- ಕಸಬಾ ಹೋಬಳಿ ಕಬ್ಬಿಣ ಸೇತುವೆ ಅಂಗನವಾಡಿಗೆ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಂಕು
‘ಪುಟಾಣಿ ಮಕ್ಕಳಲ್ಲಿ ಉತ್ತಮ ಶಿಕ್ಷಣ ಕಲಿಯಲು ಸುಂದರವಾದ ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ವೆಂಕಟೇಶ್ ತಿಳಿಸಿದರು.ತಾಲೂಕಿನ ಕಸಬಾ ಹೋಬಳಿಯ ಕಬ್ಬಿಣ ಸೇತುವೆ ಪಾಳ್ಯ ಗ್ರಾಮದಲ್ಲಿ ಅಂಗನವಾಡಿ ಕಟ್ಟಡಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ‘ಗಣಿಭಾದಿತ ಹಣದಲ್ಲಿ ಸರ್ಕಾರಿ ಶಾಲೆಗಳು, ಅಂಗನವಾಡಿಗಳು, ರಸ್ತೆ ಕಾಮಗಾರಿ ಸೇರಿ ಹಲವು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಅದೇ ರೀತಿಯಲ್ಲಿ ತಾಲೂಕಿನ ಎಲ್ಲಾ ಅಂಗನವಾಡಿಗಳಿಗೂ ಕೂಡ ಸ್ವಂತ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಶಾಸಕರು ಯೋಜನೆಯನ್ನು ರೂಪಿಸಿದ್ದು, ತಾಲೂಕಿನಲ್ಲಿ 94 ಅಂಗನವಾಡಿ ಕಟ್ಟಡಗಳಿಗೆ ಕಾಮಗಾರಿ ಮಾಡಲಾಗುತ್ತಿದ್ದು, ಪ್ರತಿ ಅಂಗನವಾಡಿಗೆ 24 ಲಕ್ಷ ರು. ಹಣ ನೀಡಲಾಗಿದೆ. ಇಂದು ಕಬ್ಬಿಣ ಸೇತುವೆ ಗ್ರಾಮದ ಅಂಗನವಾಡಿಯನ್ನು ಗುಣಮಟ್ಟದಲ್ಲಿ ನಿರ್ಮಾಣ ಮಾಡಿ ಇನ್ನೂ 6 ತಿಂಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ. ಲೋಕೇಶ್ ಮಾತನಾಡಿ,‘ಅ-ಳವರೆಗೆ ಅಕ್ಷರ ಕಲಿಸುವಂತಹ ಅಂಗನವಾಡಿಗಳನ್ನು ಬಲಿಷ್ಠ ಮಾಡಿದಾಗ ಮುಂದಿನ ಶೈಕ್ಷಣಿಕ ಜೀವನ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತದೆ.
‘ಅಂಗನವಾಡಿಗಳಿಗೆ ಹೆಚ್ಚಿನ ರೀತಿಯ ಸೌಲಭ್ಯಗಳನ್ನು ನೀಡಿದಾಗ ಖಂಡಿತ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತ್ಯಂತ ಹೆಚ್ಚು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.ಅಂಗನವಾಡಿ ಮೇಲ್ವಿಚಾರಕಿ ಶಿವಮ್ಮ ಮಾತನಾಡಿ, ‘ನೂತನ ಕಟ್ಟಡ ನಿರ್ಮಾಣ ಆಗುತ್ತಿರುವುದರಿಂದ ಮಕ್ಕಳ ಸಂಖ್ಯೆ ಕೂಡ ಹೆಚ್ಚಿಸಲು ಸಹಕಾರಿ. ನಮ್ಮ ಅಂಗನವಾಡಿಗಳು ಸಹ ಇತ್ತೀಚೆಗೆ ಸ್ಮಾರ್ಟ್ ಆಗುತ್ತಿದ್ದು ಎಲ್ಲಾ ರೀತಿಯ ಸೌಲಭ್ಯವನ್ನು ಮಕ್ಕಳಿಗೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.ಶಿಶು ಅಭಿವೃದ್ಧಿ ಯೋಜನೆಯ ಸಹಾಯಕ ಯೋಜನಾಧಿಕಾರಿ ಮಂಜುಳ, ಪಿಡಿಒ ಚಂದ್ರಶೇಖರಯ್ಯ, ಬೋಜಣ್ಣ, ಜಯಣ್ಣ, ನರಸಣ್ಣ, ಕುಂಭರಾಜು, ರಾಜಣ್ಣ, ದಿನೇಶ್, ಯೋಗೀಶ್, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಬಲರಾಮಣ್ಣ, ದೇವೇಗೌಡ, ಗಂಗಮ್ಮ, ಅಂಗನವಾಡಿ ಶಿಕ್ಷಕಿ ಗೌರಮ್ಮ, ಸಹಾಯಕಿ ರಂಜಿತಾ, ಗುತ್ತಿಗೆದಾರ ರಾಮರೆಡ್ಡಿ, ಮಂಜುನಾಥ್ ಗ್ರಾಮಸ್ಥರು, ಮುಖಂಡರು ಇದ್ದರು.