ಕೇಂದ್ರ ಸರ್ಕಾರವು ಮನರೇಗಾ ಯೋಜನೆಗೆ ವಿಕಸಿತ ಭಾರತ- ರೋಜ್‌ಗಾರ್‌ ಮತ್ತು ಆಜೀವಿಕಾ ಮಿಷನ್‌ (ಗ್ರಾಮೀಣ) ಕಾಯ್ದೆಯ (ವಿಬಿ ಜಿ ರಾಮ್‌ ಜಿ) ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ, ಅದರ ಹೊಸ ಲೋಗೋ ವಿನ್ಯಾಸದ ಸ್ಪರ್ಧೆಯನ್ನು ಆಯೋಜಿಸಿದೆ.

ನವದೆಹಲಿ: ಕೇಂದ್ರ ಸರ್ಕಾರವು ಮನರೇಗಾ ಯೋಜನೆಗೆ ವಿಕಸಿತ ಭಾರತ- ರೋಜ್‌ಗಾರ್‌ ಮತ್ತು ಆಜೀವಿಕಾ ಮಿಷನ್‌ (ಗ್ರಾಮೀಣ) ಕಾಯ್ದೆಯ (ವಿಬಿ ಜಿ ರಾಮ್‌ ಜಿ) ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ, ಅದರ ಹೊಸ ಲೋಗೋ ವಿನ್ಯಾಸದ ಸ್ಪರ್ಧೆಯನ್ನು ಆಯೋಜಿಸಿದೆ. MyGov ವೇದಿಕೆ ಅಡಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಲೋಗೋಗಳನ್ನು ತಯಾರಿಸುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಜನಸಾಮಾನ್ಯರ ಭಾಗವಹಿಸುವಿಕೆಯನ್ನು ನಿರೀಕ್ಷಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಮಾ.20ರ ತನಕ ಅವಕಾಶವಿದ್ದು, ವಿಜೇತರಿಗೆ ಸರ್ಕಾರದ ವತಿಯಿಂದ 50,000 ರು. ಬಹುಮಾನ ನೀಡಲಾಗುವುದು. ಆಯ್ಕೆಯಾದ ಲೋಗೋವನ್ನು ಕಾಯ್ದೆಯ ಪ್ರಚಾರಕ್ಕೆ ಬಳಸಲಾಗುವುದು.

==

ನಿತೀಶ್‌ ಪುತ್ರ ನಿಶಾಂತ್‌ ಜೆಡಿಯುಗೆ: ಸರ್ಕಾರ ಸೇರ್ಪಡೆಗೆ ಕ್ಷಣಗಣನೆ

ಪಟನಾ: ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ರಾಜ್ಯಸಭೆ ಪ್ರವೇಶಕ್ಕೆ ಸಜ್ಜಾದ ಬೆನ್ನಲ್ಲೇ ಅವರ ಪುತ್ರ ನಿಶಾಂತ್‌ ಕುಮಾರ್‌ ಭಾನುವಾರ ಸಂಯುಕ್ತ ಜನತಾ ದಳಕ್ಕೆ(ಜೆಡಿಯು) ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ ನಿಶಾಂತ್‌ ರಾಜ್ಯದ ಎನ್‌ಡಿಎ ಸರ್ಕಾರ ಸೇರ್ಪಡೆ ಮತ್ತು ಅದರಲ್ಲಿ ಉಪಮುಖ್ಯಮಂತ್ರಿ ಪಟ್ಟ ಏರುವ ಘಟನೆಗಳಿಗೆ ಚಾಲನೆ ನೀಡಿದಂತಾಗಿದೆ. ಪುತ್ರನ ರಾಜಕೀಯ ಭವಿಷ್ಯ ಮತ್ತು ರಾಜ್ಯದಲ್ಲಿ ಜೆಡಿಯು ಅಸ್ತಿತ್ವ ಉಳಿಸಲು ನಿತೀಶ್‌ ತಾವು ರಾಜ್ಯ ರಾಜಕೀಯ ತೊರೆದು ದೆಹಲಿಗೆ ತೆರಳಲು ನಿರ್ಧರಿಸಿದ್ದರು. ಅದರಂತೆ ರಾಜ್ಯದಲ್ಲಿ ಬಿಜೆಪಿಗೆ ಸಿಎಂ ಪಟ್ಟ ಸಿಗಲಿದ್ದು, ನಿಶಾಂತ್‌ ಡಿಸಿಎಂ ಆಗಲಿದ್ದಾರೆ ಎನ್ನಲಾಗಿದೆ. ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ನಿಶಾಂತ್‌, ‘ನನ್ನ ತಂದೆಯ ಮಾರ್ಗದರ್ಶನದಲ್ಲೇ ಪಕ್ಷದ ಬಲವರ್ಧನೆಗೆ ದುಡಿಯುತ್ತೇನೆ’ ಎಂದಿದ್ದಾರೆ.

