ಭುವನೇಶ್ವರ : ಶಿಕ್ಷಕನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಎಸಗಿದ ವಿದ್ಯಾರ್ಥಿನಿಯೊಬ್ಬಳು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿಕಾಲೇಜಿನ ಕ್ಯಾಂಪಸ್ನಲ್ಲಿಯೇ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.
ಒಡಿಶಾದ ಫಕೀರ್ ಮೋಹನ್ ಕಾಲೇಜಿನನಲ್ಲಿ ಈ ಘಟನೆ ನಡೆದಿದ್ದು 20 ವರ್ಷದ ವಿದ್ಯಾರ್ಥಿನಿಯ ದೇಹ ಶೇ.95ರಷ್ಟು ಸುಟ್ಟಿದೆ. ಆಕೆ ಬದುಕುಳಿಯುವ ಸಾಧ್ಯತೆ ಕ್ಷೀಣಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಏನಿದು ಪ್ರಕರಣ?:
ಯುವತಿ ಬಾಲಸೋರ್ ಜಿಲ್ಲೆಯ ಫಕೀರ್ ಮೋಹನ್ ಕಾಲೇಜಿನಲ್ಲಿ 2ನೇ ವರ್ಷದ ಬಿ.ಇಡಿ. ಓದುತ್ತಿದ್ದರು. ಈ ವೇಳೆ ಸಹಾಯಕ ಪ್ರಾಧ್ಯಾಪಕ ಸಮೀರ ಕುಮಾರ್ ಸಾಹು ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿ, ಪ್ರಾಂಶುಪಾಲರಿಗೆ ದೂರಿದ್ದರು. ಜೂ.30ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಂಸದ ಪ್ರತಾಪ್ ಚಂದ್ರ ಸಾರಂಗಿಯವರನ್ನು ಭೇಟಿಯಾಗಿ ನ್ಯಾಯ ಕೊಡಿಸುವಂತೆ, ಇಲ್ಲದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಆಗ ಸಾರಂಗಿಯವರು ಪ್ರಾಂಶುಪಾಲರಿಗೆ ಕರೆ ಮಾಡಿದಾಗ, ಆಂತರಿಕ ತನಿಖಾ ಸಮಿತಿಯನ್ನು ಸ್ಥಾಪಿಸಿದ್ದು, ಇನ್ನೈದು ದಿನಗಳಲ್ಲಿ ಅದು ವರದಿ ನೀಡಲಿದೆ ಎಂದು ಪ್ರಾಂಶುಪಾಲರು ಭರವಸೆ ನೀಡಿದ್ದರು.
ಈ ಬೆಳವಣಿಗೆ ಬೆನ್ನಲ್ಲೆ, ಶನಿವಾರ ಕಾಲೇಜಿನ ಕ್ಯಾಂಪಸ್ನಲ್ಲೇ ಯುವತಿ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಕೆಯನ್ನು ರಕ್ಷಿಸಲು ಹೋದ ಇನ್ನೊಬ್ಬ ವಿದ್ಯಾರ್ಥಿಗೂ ಗಂಭೀರ ಗಾಯಗಳಾಗಿವೆ.
ಶಿಕ್ಷಕನ ಬಂಧನ:
ಆರೋಪಿ ಶಿಕ್ಷಕ ಸಮೀರ ಕುಮಾರ್ ಸಾಹುವನ್ನು ಬಂಧಿಸಲಾಗಿದೆ. ಕರ್ತವ್ಯಲೋಪದ ಹಿನ್ನೆಲೆ ಪ್ರಾಂಶುಪಾಲರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ. ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸಂತ್ರಸ್ತೆ ದಾಖಲಾಗಿರುವ ಭುವನೇಶ್ವರದ ಎಐಐಎಂಎಸ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ವಿಧವೆ ಮೇಲೆ ಅತ್ಯಾಚಾರ: ಒಡಿಶಾದಲ್ಲಿ ಶಿಕ್ಷಕ ಸೆರೆ
ಕೇಂದ್ರಪಾಡ (ಒಡಿಶಾ): ವಿಧವೆಯೊಬ್ಬರಿಗೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಒಡಿಶಾದ ಕೇಂದ್ರಪರ ಜಿಲ್ಲೆಯ ಪ್ರಾಥಮಿಕ ಶಾಲೆ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಶಿಕ್ಷಕ ಪಾರಾದೀಪ್ ಬಂದರು ಬಳಿ ಲಾಡ್ಜ್ನಲ್ಲಿ ವಿಧವೆಗೆ ಲೈಂಗಿಕ ದೌರ್ಜನ್ಯ ನೀಡಿದ್ದ. ಈ ಸಂಬಂಧ ಸಂತ್ರಸ್ಥೆ ಮತ್ತು ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಐಎಂ-ಕಲ್ಕತ್ತಾ ರೇಪ್ ಕೇಸ್ ತನಿಖೆಗೆ 9 ಸದಸ್ಯರ ಎಸ್ಐಟಿ ರಚನೆ
ಕೋಲ್ಕತಾ: ಜು.11ರಂದು ಐಐಎಂ-ಕಲ್ಕತ್ತಾ ಕಾಲೇಜಿನ ಹುಡುಗರ ಹಾಸ್ಟೆಲ್ನಲ್ಲಿ ಆಪ್ತ ಸಮಾಲೋಚಕಿ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದ ತನಿಖೆ ನಡೆಸಲು 9 ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ನೈಋತ್ಯ ವಿಭಾಗದ ಸಹಾಯಕ ಆಯುಕ್ತರು ತಂಡದ ನೇತೃತ್ವ ವಹಿಸಲಿದ್ದಾರೆ. ಕಾಲೇಜಿನ ಸಿಸಿಟೀವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ವಿಧಿವಿಜ್ಞಾನ ತಂಡಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಹಾಸ್ಟೆಲ್ನಲ್ಲಿ ಉಳಿದಿದ್ದ ಆಹಾರ ಮೊದಲಾದ ವಸ್ತುಗಳ ಮಾದರಿಯನ್ನು ಸಂಗ್ರಹಿಸಿದ್ದಾರೆ. ಇವುಗಳ ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣದಲ್ಲಿ ಧುಮುಕಿದ್ದು, ಸತ್ಯಾಂಶ ಹೊರತರಲು ಕಾರ್ಯನಿರ್ವಹಿಸುತ್ತಿದೆ.
ಹಾಸ್ಟೆಲ್ಗೆ ಆಪ್ತಸಮಾಲೋಚನೆ ನಡೆಸಲು ತೆರಳಿದ್ದ ಮಹಿಳೆಗೆ ಮಾದಕ ವಸ್ತು ನೀಡಿ ಅತ್ಯಾಚಾರ ನಡೆಸಲಾಗಿದೆ ಎನ್ನುವ ಆರೋಪವಿದೆ. ಆದರೆ ಮಹಿಳೆಯ ತಂದೆ, ತನ್ನ ಮಗಳ ಮೇಲೆ ರೇಪ್ ನಡೆದೇ ಇಲ್ಲ ಎಂದು ಘಟನೆಯನ್ನು ನಿರಾಕರಿಸಿದ್ದಾರೆ.