ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರದ ಪುರಸ್ಕೃತ ಹೊಸ ಯೋಜನೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕ ಮಿಷನ್(ವಿಬಿ ಜಿ- ರಾಮ್ ಜಿ) ಇದೇ ಜುಲೈ 1ರಿಂದ ಜಾರಿಗೆ ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಡಾ.ವಾಸಂತಿ ಅಮರ್ ತಿಳಿಸಿದ್ದಾರೆ.
ವಿಬಿ-ಜಿ ರಾಮ್-ಜಿ ಯೋಜನೆಯಡಿ ದಿನಗೂಲಿಯನ್ನು ₹370ರಿಂದ ₹382ಕ್ಕೆ ಏರಿಕೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಜಂಟಿಯಾಗಿ ಆದೇಶ ಹೊರಡಿಸಿದ್ದು, ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ಮುಂದುವರೆಯಲಿದೆ. ಕೂಲಿ ಹಣವನ್ನು ಗರಿಷ್ಠ 15 ದಿನಗಳ ಒಳಗಾಗಿ ಕೂಲಿಕಾರರ ಬ್ಯಾಂಕ್ ಖಾತೆಗಳಿಗೆ ಕಡ್ಡಾಯವಾಗಿ ಜಮೆ ಮಾಡಬೇಕು. ವಿಳಂಬವಾದರೆ ದಂಡದ ರೂಪದಲ್ಲಿ ಪರಿಹಾರ ನೀಡಬೇಕಾಗುತ್ತದೆ. ಇಲ್ಲಿವರೆಗೂ ಮನರೇಗಾ ಯೋಜನೆಯಡಿ ನೀಡಿದ್ದ ಉದ್ಯೋಗ ಚೀಟಿಗಳನ್ನೆ ಮಾನ್ಯ ಮಾಡಿ, ಆಸಕ್ತರಿಗೆ ಕೆಲಸ ಒದಗಿಸಲು ಅವಕಾಶ ಕಲಿಸಲಾಗಿದೆ. ಜೂನ್ 30ರವರೆಗೆ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ಕಾಮಗಾರಿಗಳಲ್ಲಿ ವಿಬಿ -ಜಿ ರಾಮ್- ಜಿ ಯೋಜನೆ ನಿಯಮಕ್ಕೆ ಒಳಪಟ್ಟ ಕಾಮಗಾರಿಗಳನ್ನು ತಡೆರಹಿತ ಮುಂದುವರೆಲಾಗುವುದು.
ಜಿಲ್ಲೆಯಲ್ಲಿ ಶೇ.99.89 ಸಕ್ರಿಯ ಕೂಲಿಕಾರರ ಇ-ಕೆವೈಸಿ:ಗ್ರಾಮೀಣಾಭಿವೃದ್ಧಿ ಮಾರ್ಗಸೂಚಿಯಂತೆ ನೋಂದಾಯಿತ ಎಲ್ಲ ಕೂಲಿಕಾರರ ಇ- ಕೆವೈಸಿ ಮಾಡಿಸುವಲ್ಲಿ ಜಿಲ್ಲೆಯು ಶೇ.99.89ರಷ್ಟು ಸಕ್ರಿಯ ಕೂಲಿಕಾರರ ಇ-ಕೆವೈಸಿಯನ್ನು ಈಗಾಗಲೇ ಕೈಗೊಳ್ಳಲಾಗಿದೆ. ಅದೇ ರೀತಿ ಶೇ.86.54ರಷ್ಟು ನೋಂದಾಯಿತ ಎಲ್ಲ ಕೂಲಿಕಾರರ ಇ-ಕೆವೈಸಿಯನ್ನು ಕೂಡ ಕೈಗೊಳ್ಳಲಾಗಿದೆ. ವಲಸೆ ಹಾಗೂ ತಾಂತ್ರಿಕ ಕಾರಣದಿಂದ ಕೆಲವು ಕೂಲಿಕಾರರ ಇ-ಕೆವೈಸಿ ಬಾಕಿ ಇದ್ದು, ಅದಕ್ಕೂ ಕ್ರಮವಹಿಸಲಾಗುತ್ತಿದೆ ಎಂದರು.
ಹೊಸ ಯೋಜನೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕ ಮಿಷನ್ ಯೋಜನೆಯಲ್ಲಿ ಮುಖ್ಯವಾಗಿ 4 ವಿಷಯಾಧಾರಿತ ಕಾರ್ಯವರ್ಗಗಳ ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಜಲ ಭದ್ರತಾ ಕಾರ್ಯಗಳು, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಸಂಬಂಧಿತ ಮೂಲಸೌಕರ್ಯ, ತೀವ್ರ ಹವಾಮಾನ ಮತ್ತು ವಿಪತ್ತು ಶಮನ ಕಾರ್ಯಗಳು ಸೇರಿವೆ.
9ಕೆಡಿಬಿಪಿ2- ಬೆಂ.ಗ್ರಾ ಜಿಲ್ಲೆಯ ರೈತರೊಂದಿಗೆ ಸಂವಾದದಲ್ಲಿ ಸಿಇಒ ಡಾ.ವಾಸಂತಿ ಅಮರ್.