ಶಿರಹಟ್ಟಿ: ಮಕ್ಕಳ ಭವಿಷ್ಯ ಮತ್ತು ಅವರ ಉತ್ತಮ ಶಿಕ್ಷಣಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯೇ ಶಿಕ್ಷಣದ ಆದ್ಯತೆ. ಹಾಗಾಗಿ ಮನೆಯೇ ಮೊದಲ ಪಾಠಶಾಲೆ ಎಂಬಂತೆ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಆರ್. ಕುಲಕರ್ಣಿ ಹೇಳಿದರು.
ಪ್ರೇರಣಾತ್ಮಕ ಉಪನ್ಯಾಸ ನೀಡಿದ ಸಂಸ್ಥೆಯ ಆಡಳಿತ ಅಧಿಕಾರಿ ಐ.ಬಿ. ಬೆನಕೊಪ್ಪ ಮಾತನಾಡಿ, ಮಕ್ಕಳ ಕಲಿಕೆ ಆಸಕ್ತಿದಾಯಕವಾಗಿರಬೇಕು. ವಿದ್ಯಾರ್ಥಿಗಳು ಯಾವುದೇ ಭಯ, ಆತಂಕ, ಒತ್ತಡಕ್ಕೆ ಒಳಗಾಗದೆ ಸಮ ಚಿತ್ತದಿಂದ ಕಲಿಕೆಯ ಕಡೆ ಏಕಾಗ್ರಗೊಳ್ಳಬೇಕು. ಕಲಿಕೆ ಎಲ್ಲ ಚಟುವಟಿಕೆಯಲ್ಲಿ ತಮ್ಮನ್ನು ತಾವು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುತ್ತಾ ಸದೃಢ ವ್ಯಕ್ತಿತ್ವ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಸದಾ ಜಾಗೃತವಾಗಿರಬೇಕು. ಆ ಹಿನ್ನೆಲೆಯಲ್ಲಿ ಉಪನ್ಯಾಸಕರು ಪೋಷಕರು ವಿದ್ಯಾರ್ಥಿಗಳು ಜತೆ ಸಮಾಜದ ಪಾತ್ರ ಹಿರಿದಾದುದು ಎಂದರು.
ಕಾಲೇಜಿನ ಪ್ರಾಚಾರ್ಯ ಎಂ.ಸಿ. ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಎಸ್.ವೈ. ಪಾಟೀಲ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಪುಷ್ಪಾ ಹೂಗಾರ್, ಕಲ್ಲೂರ್ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ಉಪನ್ಯಾಸಕ ಎನ್. ಹನುಮರಡ್ಡಿ ಸಂವಿಧಾನದ ಪೀಠಿಕೆ ಓದಿಸಿದರು. ಶಿಕ್ಷಣ ಶಾಸ್ತ್ರ ಉಪನ್ಯಾಸಕರಾದ ಸುಧಾ ಹುಚ್ಚಣ್ಣವರ ಮಹಾಸಭೆಯ ಔಚಿತ್ಯ ಕುರಿತು ಮಾತನಾಡಿದರು.ಉಪನ್ಯಾಸಕರಾದ ಪಿ.ಎನ್. ಕುಲಕರ್ಣಿ, ಎಂ.ಎಂ. ನದಾಫ್, ವೈ.ಎಸ್. ಪಂಗಣ್ಣವರ್, ಎಫ್.ಎ. ಬಾಬುಕಾನವರ್, ಪಿ.ವಿ. ಹೊಸೂರ್, ಮುಖ್ಯೋಪಾಧ್ಯಾಯ ಆರ್.ಎಫ್. ಬಡಕುರ್ಕಿ, ನೌಶಾದ್ ಶಿಗ್ಲಿ ಇದ್ದರು. ಬಸವರಾಜ್ ಶಿರುಂದ ವಂದಿಸಿದರು. ವಿದ್ಯಾರ್ಥಿನಿಯರಾದ ಕವಿತಾ ಇಟಗಿ, ತೇಜಸ್ವಿನಿ ಬಂಕಾಪುರ, ಶಾಂತಾ ಕುಳಗೇರಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು.