ನವಲಗುಂದ: ಎಸ್.ಐ.ಆರ್. ನೆಪದಲ್ಲಿ ದೇಶವ್ಯಾಪಿ ಕೋಟ್ಯಂತರ ಅಮಾಯಕ ಜನರ ಮತದಾನದ ಹಕ್ಕನ್ನು ಕಸಿಯಲು ಕೇಂದ್ರ ಚುನಾವಣಾ ಆಯೋಗ ಹೊರಟಿದೆ ಎಂದು ಆರೋಪಿಸಿ ಶನಿವಾರ ಎಸ್.ಐ.ಆರ್. ವಿರೋಧಿ ಜಾತ್ಯಾತೀತ ಪಕ್ಷಗಳ ಜನಪರ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕದಿಂದ ತಹಸೀಲ್ದಾರ್ ಮೂಲಕ ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಮಹಿಳಾ ಸಾಂತ್ವನ ಕೇಂದ್ರದ ಕಾರ್ಯಕರ್ತೆ ಸವಿತಾ ಸರನಾಡಗೌಡರ ಮಾತನಾಡಿ, ಸದ್ಯ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಗೆ ನಮ್ಮದು ಯಾವುದೇ ರೀತಿಯ ವಿರೋಧವಿಲ್ಲ. ಮತದಾರರ ತೀವ್ರ ಪರಿಷ್ಕರಣೆ ವೇಳೆ ಜನರನ್ನೆಲ್ಲ ಆರೋಪಿಗಳಂತೆ ಕಾಣುವ, ಅಮಾಯಕ ಜನರನ್ನು ಪರದಾಡುವಂತೆ ಮಾಡುವ ಮೂಲಕ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವ ಕೆಲಸ ಜನ ವಿರೋಧಿ ನೀತಿಯಾಗಿದೆ ಎಂದರು.
ಮಹಿಳಾ ಸಾಂತ್ವನ ಕೇಂದ್ರದ ಕಾರ್ಯಕರ್ತೆ ಕಾವೇರಿ ಗುಡಿಸಾಗರ ಮಾತನಾಡಿ, ಕಾಗದದ ಗದ್ದಲಗಳಲ್ಲಿ ಇದುವರೆಗೆ ಮತದಾರರ ಪಟ್ಟಿಯಲ್ಲಿ ಅತೀ ಹೆಚ್ಚು ಡಿಲೀಟ್ ಆಗಿರುವವರು ವಿವಾಹಿತ ಮಹಿಳೆಯರು, ಅಲೆಮಾರಿ ಅದಿವಾಸಿ ದಲಿತ ಸಮುದಾಯಗಳ, ಗ್ರಾಮೀಣ ಭಾಗದ ಬಡವರು ಹಾಗೂ ಅಲ್ಪ ಸಂಖ್ಯಾತರು, ಈ ಎಸ್ಐಆರ್ನ ಅಸಲಿ ಉದ್ದೇಶ ಬೇರೆಯೇ ಇದೆ ಎಂದರು.ಸಾಮಾಜಿಕ ಕಾರ್ಯಕರ್ತೆ ಗಿರಿಜಾ ಹೂಗಾರ, ಶ್ರುತಿ ಬೆಂಡಿಗೇರಿ, ಆರ್ಟಿಐ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ, ಮಲ್ಲಿಕಾರ್ಜುನಸ್ವಾಮಿ ಮಠಪತಿ, ಶಿವಲಿಂಗಯ್ಯ ಹಿರೇಮಠ, ಬಸವರಾಜ ಮಲ್ಲದಾಸರ ಸೇರಿ ಹಲವರಿದ್ದರು.