- ನಟ ವಿ.ರವಿಚಂದ್ರನ್ ಜನ್ಮದಿನ ಕಾರ್ಯಕ್ರಮದಲ್ಲಿ ಓಂಕಾರ ಶಿವಾಚಾರ್ಯ ಶ್ರೀ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಚಿತ್ರೋದ್ಯಮ ಸೇರಿದಂತೆ ಎಲ್ಲ ರಂಗದಲ್ಲೂ ವೃತ್ತಿವೈಷಮ್ಯ ಸಹಜವಾಗಿರುತ್ತದ. ಅಂತಹದ್ದರಲ್ಲಿ 80-90ರ ದಶಕದಲ್ಲೇ ಕೋಟ್ಯಂತರ ರು. ಖರ್ಚು ಮಾಡಿ, ಸಿನಿಮಾ ನಿರ್ಮಿಸಿದ ಶ್ರೇಯಸ್ಸು ನಟ, ನಿರ್ಮಾಪಕ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರಿಗೆ ಸಲ್ಲುತ್ತದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.ನಗರದ ಎಂಸಿಸಿ ಎ ಬ್ಲಾಕ್ನ ವನಿತಾ ಸಮಾಜದ ಹಿರಿಯ ವನಿತೆಯರ ವೃದ್ಧಾಶ್ರಮದಲ್ಲಿ ಗುರುವಾರ ಅಖಿಲ ಕರ್ನಾಟಕ ವಿ.ರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾ ಸಮಿತಿಯಿಂದ ನಟ, ನಿರ್ಮಾಪಕ ವಿ.ರವಿಚಂದ್ರನ್ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ಆಶ್ರಮದ ತಾಯಂದಿರಿಗೆ ಕೇಕ್, ಸಿಹಿಯೂಟ ವಿತರಿಸಿ ಅವರು ಮಾತನಾಡಿದರು.
ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಸಿನಿಮಾಗಳ ಮೇಲೆ ತಮ್ಮ ಪ್ರೀತಿ ಮೆರೆದವರು ರವಿಚಂದ್ರನ್. ಸೋಲು-ಗೆಲುವನ್ನು ಲೆಕ್ಕಿಸದೇ, ಮುಂದೆ ತಮ್ಮ ಮಗನೊಂದಿಗೆ ಅಭಿಮಾನಿಗಳನ್ನು ಮೆಚ್ಚಿಸುವಂತಹ ಸಿನಿಮಾಗಳನ್ನು ನಿರ್ಮಿಸುತ್ತಾರೆ. ಆಗ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಳೆಬರುತ್ತದೆ. ಇಡೀ ದೇಶವೇ ಕನ್ನಡ ಚಿತ್ರಗಳತ್ತ ತಿರುಗಿ ನೋಡುವಂತೆ ಮಾಡಿದ ನಟ, ನಿರ್ಮಾಪಕರ ಪೈಕಿ ರವಿಚಂದ್ರನ್ ಸಹ ಒಬ್ಬರು ಎಂದು ಶ್ಲಾಘಿಸಿದರು.ಶಂಕರ ನಾಗ್ ಹೆಸರಲ್ಲಿ ಫಿಲಂ ಸಿಟಿ:
ದಾವಣಗೆರೆ ಎಂದೋ ಕರ್ನಾಟಕದ 2ನೇ ರಾಜಧಾನಿಯಾಗಬೇಕಿತ್ತು. ಆದರೂ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದೆ. ಅದರಂತೆ ಚಿತ್ರರಂಗಕ್ಕೆ ಸಂಬಧಿಸಿಂದಂತೆ ನಟ, ನಿರ್ಮಾಪಕ, ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ಇಲ್ಲಿನ ಸಮೀಪದ ಆನಗೋಡು ರಸ್ತೆಯಲ್ಲಿ ನಮ್ಮೆಲ್ಲರನ್ನು ಅಗಲಿದ ಶಂಕರನಾಗ್ ಹೆಸರಿನಲ್ಲಿ ಎಲ್ಲ ಅಭಿಮಾನಿಗಳ ಆಶಯದಂತೆ ದಾವಣಗೆರೆಯಲ್ಲಿ ಒಂದು ಫಿಲಂ ಸಿಟಿ ನಿರ್ಮಾಣ ಆಗಬೇಕು ಎಂದು ಓಂಕಾರ ಶ್ರೀಗಳು ಹೇಳಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಮಾತನಾಡಿ, ಪ್ರತಿ ವರ್ಷ ನಟ ರವಿಚಂದ್ರನ್ ಜನ್ಮದಿನ ಇಂತಹ ಆಶ್ರಮಗಳಲ್ಲಿ ಆಯೋಜಿಸುತ್ತಿರುವುದು ಶ್ಲಾಘನೀಯ. ಕನ್ನಡ ಚಿತ್ರರಂಗವನ್ನು ಇನ್ನೂ ಉನ್ನತಮಟ್ಟಕ್ಕೆ ಏರಿಸುವ ಮೂಲಕ ರಾಜ್ಯ, ರಾಷ್ಟ್ರದಾದ್ಯಂತ ಗುರುತಿಸುವಂತೆ ಮಾಡುತ್ತಾರೆ. ಅವರ ತಂದೆ ದಿ।। ಎನ್.ವೀರಸ್ವಾಮಿ ಹೆಸರನ್ನು ಉಳಿಸುತ್ತಾರೆ ಎಂದರು.
ಜಿಲ್ಲಾಧ್ಯಕ್ಷ ಎಂ.ಮನು ಅಧ್ಯಕ್ಷತೆ ವಹಿಸಿದ್ದರು. ಅಹಿಂದ ಸಂಘಟನೆ ರಾಜ್ಯ ಉಪಾಧ್ಯಕ್ಷ ಡಿ.ಗಿರೀಶ ಹೊದಿಗೆರೆ, ಬ್ರಿಗೇಡ್ ಸಂಘಟನೆ ಚಿತ್ರದುರ್ಗ ಜಿಲ್ಲಾಧ್ಯಕ್ಷ ಪಿ.ಎಚ್.ಚಿಕ್ಕಪ್ಪ ಪೂಜಾರ, ವಿಶ್ವ ಕರವೇ ರಾಜ್ಯ ಸಂಚಾಲಕ ಬಿ.ಇ. ದಯಾನಂದ, ಬಿ.ಆರ್. ಮಂಜುನಾಥ, ಗಣೇಶ ಚಿನ್ನಿಕಟ್ಟಿ, ದಾವಣಗೆರೆ ತಾಲೂಕು ಫೋಟೋಗ್ರಾಫರ್ಸ್ ಸಂಘದ ಗೌರವಾಧ್ಯಕ್ಷ ಬಿ.ಮಂಜುನಾಥ, ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾ ಉಪಾಧ್ಯಕ್ಷ ಕೋಟ್ಯಾಳ್ ಸಿದ್ದೇಶ, ಸಂತೋಷ ದೊಡ್ಡಮನಿ, ಸುಕನ್ಯ, ಶಿಲ್ಪ ಇತರರು ಇದ್ದರು.- - -
-29ಕೆಡಿವಿಜಿ37: ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಜನ್ಮದಿನ ಅಂಗವಾಗಿ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಶ್ರಮದ ತಾಯಂದಿರಿಗೆ ಕೇಕ್, ಸಿಹಿಯೂಟ ವಿತರಿಸಲಾಯಿತು.