ಕನ್ನಡಪ್ರಭ ವಾರ್ತೆ ಅರಸೀಕೆರೆ
ಗ್ರಾಮದ ಅದಿದೇವತೆ ಮೈಸೂರಮ್ಮ ದೇವಿಯ ನೂತನ ದೇವಾಲಯದ ಸವಿನೆನಪಿನೊಂದಿಗೆ ಈ ಉತ್ಸವ ನಡೆಯಿತು. ತಳಿರು ತೋರಣಗಳಿಂದ ಅಲಂಕರಿಸಿದ ಗ್ರಾಮದ ಬೀದಿಗಳು, ಮಕ್ಕಳ ಮತ್ತು ಮಹಿಳೆಯರ ಸಂಭ್ರಮ, ಗುರುಪಾದ ಪೂಜೆಯೊಂದಿಗೆ ಭಕ್ತಿಭಾವದ ಪ್ರದರ್ಶನ ಇವೆಲ್ಲವೂ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.
ಕಾರ್ಯಕ್ರಮಕ್ಕೆ ಆಗಮಿಸಿದ ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿಯನ್ನು ಗ್ರಾಮಸ್ಥರು ಮಂಗಳವಾದ್ಯಗಳೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿ, ಪಾದಪೂಜೆ ಮಾಡುವ ಮೂಲಕ ಗೌರವಿಸಿದರು. ಬಳಿಕ ಭಕ್ತರಿಗೆ ಆಶೀರ್ವಚನ ನೀಡಿದ ಸ್ವಾಮೀಜಿ, ಗುರುವಿನ ಸ್ಥಾನ ನಮ್ಮ ಸಂಸ್ಕೃತಿಯಲ್ಲಿ ಅತ್ಯುನ್ನತವಾಗಿದೆ. ಗುರುವಿನ ಮಾರ್ಗದರ್ಶನವನ್ನು ಅನುಸರಿಸಿದರೆ ಜೀವನದಲ್ಲಿ ಶಾಂತಿ ಮತ್ತು ಸಾರ್ಥಕತೆ ದೊರೆಯುತ್ತದೆ ಎಂದು ಹೇಳಿದರು.ಭೈರವೈಕ್ಯ ಡಾ. ಬಾಲ ಗಂಗಾಧರನಾಥ ಮಹಾಸ್ವಾಮೀಜಿಗಳು ತೋರಿದ ದಾರಿಯಲ್ಲಿ ನಡೆಯುತ್ತಿರುವ ಈ ತೇರು ಉತ್ಸವವು, ಭಕ್ತರ ನಡುವೆ ಸಂಸ್ಕಾರ ಮತ್ತು ಆತ್ಮೀಯ ಬಾಂಧವ್ಯವನ್ನು ಬಲಪಡಿಸುತ್ತಿರುವುದು ಸಂತೋಷಕರ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಸಂಚಾಲಕರಾದ ಎಚ್. ಬಿ. ಮದನ್ ಗೌಡ ಮಾತನಾಡಿ, ಪೂಜ್ಯ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಸಂಕಲ್ಪವನ್ನು ಶಂಭುನಾಥ ಸ್ವಾಮೀಜಿಗಳು ಕಾರ್ಯರೂಪಕ್ಕೆ ತಂದಿದ್ದು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.