==

ಹೊಸ ಇಂಧನ ಮಾನದಂಡ ಜಾರಿ ಬಳಿಕ ಎ.ಸಿ ದರ 15% ರಷ್ಟು ದರ ಹೆಚ್ಚಳ

ನವದೆಹಲಿ: ಕಚ್ಚಾ ಸಾಮಾಗ್ರಿಗಳ ಬೆಲೆ ಏರಿಕೆ, ಪೂರೈಕೆ ಸರಪಳಿ ದುಬಾರಿ ಮತ್ತು ನೂತನ ಸುರಕ್ಷತಾ ಮಾನದಂಡಗಳ ಜಾರಿ ಹಿನ್ನೆಲೆಯಲ್ಲಿ ಹವಾ ನಿಯಂತ್ರಕಗಳ (ಎ.ಸಿ.) ಬೆಲೆ ಶೇ.5-15ರಷ್ಟು ಏರಿಕೆಯಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಹಲವು ಕಂಪನಿಗಳು ಬೆಲೆ ಹೆಚ್ಚಿಸಿವೆ. ಡೈಕಿನ್‌ ಇಂಡಿಯಾ, ಎಲ್‌ಜಿ, ಹೈಯರ್‌, ಬ್ಲೂ ಸ್ಟಾರ್‌ನಂತಹ ಹವಾ ನಿಯಂತ್ರಕ ಸಂಸ್ಥೆಗಳು ದರವನ್ನು ಹೆಚ್ಚಳ ಮಾಡಿವೆ. ಬೇರೆ ಬೇರೆ ಕಂಪನಿಗಳು ಉತ್ಪನ್ನಗಳ ಮಾದರಿಗಳಿಗೆ ಅನುಸಾರವಾಗಿ ಬೆಲೆಯನ್ನು ಏರಿಸಿವೆ.

==

ಬೆಂಗಳೂರಲ್ಲಿ ಟ್ರಾಫಿಕ್‌, ಮಾಲಿನ್ಯದ ಸಮಸ್ಯೆ: ತೆಲಂಗಾಣ ಸಿಎಂ ರೆಡ್ಡಿ

ಮುಂಬೈ, ಚೆನ್ನೈ, ಕೊಲ್ಕತ್ತಾ ಜತೆಗೂ ತುಲನೆ

ಹೈದ್ರಾಬಾದನ್ನು ಟೋಕಿಯೋ ಮಾಡುವಾಸೆ

ಹೈದ್ರಾಬಾದ್‌: ‘ಐಟಿ ರಾಜಧಾನಿಯಾಗಿರುವ ಬೆಂಗಳೂರು ವಾಹನದಟ್ಟಣೆ, ವಾಯುಮಾಲಿನ್ಯದಂತಹ ಸಮಸ್ಯೆಯನ್ನು ಎದುರಿಸುತ್ತಿದೆ. ಆದರೆ ಹೈದರಾಬಾದ್‌ ಮಾತ್ರ ಉತ್ತಮ ನಗರಗಳಲ್ಲಿ ಒಂದಾಗಿ ರೂಪುಗೊಂಡಿದೆ’ ಎಂದು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಹೇಳಿದ್ದಾರೆ.ಅನ್ಯ ನಗರಗಳೊಂದಿಗೂ ತುಲನೆ ಮಾಡುತ್ತಾ, ‘ಆರ್ಥಿಕ ರಾಜಧಾನಿ ಮುಂಬೈ, ಮಳೆಗಾಲದಲ್ಲಿ ಪ್ರವಾಹದಂತಹ ಸಮಸ್ಯೆಗಳನ್ನು ಎದುರಿಸುತ್ತದೆ. ಚೆನ್ನೈ ಕೂಡ ಇದಕ್ಕೆ ಹೊರತಾಗಿಲ್ಲ. ಕೋಲ್ಕತಾ ಕೂಡ ಮಾಲಿನ್ಯಭರಿತ, ಅಶುಚಿಯಾಗಿದೆ. ಆದರೆ ಅವಿಭಜಿತ ಆಂಧ್ರದ ಸಿಎಂಗಳಾದ ಚಂದ್ರಬಾಬು ನಾಯ್ಡು ಮತ್ತು ಐಎಸ್‌ಆರ್‌ ಅವರ ಅವಧಿಯಲ್ಲಿ ಹೈದರಾಬಾದ್‌ ಉತ್ತಮ ನಗರವಾಗಿ ಬೆಳೆದಿದೆ’ ಎಂದರು.

ರಾಜ್ಯ ರಾಜಧಾನಿಯನ್ನು ಟೋಕಿಯೋ ಮತ್ತು ಸಿಂಗಾಪುರಗಳ ಜತೆ ಸ್ಪರ್ಧಿಸುವ ಮಟ್ಟಕ್ಕೆ ಬೆಳೆಸುವುದು ತಮ್ಮ ಕಾಂಗ್ರೆಸ್‌ ಸರ್ಕಾರದ ಗುರಿ ಎಂದ ಅವರು, ಅದಕ್ಕಾಗಿ 2026ರ ಡಿ. 9ರ ಒಳಗೆ ರಾಜ್ಯವನ್ನು ಡೀಸೆಲ್‌ ವಾಹನ ಮುಕ್ತ ಮಾಡುವುದಾಗಿ ಘೋಷಿಸಿದರು.