ನರೇಗಲ್ಲ: ಚೈತನ್ಯ ಕ್ರೀಡಾ ಸಂಸ್ಥೆಯ ಅಡಿಯಲ್ಲಿ ಜ.8ರಿಂದ 15 ರ ವರೆಗೆ ಸಮೀಪದ ಜಕ್ಕಲಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಅಟ್ಯಾಪಟ್ಯಾ ಅಸೋಶಿಯೇಷನ್ ಸಹಭಾಗಿತ್ವದಲ್ಲಿ ಐದು ದಿನಗಳಕಾಲ ಹಮ್ಮಿಕೊಂಡಿದ್ದ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಜರುಗಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎನ್.ಕೆ. ಬೇವಿನಕಟ್ಟಿ ಮಾತನಾಡಿ, ಕೇರಳದಲ್ಲಿ ಜರುಗುವ 7 ನೇ ಫೆಡರೇಷನ್ ಕಪ್ ನಲ್ಲಿ ತಾವುಗಳೆಲ್ಲ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಜಯಶಾಲಿಯಾಗಿ, ಕ್ರೀಡೆಯಲ್ಲಿ ಏಕಾಂಗಿ ಹೋರಾಟ ಜಯ ನೀಡುವದಿಲ್ಲ, ಇಡೀ ತಂಡದ ಸಮಯೋಚಿತ ಪ್ರಜ್ನೆ, ಪ್ರತಿ ಕ್ಷಣ ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಗೆಲುವು ಸಿಗಲು ಸಾಧ್ಯ ಎಂದರು. ತಂಡಕ್ಕೆ ರಾಜ್ಯ ಅಟ್ಯಾಪಟ್ಯಾ ಸಂಸ್ಥೆಯ ಕಾರ್ಯದರ್ಶಿ ಎಲ್.ಸಿ. ಲಮಾಣಿ, ರಾಷ್ಟ್ರೀಯ ತರಬೇತುದಾರ ಕೃಷ್ಣಾ ನಡಮನಿ, ಸಂಪನ್ಮೂಲ ತರಬೇತುದಾರ ಶಿಕ್ಷಕ ವಿ.ಎ. ಕುಂಬಾರ, ಸಂಸ್ಥೆಯ ತರಬೇತುದಾರ ಮಹಮ್ಮದ ರಫೀಕ್ ರೇವಡಿಗಾರ ಮಾತನಾಡಿದರು. ಜ.17 ಮತ್ತು 18ರಂದು ಕೇರಳದಲ್ಲಿ ಜರುಗುವ 7ನೇ ರಾಷ್ಟ್ರೀಯ ಅಟ್ಯಾಪಟ್ಯಾ ಫೆಡರೇಷನ್ ಕಪ್ನಲ್ಲಿ ಸ್ಥಳೀಯ ಚೈತನ್ಯ ಕ್ರೀಡಾ ಸಂಸ್ಥೆಯ ಐದು ಕ್ರೀಡಾಪಟುಗಳು ಕರ್ನಾಟಕ ತಂಡ ಪ್ರತಿನಿಧಿಸಲಿದ್ದು, ಅವರಲ್ಲಿ ಭೀಮಮ್ಮ ಪೂಜಾರ, ಜ್ಯೋತಿ ಪೂಜಾರ, ಮಹೇಶ್ವರಿ ಹನಮಂತಗೌಡ್ರ, ಪ್ರೀತಿ ಬುಳ್ಳಾ ಹಾಗೂ ಸುರೇಖಾ ಕೊಂಡಿ ಆಯ್ಕೆಯಾಗಿದ್ದಾರೆ, ಜೊತೆಗೆ ನರಗುಂದ ತಾಲೂಕು ವಾಸನದಿಂದ ಪ್ರಿಯಾಂಕಾ ಮಾದರ, ಹುಬ್ಬಳ್ಳಿಯಿಂದ ವೈಶಾಲಿ ದಡ್ಡಿಗೌಡರ, ಅಂಚಟಗೇರಿಯಿಂದ ಅನಿತಾ ಬಿಚಗತ್ತಿ, ಸುಶ್ಮಾ ಪಾಟೀಲ, ಅಮೂಲ್ಯಾ ಚವರಗುಡ್ಡ, ಗಳಗಿ ಹುಲಿಕೊಪ್ಪದಿಂದ ಶ್ರಿದೇವಿ ಹಡಪದ ಹಾಗೂ ಹಾವೇರಿಯಿಂದ ಕೃಪಾ ಮುಧೋಳ ಒಟ್ಟು 12 ರೀಡಾಪಟುಗಳು ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.