ನಗರ ಕಸಾಪ ಘಟಕದಿಂದ ಬಿ.ಆರ್.ಅಂಬೇಡ್ಕರ್ ಜಯಂತಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಉಳ್ಳವರು, ಬಡವರು ಎನ್ನದೇ ಸರ್ವರಿಗೂ ಒಂದೇ ಎಂಬ ಕಾನೂನು ರೂಪಿಸಿ ಸಂವಿಧಾನ ರಚಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಸರ್ವ ಜನಾಂಗಕ್ಕೂ ಆದರ್ಶಪುರುಷ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವಾಧ್ಯಕ್ಷೆ ರೇಖಾ ಹುಲಿಯಪ್ಪ ಹೇಳಿದರು.ನಗರದ ವಿಜಯಪುರದ ಆದಿಭೂತಪ್ಪ ದೇವಾಲಯದಲ್ಲಿ ತಾಲೂಕು ಹಾಗೂ ನಗರ ಕಸಾಪ ಘಟಕದಿಂದ ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಭೀಮ ಮಹಾಯಾನ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರದ ಕೋಟಿಗಟ್ಟಲೇ ಜನರು ಸಂವಿಧಾನದ ಫಲಾನುಭವಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ಅಂಬೇಡ್ಕರ್ ಕೇವಲ ಒಂದು ವರ್ಗಕ್ಕೆ ಮೀಸಲಾತಿ ಒದಗಿಸಿಲ್ಲ. ಸರ್ವರಿಗೂ ಸಮಾನತೆ ಗಾಗಿ ರಚಿಸಿದ ಸಂವಿಧಾನದಿಂದ ಭಾರತದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಾಗಿದೆ ಎಂದು ಹೇಳಿದರು. ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ ಅಂಬೇಡ್ಕರ್ ದೇಶದಲ್ಲಿ ಹುಟ್ಟಲಿಲ್ಲ ಅಥವಾ ಸಂವಿಧಾನ ರಚಿಸದಿದ್ದರೆ ದೇಶದ ಪರಿಸ್ಥಿತಿ, ದೀನದಲಿತರ ಹಾಗೂ ಆರ್ಥಿಕ ಸ್ಥಿತಿ ಏನಾಗುತ್ತಿತ್ತು ಎಂದು ಒಮ್ಮೆ ಅವಲೋಕಿಸಬೇಕು. ಇದನ್ನರಿತ ವಿಶ್ವಸಂಸ್ಥೆ ಅಂಬೇಡ್ಕರ್ ಜನ್ಮದಿನವನ್ನು ವಿಶ್ವಜ್ಞಾನದ ದಿನವೆಂದು ಘೋಷಿಸಿ ಗೌರವ ಸಮರ್ಪಿಸಿದೆ ಎಂದರು. ಲೇಖಕಿಯರ ಸಂಘದ ಅಧ್ಯಕ್ಷೆ ಅಜ್ಜಂಪುರ ಎಸ್.ಶೃತಿ ವಿಶೇಷ ಉಪನ್ಯಾಸ ನೀಡಿದರು. ಕಸಾಪ ನಗರಾಧ್ಯಕ್ಷ ಸಚಿನ್ಸಿಂಗ್ಅ ಧ್ಯಕ್ಷತೆ ವಹಿಸಿದ್ದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಗೌರವ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ದಾಸ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಿರೇನಲ್ಲೂರು ಶ್ರೀನಿವಾಸ್, ಎಸ್ಸಿ, ಎಸ್ಟಿ ದೌರ್ಜನ್ಯ ವಿರೋಧಿ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಯುತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್.ಆದಿಲ್, ಅಂಬಳೆ ಹೋಬಳಿ ಅಧ್ಯಕ್ಷ ಮಾಸ್ತೇಗೌಡ ರೂಪ ನಾಯಕ್, ರವಿ ಕಳವಾಸೆ , ಸಿ.ಎಂ.ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.