ಮಂಗಳೂರು : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 2007ರಿಂದ ನಡೆಸಿಕೊಂಡು ಬರುತ್ತಿರುವ ‘ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೋಗ ಮೇಳ ಈ ಬಾರಿ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ಜೂ.7 ಮತ್ತು 8ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಸಂಸ್ಥೆಯು ಈವರೆಗೆ 20 ಉದ್ಯೋಗ ಮೇಳಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿದ್ದು, 55,564 ಅಭ್ಯರ್ಥಿಗಳು ವಿವಿಧ ಕಂಪೆನಿಗಳಿಗೆ ಶಾರ್ಟ್ ಲಿಸ್ಟ್ಗೊಂಡಿದ್ದಾರೆ. ಈ ಬಾರಿ 200ಕ್ಕೂ ಅಧಿಕ ವಿವಿಧ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ಈಗಾಗಲೇ 68 ಕಂಪೆನಿಗಳು ನೋಂದಾಯಿಸಿಕೊಂಡಿವೆ ಎಂದು ತಿಳಿಸಿದರು.
ಉದ್ಯೋಗ ಮೇಳದಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ, ಐಟಿಎಸ್, ಮ್ಯಾನುಫ್ಯಾಕ್ಚರಿಂಗ್, ಹೆಲ್ತ್ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಹಾಸ್ಪಿಟಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಮತ್ತು ಎನ್ಜಿಒಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ಆಳ್ವಾಸ್ ಪ್ರಗತಿಯಲ್ಲಿ ನೇಮಕಾತಿ ನಡೆಸಲಿವೆ. ಈ ಕಂಪೆನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ ಎಸ್ಎಸ್ಎಲ್ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಸಿಗಲಿದೆ ಎಂದರು.31 ಸಾವಿರಕ್ಕೂ ಅಧಿಕ ಉದ್ಯೋಗ:
ಇದುವರೆಗಿನ 20 ಉದ್ಯೋಗ ಮೇಳಗಳನ್ನು ಆಯೋಜಿಸಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಸುಮಾರು 5 ಕೋಟಿ ರು.ಗಳನ್ನು ವ್ಯಯಿಸಿದೆ. ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಅಭ್ಯರ್ಥಿಗಳು ಕೂಡ ಇದರ ಲಾಭ ಪಡೆದಿದ್ದಾರೆ. ಇದುವರೆಗೆ ಒಟ್ಟು 31,896 ಉದ್ಯೋಗ ದೊರೆತಿದೆ ಎಂದು ವಿವೇಕ್ ಆಳ್ವ ಹೇಳಿದರು. ಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಜೂನ್ 6ರಿಂದ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗೆ ಮೊ. 9008907716, 9663190590, 7975223865, 9741440490 ಸಂಖ್ಯೆಗಳಿಗೆ ಕರೆ ಮಾಡಬಹುದು. ಅಭ್ಯರ್ಥಿಗಳ ನೋಂದಣಿ ಹಾಗೂ ಉದ್ಯೋಗ ನೀಡಲಿರುವ ಕಂಪೆನಿಗಳ ಮಾಹಿತಿಗೆ: www.alvaspragati.com, http://www.alvaspragati.com.
ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೊ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಇದ್ದರು.
ಉದ್ಯೋಗ ಮೇಳದ ವಿಶೇಷತೆಗಳು
ಎಂಬಿಎ, ಎಂಕಾಂ, ಬಿಕಾಂ, ಬಿಬಿಎ, ಬಿಎಸ್ಸಿ, ಬಿಎ, ಬಿಸಿಎ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಹೈದರಬಾದ್ನ ಫ್ಯಾಕ್ಟ್ಸೆಟ್ ಸಂಸ್ಥೆ, ಇಎಕ್ಸ್ಎಲ್ ಸರ್ವಿಸ್, ಮಹೀಂದ್ರಾ ಫಿನಾನ್ಸ್, ಪ್ರತಿಷ್ಠಿತ ಬ್ಯಾಂಕ್ಗಳಾದ ಎಚ್ಡಿಎಫ್ಸಿ, ಆ್ಯಕ್ಸಿಸ್, ಐಡಿಎಫ್ಸಿ ಫಸ್ಟ್ ಬ್ಯಾಂಕ್, ಬಂಧನ್ ಬ್ಯಾಂಕ್ ಹಾಗೂ ಇನ್ನಿತರ ಸಂಸ್ಥೆಗಳು ಬಹುಅವಕಾಶಗಳನ್ನು ನೀಡಲಿವೆ.
ಉತ್ಪಾದನಾ ವಲಯದಲ್ಲಿ ಕಿರ್ಲೋಸ್ಕರ್ ಟೊಯೋಟಾ ಟೆಕ್ಸ್ಟೈಲ್ ಮೆಷಿನರಿ, ಉಷಾ ಆರ್ಮರ್ ಮುಂತಾದ ಕಂಪೆನಿಗಳು ಭಾಗವಹಿಸಲಿವೆ. ಐಟಿ ವಲಯದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ದಿಯಾ ಸಿಸ್ಟಮ್ಸ್, 24x7ಎಐ, ಕಾನ್ಸೆಂಟ್ರಿಕ್ಸ್, ವಿನ್ಮ್ಯಾನ್ ಸಾಫ್ಟ್ವೇರ್ ಕಂಪೆನಿಗಳು ಯಾವುದೇ ಹಿನ್ನೆಲೆಯ ಪದವೀಧರರನ್ನು ನೇಮಿಸಿಕೊಳ್ಳಲಿವೆ.
ಮಾರಾಟ ವಲಯದಲ್ಲಿ ಕಲ್ಟ್ಫಿಟ್, ಐಟಿಸಿ ಲಿಮಿಟೆಡ್, ಬ್ಲೂಸ್ಟೋನ್ ಜ್ಯುವೆಲ್ಲರಿಗಳು ಪದವೀಧರರಿಗೆ ಉದ್ಯೋಗ ನೀಡಲಿವೆ. ನರ್ಸಿಂಗ್ ಪದವೀಧರ ಅಭ್ಯರ್ಥಿಗಳಿಗೆ ಹಿರಾನಂದನಿ ಆಸ್ಪತ್ರೆ, ಮುಂಬೈನ ಅಪೊಲೊ ಆಸ್ಪತ್ರೆ, ಕೆಎಂಸಿ ಆಸ್ಪತ್ರೆ ಹಾಗೂ ಇನ್ನಿತರ ವೈದ್ಯಕೀಯ ಸಂಸ್ಥೆಗಳು ಉದ್ಯೋಗ ನೀಡಲಿವೆ ಎಂದು ವಿವೇಕ್ ಆಳ್ವ ತಿಳಿಸಿದರು.