ಬೆಳಗಾವಿಯಲ್ಲಿ ಆಷಾಢ ಏಕಾದಶಿ ಸಂಭ್ರಮ

KannadaprabhaNewsNetwork |  
Published : Jul 26, 2026, 03:15 AM IST
ಬೆಳಗಾವಿಯಲ್ಲಿ ಆಷಾಢ ಏಕಾದಶಿಯಯನ್ನು ಶ್ರದ್ಧಾ,ಭಕ್ತಿಯಿಂದ ಆಚರಿಸಲಾಯಿತು | Kannada Prabha

ಸಾರಾಂಶ

ಆಷಾಢ ಏಕಾದಶಿಯ ಪವಿತ್ರ ದಿನದಂದು ನಗರದ ಖಡೇಬಝಾರ್‌ನಲ್ಲಿರುವ ಪುರಾತನ ಶ್ರೀ ವಿಠ್ಠಲ-ರುಕ್ಮಿಣಿ ಮಂದಿರ ಭಕ್ತಿಭಾವದ ಕೇಂದ್ರವಾಗಿ ಕಂಗೊಳಿಸಿತು. ಮುಂಜಾನೆಯಿಂದಲೇ ನಗರದ ವಿವಿಧ ಬಡಾವಣೆಗಳು ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಮಂದಿರಕ್ಕೆ ಆಗಮಿಸಿ ವಿಠ್ಠಲ-ರುಕ್ಮಿಣಿಯ ದರ್ಶನ ಪಡೆದು ಪುನೀತರಾದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಆಷಾಢ ಏಕಾದಶಿಯ ಪವಿತ್ರ ದಿನದಂದು ನಗರದ ಖಡೇಬಝಾರ್‌ನಲ್ಲಿರುವ ಪುರಾತನ ಶ್ರೀ ವಿಠ್ಠಲ-ರುಕ್ಮಿಣಿ ಮಂದಿರ ಭಕ್ತಿಭಾವದ ಕೇಂದ್ರವಾಗಿ ಕಂಗೊಳಿಸಿತು. ಮುಂಜಾನೆಯಿಂದಲೇ ನಗರದ ವಿವಿಧ ಬಡಾವಣೆಗಳು ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಮಂದಿರಕ್ಕೆ ಆಗಮಿಸಿ ವಿಠ್ಠಲ-ರುಕ್ಮಿಣಿಯ ದರ್ಶನ ಪಡೆದು ಪುನೀತರಾದರು.

