಮತ್ತೊಂದು - ಇಂತಹ ಯಾವುದೇ ಗುಂಪುಗಳಾಗಲಿ, ಅಧಿಕಾರ ಕೇಂದ್ರಗಳಾಗಲಿ ಇರುವುದಿಲ್ಲ. ನಾನು ಈಗಲೇ ಸ್ಪಷ್ಟವಾಗಿ ಹೇಳುತ್ತಿದ್ದೇನೆ’ ಎಂದು ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಭಾನುವಾರ ಹೇಳಿದ್ದಾರೆ.
ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, ‘ನಾನು ಯಾವುದೇ ರಾಜಮನೆತನದಿಂದ ಬಂದವನಲ್ಲ. ಕಷ್ಟಪಟ್ಟು ದುಡಿದು ಸಿನಿಮಾದಲ್ಲಿ ಗೆಲ್ಲಬೇಕೆಂಬ ಹಂಬಲ ಹೊಂದಿದ್ದ ಸಾಮಾನ್ಯ ಸಹಾಯಕ ಚಲನಚಿತ್ರ ನಿರ್ದೇಶಕನ ಮಗ. ಹಾಗಾಗಿ ಬಡತನ ಮತ್ತು ಹಸಿವಿನ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ನಾನು ನಿಮ್ಮಂತೆಯೇ ಸಾಮಾನ್ಯ ಮನುಷ್ಯ. ನಿಮ್ಮಲ್ಲಿ ಒಬ್ಬ. ನಿಮ್ಮ ಕುಟುಂಬದಲ್ಲಿ ಒಬ್ಬ. ನಾನು ನಿಮ್ಮ ಮಗ ಅಥವಾ ಸೋದರ ಎಂದು ಭಾವಿಸುತ್ತೇನೆ’ ಎಂದರು. ನಾನೇ ಪವರ್ ಸೆಂಟರ್: ‘ಇಲ್ಲಿ ಒಂದೇ ಕೇಂದ್ರವಿರುತ್ತದೆ. ಅದು ನನ್ನ ನಾಯಕತ್ವದ ಕೇಂದ್ರ. ಇಲ್ಲೊಂದು ಕೇಂದ್ರ, ಅಲ್ಲೊಂದು ಕೇಂದ್ರ ಅಸ್ತಿತ್ವದಲ್ಲಿರುವುದಿಲ್ಲ. ನಾನು ಈಗಲೇ ನಿಮಗೆ ಹೇಳುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಟಿವಿಕೆ ಜತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್, ವಿಸಿಕೆ, ಮುಸ್ಲಿಂ ಲೀಗ್ ಹಾಗೂ ಎಡಪಕ್ಷಗಳಿಗೆ ಆಡಳಿತದಲ್ಲಿ ತನ್ನನ್ನು ಮೀರಿ ಮೂಗು ತೂರಿಸದಂತೆ ಪರೋಕ್ಷವಾಗಿ ಎಚ್ಚರಿಸಿದರು. ಹಳೇ ಸರ್ಕಾರದಿಂದ ₹10 ಲಕ್ಷ ಕೋಟಿ ಸಾಲ:‘ತಮಿಳುನಾಡು ಸರ್ಕಾರದ ಪ್ರಸ್ತುತ ಸ್ಥಿತಿಯ ಬಗ್ಗೆ ನಿಮಗೆ ಹೇಳಲೇಬೇಕು. ರಾಜ್ಯವು 10 ಲಕ್ಷ ಕೋಟಿ ರು.ಗಳಿಗೂ ಹೆಚ್ಚಿನ ಸಾಲದ ಹೊರೆ ಹೊತ್ತುಕೊಂಡಿದೆ. ಖಜಾನೆ ಸಂಪೂರ್ಣವಾಗಿ ಖಾಲಿಯಾಗಿದೆ. ಈ ಬಗ್ಗೆ ಶ್ವೇತಪತ್ರ ಹೊರಡಿಸುವೆ. ಇಂಥ ಕಷ್ಟಕರ ಸಂದರ್ಭದಲ್ಲಿ ನಮ್ಮ ಸರ್ಕಾರ ಆಡಳಿತ ಕೈಗೆತ್ತಿಕೊಂಡಿದೆ. ನೀವು ನನ್ನ ಹೆಗಲ ಮೇಲೆ ಇಷ್ಟು ದೊಡ್ಡ ಜವಾಬ್ದಾರಿ ಹೊರಿಸಿದ್ದೀರಿ. ನನಗೆ ಸ್ವಲ್ಪ ಸಮಯ ನೀಡಿ ಎಂದು ವಿನಂತಿಸುತ್ತೇನೆ. ನಾನು ನೀಡಿದ ಭರವಸೆಗಳನ್ನೆಲ್ಲ ಹಂತ ಹಂತವಾಗಿ ಈಡೇರಿಸುತ್ತೇನೆ. ನೀವು ಸ್ವಲ್ಪ ಸಮಯ ಕೊಟ್ಟರೆ ನನಗೆ ಅನುಕೂಲವಾಗುತ್ತದೆ’ ಎಂದು ವಿನಂತಿಸಿದರು. ಸಾರ್ವಜನಿಕ ಸುರಕ್ಷತೆಗೆ ಆದ್ಯತೆ: ‘ನಾನು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತೇನೆ. ಎಲ್ಲರಿಗೂ ರಕ್ಷಣೆ ನೀಡುತ್ತೇನೆ. ಇಂದಿನಿಂದಲೇ, ಮಾದಕವಸ್ತು ಜಾಲವನ್ನು ನಿಯಂತ್ರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳು ಮತ್ತು ಪ್ರಯತ್ನಗಳನ್ನು ಕೈಗೊಳ್ಳುತ್ತೇನೆ. ನಮ್ಮ ಮಕ್ಕಳನ್ನು ಇದರಿಂದ ರಕ್ಷಿಸುವುದು ನಮ್ಮ ಸರ್ಕಾರದ ಜವಾಬ್ದಾರಿ. ಶಿಕ್ಷಣ, ಪಿಡಿಎಸ್ ವ್ಯವಸ್ಥೆ-ಪಡಿತರ, ಔಷಧ, ಕುಡಿಯುವ ನೀರು, ರಸ್ತೆ, ಬಸ್ ಸೌಲಭ್ಯ ಸೇರಿದಂತೆ ಮೂಲಭೂತ ಸೌಕರ್ಯಗಳು ನಮ್ಮ ಪ್ರಥಮ ಆದ್ಯತೆಯಾಗಿರುತ್ತವೆ. ಜನರ ಹಣದಿಂದ ಒಂದು ಪೈಸೆಯನ್ನೂ ಮುಟ್ಟುವುದಿಲ್ಲ. ಅದು ನನಗೂ ಅಗತ್ಯವಿಲ್ಲ ಮತ್ತು ಅದು ನಿಮಗೆ ಚೆನ್ನಾಗಿ ತಿಳಿದಿದೆ’ ಎಂದು ಭರವಸೆ ನೀಡಿದರು.