ವಿದೇಶಾಂಗ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್‌ ಅಧಿಕಾರಿ ವಾಸುಕಿಯವರನ್ನು ನೇಮಿಸಿದ ಕೇರಳ ಸರ್ಕಾರ

Nirupama ks | Published : Jul 21, 2024 5:28 AM

ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ಸದಾ ಜಟಾಪಟಿ ನಡೆಸುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್‌ ಸರ್ಕಾರ, ಹಿರಿಯ ಐಎಎಸ್‌ ಅಧಿಕಾರಿ ಕೆ. ವಾಸುಕಿ ಅವರನ್ನು ರಾಜ್ಯದ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಿದೆ

ತಿರುವನಂತಪುರಂ: ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ಸದಾ ಜಟಾಪಟಿ ನಡೆಸುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್‌ ಸರ್ಕಾರ, ಹಿರಿಯ ಐಎಎಸ್‌ ಅಧಿಕಾರಿ ಕೆ. ವಾಸುಕಿ ಅವರನ್ನು ರಾಜ್ಯದ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಿದೆ. ವಿದೇಶಾಂಗ ಕಾರ್ಯದರ್ಶಿ ಎನ್ನುವುದು ಕೇಂದ್ರ ಸರ್ಕಾರದಲ್ಲಿನ ಮಹತ್ವದ ಹುದ್ದೆ. ನೆರೆಯ ದೇಶಗಳೊಂದಿಗೆ ವ್ಯವಹಾರ ಸಂಬಂಧ ವಿದೇಶಾಂಗ ಸಚಿವಾಲಯದಲ್ಲಿ ಈ ಹುದ್ದೆ ರಚಿಸಲಾಗುತ್ತದೆ.

ಆದರೆ ದೇಶದಲ್ಲೇ ಮೊದಲ ಬಾರಿಗೆ ಎನ್ನುವಂತೆ ಕೇರಳ ಸರ್ಕಾರ, ನೆರೆ ದೇಶಗಳ ಜೊತೆಗಿನ ಸಮನ್ವಯದ ಹೆಸರಲ್ಲಿ ವಿದೇಶಾಂಗ ಕಾರ್ಯದರ್ಶಿಯೊಬ್ಬರನ್ನು ನೇಮಕ ಮಾಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ರಾಯಭಾರಿಗಳ ಕಚೇರಿ, ಮಿಷನ್‌ ಜೊತೆಗೆ ಸಂಪರ್ಕ ಸಾಧಿಸಲು ನೇಮಕ ಮಾಡಲಾಗಿದೆ ಎಂದು ಸರ್ಕಾರ ನೇಮಕಕ್ಕೆ ಕಾರಣ ನೀಡಿದೆ.

ಕಾರ್ಮಿಕ ಮತ್ತು ಕೌಶಲ್ಯ ಇಲಾಖೆಯ ಕಾರ್ಯದರ್ಶಿಯಾಗಿದ್ದ ಕೆ. ವಾಸುಕಿ ಅವರನ್ನು ವಿದೇಶಾಂಗ ಕಾರ್ಯದರ್ಶಿ(ಬಾಹ್ಯ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳ ಉಸ್ತುವಾರಿ ಕಾರ್ಯದರ್ಶಿ)ಯಾಗಿ ಜುಲೈ 15ರಂದು ಹೆಚ್ಚುವರಿ ಹೊಣೆಯನ್ನುನೀಡಿ ಆದೇಶ ಹೊರಡಿಸಿದೆ.

ಬಿಜೆಪಿ ಕಟುಟೀಕೆ:

ವಿದೇಶಾಂಗ ಇಲಾಖೆಯ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲದೇ ಇರುವಾಗ ವಾಸುಕಿ ಅವರನ್ನು ವಿದೇಶಾಂಗ ಕಾರ್ಯದರ್ಶಿ ಆಗಿ ನೇಮಿಸಿರುವುದು ಸಂವಿಧಾನ ವಿರೋಧಿ ನಡೆ ಎಂದು ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್‌ ಎಕ್ಸ್ ಖಾತೆಯಲ್ಲಿ ಟ್ವೀಟ್‌ ಮಾಡಿದ್ದು, ‘ಐಎಎಸ್‌ ಅಧಿಕಾರಿಯನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದು ನಮ್ಮ ಸಂವಿಧಾನದ ಒಕ್ಕೂಟ ಪಟ್ಟಿಯ ಉಲ್ಲಂಘನೆಯಾಗಿದೆ. ಎಲ್‌ಡಿಎಫ್‌ ಸರ್ಕಾರಕ್ಕೆ ವಿದೇಶಾಂಗ ಇಲಾಖೆಯಲ್ಲಿ ಯಾವುದೇ ಅವಕಾಶವಿಲ್ಲ’ ಎಂದಿದ್ದಾರೆ.