81 ಕೋಟಿ ಜನ ಮೋದಿ ಸರ್ಕಾರದ ಫಲಾನುಭವಿಗಳು: ಸಚಿವ ಭಗವಂತ ಖೂಬಾ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

ಯೋಜನೆಗಳನ್ನು ಜನರಿಗೆ ತಲುಪಿಸುವ ದೇಶದ ಮೊದಲ ಪ್ರಧಾನಿ ಮೋದಿ. ಔರಾದ್‌ನ ಸಂತಪೂರ ಹಾಗೂ ವಡಗಾಂವ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಔರಾದ್

ದೇಶದ ಜನತೆಗೆ ಅತಿ ಹತ್ತಿರದಿಂದ ಕಾಣುವ ಹಾಗೂ ಎಲ್ಲಾ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ಮುಟ್ಟಿಸುವ ದೇಶದ ಮೊದಲ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.

ತಾಲೂಕಿನ ಸಂತಪೂರ ಹಾಗೂ ವಡಗಾಂವ ಗ್ರಾಮದಲ್ಲಿ ಆಯೋಜಿಸಲಾದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿ ಬಡ ತಾಯಂದಿರಿಗಾಗಿ ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್, ಕಡಿಮೆ ಪ್ರಿಮೀಯಂನಲ್ಲಿ ವಿಮೆಗಳು, ರೈತರಿಗಾಗಿ ಕಿಸಾನ್ ಸಮ್ಮಾನ್‌ ಯೋಜನೆ, ಬಡವರಿಗಾಗಿ ಉಚಿತ ಪಡಿತರ ಮುಂತಾದ ಯೋಜನೆಗಳು ನೀಡಿದ್ದಾರೆ. ಸುಮಾರು 81 ಕೋಟಿ ಬಡ ಜನರು, ಮೋದಿ ಸರ್ಕಾರದ ಫಲಾನುಭವಿಗಳಾಗಿದ್ದಾರೆ ಎಂದರು.

ಕಳೆದ 10 ವರ್ಷಗಳಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಹೆದ್ದಾರಿಗಳು, ರೈಲ್ವೆ, ಸೋಲಾರ್ ಪಾರ್ಕ್‌, ಸಿಪೆಟ್ ಕಾಲೇಜು, ಏರಪೋರ್ಟ್‌, ಪಾಸ್‌ಪೋರ್ಟ್‌ ಸೇವಾ ಕೇಂದ್ರ ಮುಂತಾದ ಅಭಿವೃದ್ಧಿ ಕಾರ್ಯಗಳು ಮಾಡಿರುವೆ. ನಮ್ಮ ಸರ್ಕಾರದ ಎಲ್ಲಾ ಯೋಜನೆಗಳು ನಮ್ಮ ಜನತೆಗೆ ತಲುಪಿಸಿದ್ದೇನೆ. ಭ್ರಷ್ಟಾಚಾರ ರಹಿತವಾಗಿ ಆಡಳಿತ ನೀಡಿರುವೆ. ನನ್ನ ಕಾರ್ಯವೈಖರಿಗೆ ಮೆಚ್ಚಿ ಮೋದಿ ನನಗೆ ಕೇಂದ್ರದಲ್ಲಿ ಮಂತ್ರಿಯನ್ನಾಗಿ ಮಾಡಿದ್ದಾರೆ ಎಂದರು.

ಔರಾದ್‌ ತಾಲೂಕಿಗೆ ಒಟ್ಟು ರು. 10000 ಸಾವಿರ ಕೋಟಿ ಹೂಡಿಕೆಯಲ್ಲಿ ಸೋಲಾರ್ ಪಾರ್ಕ್‌ ಹಾಗೂ 3000 ಕೋಟಿಯಲ್ಲಿ ದಕ್ಷಿಣ ಭಾರತ ಅತಿದೊಡ್ಡ ಪವರ್‌ ಪ್ಲಾಂಟ್ ಯೋಜನೆ ಮಂಜೂರಿ ಮಾಡಿಸಿದ್ದೇನೆ. ಇದರಿಂದ 10000 ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ತಿಳಿಸಿದರು.

ಬೀದರ್‌ ನಾಂದೇಡ ರೈಲ್ವೆ ಲೈನ್‌ಗೆ ರಾಜ್ಯ ಸರ್ಕಾರದ ತನ್ನ ಭಾಗದ ಹಣ ನೀಡಿದರೆ ಕಾಮಗಾರಿ ಪ್ರಾರಂಭವಾಗುತ್ತದೆ ಎಂದ ಅವರು ಇಡಿ ರಾಷ್ಟ್ರದಲ್ಲಿ 23 ಕಡೆ ಸೈನಿಕ ಶಾಲೆ ಕೇಂದ್ರದಿಂದ ನೀಡಿದರೆ, ಅದರಲ್ಲಿ ರಾಜ್ಯದಲ್ಲಿ ನಮ್ಮ ಬೀದರ ಜಿಲ್ಲೆಗೆ ಮಾತ್ರ ಸೈನಿಕ ಶಾಲೆ ಮಂಜೂರಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶಕ್ಕೆ ಮೋದಿ ಅವರನ್ನು ಪ್ರಧಾನಿಯಾಗಿ ಮತ್ತು ನನಗೆ 3 ಬಾರಿ ಆಶೀರ್ವಾದಿಸಬೇಕೆಂದು ಎಲ್ಲರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಹಿರಿಯರಾದ ಗಣಪತರಾವ ಖೂಬಾ, ಸಂತಪೂರ ಗ್ರಾ.ಪಂ ಅಧ್ಯಕ್ಷೆ ಮಹಾದೇವಿ ವಿಜಯಕುಮಾರ, ವಡಗಾಂವ ಗ್ರಾಮದ ಪ್ರಮುಖರಾದ ಬಸವರಾಜ ದೇಶಮುಖ, ಬ್ಯಾಂಕ ಅಧಿಕಾರಿಗಳಾದ ಸಂಜಿವಕುಮಾರ ಸುತಾಳೆ, ರಾಮರಾವ, ಮಲ್ಲಿನಾಥ ಬಿರಾದರ, ಹಾಗೂ ಅಂಚೆ ಅಧೀಕ್ಷಕರಾದ ಶ್ರೀಕಾರ, ಹಾಗೂ ಮಖಂಡರಾದ ಸಂತೋಷ ಪಾಟೀಲ್, ಶರಣಪ್ಪ ಪಂಚಾಕ್ಷರಿ, ಸಿದ್ರಾಮಪ್ಪ ಬ್ಯಾಳೆ, ಬಸಯ್ಯ ಸ್ವಾಮಿ, ಪ್ರಕಾಶ ಮೇತ್ರೆ, ಮುಂತಾದವರು ಉಪಸ್ಥಿತರಿದ್ದರು.

Share this article