)
-ಕರ್ಜಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ । ವಸತಿ ಶಾಲೆಗಳ ಆಹಾರ ಸುರಕ್ಷತೆ ಪ್ರಶ್ನೆ, ಆಸ್ಪತ್ರೆ ಅವ್ಯವಸ್ಥೆಗೆ ಪೋಷಕರು ಕಂಗಾಲು
ಕನ್ನಡಪ್ರಭ ವಾರ್ತೆ ಅಫಜಲಪುರ
ತಾಲೂಕಿನ ಕರ್ಜಗಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದ 57 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆನಡೆದಿದೆ. ವಸತಿ ಶಾಲೆಗಳಲ್ಲಿನ ಆಹಾರದ ಗುಣಮಟ್ಟ, ಮೇಲ್ವಿಚಾರಣೆ ಹಾಗೂ ಸರ್ಕಾರಿ ಆಸ್ಪತ್ರೆಗಳ ತುರ್ತು ಚಿಕಿತ್ಸಾ ವ್ಯವಸ್ಥೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಘಟನೆಯ ಬಳಿಕ ಆಸ್ಪತ್ರೆಗೆ ಹರಿದು ಬಂದ ಪಾಲಕರು ಮತ್ತು ವಿವಿಧ ಸಂಘಟನೆಗಳು ಆಡಳಿತದ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ವಸತಿ ಶಾಲೆಯಲ್ಲಿ ಒಟ್ಟು 220 ವಿದ್ಯಾರ್ಥಿಗಳಿದ್ದು, ಮೊದಲ ಪಂಕ್ತಿಯಲ್ಲಿ ಉಪಾಹಾರ ಸೇವಿಸಿದ್ದ 34 ಬಾಲಕರು ಹಾಗೂ 23 ಬಾಲಕಿಯರಿಗೆ ವಾಂತಿ, ಹೊಟ್ಟೆನೋವು ಸೇರಿದಂತೆ ಅಸ್ವಸ್ಥತೆ ಕಾಣಿಸಿಕೊಂಡಿತು. ತಕ್ಷಣ ಉಳಿದ ವಿದ್ಯಾರ್ಥಿಗಳಿಗೆ ಉಪಾಹಾರ ವಿತರಣೆ ಸ್ಥಗಿತಗೊಳಿಸಿ ಅಸ್ವಸ್ಥಗೊಂಡ ಮಕ್ಕಳನ್ನು ಅಫಜಲಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು.
ಘಟನೆಯ ಬೆನ್ನಲ್ಲೇ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪಾಲಕರು, ವಸತಿ ಶಾಲೆಗಳಿಗೆ ಕಳಪೆ ಹಾಗೂ ಅವಧಿ ಮೀರಿದ ಆಹಾರ ಧಾನ್ಯ ಪೂರೈಕೆಯಾಗುತ್ತಿದೆ ಎಂದು ಆರೋಪಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂ.ವೈ. ಪಾಟೀಲ್, ಮಕ್ಕಳ ಆರೋಗ್ಯವೇ ಮೊದಲ ಆದ್ಯತೆ. ಯಾವುದೇ ರೀತಿಯ ಚಿಕಿತ್ಸೆಯ ಅಗತ್ಯವಿದ್ದರೂ ಸರ್ಕಾರವೇ ಭರಿಸಲಿದೆ. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಯಾರನ್ನೂ ಬಿಡುವುದಿಲ್ಲ. ತಾಲೂಕಿನ ಎಲ್ಲ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಕಟ್ಟುನಿಟ್ಟಿನ ನಿಗಾವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಆಡಳಿತ ವೈದ್ಯಾಧಿಕಾರಿ ಡಾ. ಅಭಯಕುಮಾರ ಪಾಟೀಲ್, "ವಿದ್ಯಾರ್ಥಿಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಸದ್ಯ ಯಾರ ಜೀವಕ್ಕೂ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ತಹಸೀಲ್ದಾರ್ ಸಂಜೀವಕುಮಾರ ದಾಸರ್ ಹಾಗೂ ತಾ.ಪಂ. ಇಒ ಶಂಕರ ರಾಠೋಡ ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ, ಔಷಧೋಪಚಾರ ಹಾಗೂ ಅಗತ್ಯ ಸೌಲಭ್ಯಗಳ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಿದರು.
ಈ ಸಂದರ್ಭದಲ್ಲಿ ನಿತೀನ್ ಗುತ್ತೇದಾರ, ಜೆ.ಎಂ ಕೊರಬು, ಭೀಮರಾವ್ ಗೌರ, ರಾಜು ಉಕ್ಕಲಿ, ಜಮೀಲ್ ಗೌಂಡಿ, ಶ್ರೀಮಂತ ಬಿರಾದಾರ, ಎಂ.ಎಲ್ ಪಟೇಲ್, ಶ್ರೀಕಾಂತ ದೀವಾನಜೀ, ಮುತ್ತು ಕುರಿಮನಿ, ಮಹಾಂತೇಶ ಪಾಟೀಲ್ ಗೌರ, ಮಾಜಿದ್ ಪಟೇಲ್, ಧಾನು ಪತಾಟೆ, ಗೌತಮ ಸಕ್ಕರಗಿ, ರವಿ ಗೌರ, ಸದ್ದಾಂ ನಾಕೇದಾರ, ಶರಣು ಪದಕಿ, ಮಕ್ಕಳ ಪಾಲಕರು, ಸಾರ್ವಜನಿಕರು ಇದ್ದರು.