ಬೆಳಗಿನ ಜಾವ ಕಾಕಡಾರತಿ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಬಳಿಕ ವಿಠ್ಠಲ-ರುಕ್ಮಿಣಿ ಮೂರ್ತಿಗಳಿಗೆ ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆ ಸೇರಿದಂತೆ ಪಂಚಾಮೃತಗಳಿಂದ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಹೂವು, ತುಳಸಿ ಮಾಲೆ ಮತ್ತು ವಿವಿಧ ಆಭರಣಗಳಿಂದ ದೇವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ದೇವರ ದರ್ಶನ ಭಕ್ತರ ಮನದಲ್ಲಿ ಭಕ್ತಿಯ ಪುಳಕ ಮೂಡಿಸಿತು.ವಿಠ್ಠಲ ವಿಠ್ಠಲ ಪಾಂಡುರಂಗ, ಜಯ ಜಯ ರಾಮಕೃಷ್ಣ ಹರಿ ಎಂಬ ನಾಮಸ್ಮರಣೆಯ ಘೋಷಗಳು ಮಂದಿರದ ಆವರಣದಾದ್ಯಂತ ಮೊಳಗಿದವು. ಭಕ್ತರು ತಾಳ, ಮೃದಂಗ ಮತ್ತು ಜಾಗಟೆಗಳೊಂದಿಗೆ ಭಜನೆ, ಕೀರ್ತನೆ ಹಾಗೂ ಅಭಂಗಗಳನ್ನು ಹಾಡಿ ವಿಠ್ಠಲನ ಆರಾಧನೆ ಮಾಡಿದರು. ಮಕ್ಕಳು, ಮಹಿಳೆಯರು, ಯುವಕರು ಹಾಗೂ ಹಿರಿಯರು ಭಜನಾ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ವಾರಕರಿ ಸಂಪ್ರದಾಯದ ಭಕ್ತಿಪರಂಪರೆಯನ್ನು ಸ್ಮರಿಸಿದರು.ಬೆಳಗ್ಗೆಯಿಂದಲೇ ದೇವರ ದರ್ಶನಕ್ಕಾಗಿ ಭಕ್ತರು ಉದ್ದನೆಯ ಸಾಲಿನಲ್ಲಿ ನಿಂತಿದ್ದರು. ಸರತಿ ಸಾಲಿನಲ್ಲಿ ಸಾಗಿದ ಭಕ್ತರು ವಿಠ್ಠಲನ ಪಾದಕ್ಕೆ ತುಳಸಿ ಅರ್ಪಿಸಿ ತಮ್ಮ ಕುಟುಂಬದ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು. ವಯೋವೃದ್ಧರು ಹಾಗೂ ಮಕ್ಕಳ ದರ್ಶನಕ್ಕೆ ಅನುಕೂಲವಾಗುವಂತೆ ಮಂದಿರದ ಆಡಳಿತ ಮಂಡಳಿ ಮತ್ತು ಸ್ವಯಂಸೇವಕರು ವಿಶೇಷ ವ್ಯವಸ್ಥೆ ಕಲ್ಪಿಸಿದ್ದರು.ಆಷಾಢ ಏಕಾದಶಿ ಅಂಗವಾಗಿ ವಿಠ್ಠಲ-ರುಕ್ಮಿಣಿಯ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆಯೂ ನಡೆಯಿತು. ಅಲಂಕೃತ ಪಲ್ಲಕ್ಕಿಯಲ್ಲಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಖಡೇಬಝಾರ್ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಭಜನಾ ಮಂಡಳಿಗಳು ಅಭಂಗಗಳನ್ನು ಹಾಡುತ್ತ ಸಾಗಿದರೆ, ಭಕ್ತರು ವಿಠ್ಠಲನ ನಾಮಸ್ಮರಣೆ ಮಾಡುತ್ತ ಹೆಜ್ಜೆ ಹಾಕಿದರು. ಮೆರವಣಿಗೆ ಸಾಗಿದ ಮಾರ್ಗದಲ್ಲಿ ಸಾರ್ವಜನಿಕರು ಹೂಮಳೆ ಸುರಿಸಿ ದೇವರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು.ಮಂದಿರಕ್ಕೆ ಆಗಮಿಸಿದ ಭಕ್ತರಿಗೆ ಉಪವಾಸಕ್ಕೆ ಅನುಕೂಲವಾಗುವ ಫಲಾಹಾರ, ಸಾಬುದಾನಿ ಖಿಚಡಿ, ಸಿಹಿ ಪದಾರ್ಥ ಹಾಗೂ ಮಹಾಪ್ರಸಾದ ವಿತರಿಸಲಾಯಿತು. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ಪ್ರಸಾದ ಸ್ವೀಕರಿಸಿದರು. ಕುಡಿಯುವ ನೀರು, ಸಂಚಾರ ನಿಯಂತ್ರಣ ಹಾಗೂ ಭಕ್ತರ ಸುರಕ್ಷತೆಗಾಗಿ ಅಗತ್ಯ ವ್ಯವಸ್ಥೆ ಮಾಡಲಾಗಿತ್ತು.ಭಾಷೆ, ಜಾತಿ, ಧರ್ಮ, ಪಂಥ, ಬಡತನ ಮತ್ತು ಸಿರಿತನದ ಎಲ್ಲೆಗಳನ್ನು ಮೀರಿ ಎಲ್ಲರನ್ನೂ ಒಂದೇ ಭಕ್ತಿಯ ದಾರಿಯಲ್ಲಿ ಬೆಸೆಯುವ ವಾರಕರಿ ಸಂಪ್ರದಾಯದ ಮಾನವೀಯ ಸಂದೇಶ ಖಡೇಬಝಾರ್‌ನಲ್ಲಿ ಅನಾವರಣಗೊಂಡಿತು. ಪಂಢರಪುರದ ಚಂದ್ರಭಾಗಾ ತೀರದಲ್ಲಿ ನಡೆಯುವ ಭಕ್ತಿಯ ಸಂಭ್ರಮವೇ ಬೆಳಗಾವಿಯ ಖಡೇಬಝಾರ್‌ನಲ್ಲಿ ಮರುಕಳಿಸಿದಂತಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್‌ಸಿಸಿ ಕೆಡೆಟ್‌ಗಳಿಗೆ ತಿಂಗಳ ಕಾಲ ನಗರದಲ್ಲಿ ತರಬೇತಿ
ರಸ್ತೆ, ಸೇತುವೆಗಳ ದುರಸ್ತಿಗೆ ₹131 ಕೋಟಿ ಅನುದಾನ