ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಮತ್ತು ಪಂಚಾಯ್ತಿ ಸೃಜಿಸಿರುವ ಎಲ್ಲ ಸರ್ಕಾರಿ ಆಸ್ತಿಗಳನ್ನು ಜಿಯೋಟ್ಯಾಗ್ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಇಂದಿಗೂ 7483 ಶೌಚಗುಂಡಿ ಕಾರ್ಮಿಕರು (ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್) ಇದ್ದಾರೆ ಎಂದು ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ನೀಡಿರುವ ಹೇಳಿಕೆ ಉಲ್ಲೇಖಿಸಿದ ಸಚಿವರು, ಯಾವುದೇ ಮಲಗುಂಡಿಯ ಸ್ವಚ್ಛತೆಯನ್ನು ಯಾವುದೇ ಕರ್ಮಚಾರಿಯ ಕೈಯಿಂದ ಮಾಡಿಸಿದರೆ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು, ಯಂತ್ರಗಳ ಮೂಲಕವೇ ಸ್ವಚ್ಛತೆ ಮಾಡಬೇಕೆಂದು ಸೂಚಿಸಲಾಗಿದ್ದು ಇದಕ್ಕಾಗಿ ಅಗತ್ಯವಿರುವ ಜೆಟ್ಟಿಂಗ್, ಸಕ್ಕಿಂಗ್ ಯಂತ್ರ ಖರೀದಿಸಲಾಗುವುದು ಎಂದರು. ತಾವು ಈ ಹಿಂದೆ ಪೌರಾಡಳಿತ ಸಚಿವರಾಗಿದ್ದಾಗ ಮಲತ್ಯಾಜ್ಯ ಸಂಸ್ಕರಣಾ ಘಟಕ (ಎಫ್ಎಸ್ಟಿಪಿ) ನಿರ್ಮಿಸಲು ಯೋಜನೆ ರೂಪಿಸಿ, ದೇವನಹಳ್ಳಿಯಲ್ಲಿ ಕೂಡ ಒಂದು ಎಫ್ಎಸ್ಟಿಪಿ ಮಾಡಿದ್ದನ್ನು ಸ್ಮರಿಸಿದ ಈಶ್ವರ ಖಂಡ್ರೆ, ಈಗ ಪಂಚಾಯ್ತಿ ಮಟ್ಟದಲ್ಲೂ ಎಫ್ಎಸ್ಟಿಪಿ ನಿರ್ಮಿಸುವುದಾಗಿ ತಿಳಿಸಿದರು.
ಯುಪಿಎ ಕಾರ್ಯಕಾಲದಲ್ಲಿ ಜಾರಿಗೆ ತಂದ ನರೇಗಾದ ಬದಲಾದ ರೂಪವಾದ ವಿಬಿ ಜೀ ರಾಮ್ ಜೀಯನ್ನು ಜುಲೈ 1ರಿಂದ ಜಾರಿ ಮಾಡಬೇಕಾಗಿದ್ದು, ಕೇಂದ್ರ ಸರ್ಕಾರ ಯೋಜನೆಯ ವೇತನಕ್ಕಾಗಿ ನೀಡುವ ಅನುದಾನವನ್ನು ಮನ್ರೇಗಾದಲ್ಲಿದ್ದ 90:10 ಅನುಪಾತದಲ್ಲಿಯೇ ನೀಡಬೇಕು. ಇಲ್ಲವೇ ಕನಿಷ್ಠ 80:20 ಅನುಪಾತಕ್ಕಾದರೂ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿರುವುದಾಗಿ ತಿಳಿಸಿದರು.ಇದೇ ತಿಂಗಳ 28 ಮತ್ತು 29ರಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು ಕರೆದಿರುವ ಸಭೆಯಲ್ಲಿ ಭಾಗಿಯಾಗಿ ಯೋಜನೆಯಡಿ ಯಾವ ಕಾಮಗಾರಿ ನಡೆಸಬೇಕು ಎನ್ನುವ ಸ್ವಾತಂತ್ರ್ಯರಾಜ್ಯಗಳಿಗೆ ಇರಬೇಕು, 60 ದಿನಗಳ ಕೆಲಸಕ್ಕೆ ನೀಡಿರುವ ಬಿಡುವು ಕೈ ಬಿಡಬೇಕು ಹಾಗೂ ಕರ್ನಾಟಕ ಈಗಾಗಲೇ ಕನಿಷ್ಠ ವೇತನ ಹೆಚ್ಚಳಕ್ಕೆ ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿ ವಿಬಿಜೀ ರಾಮ್ ಜೀಯ ವೇತನವನ್ನು ಅದಕ್ಕೆ ಸರಿದೂಗಿಸುವ ರೀತಿಯಲ್ಲಿ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಲಾಗುವುದು ಎಂದರು.
ವರ್ಷಾಂತ್ಯದೊಳಗೆ ಪಂಚಾಯಿತಿ ಚುನಾವಣೆ:
ಜಲಜೀವನ ಅಭಿಯಾನದ ಅಡಿಯಲ್ಲಿ ಪೈಪ್ಲೈನ್ ಅಳವಡಿಸಲು ಅಗೆದಿರುವ ರಸ್ತೆಯನ್ನು ಮರು ಅಭಿವೃದ್ಧಿ ಪಡಿಸದೇ ಇರುವ ಕಾರಣ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಏನು ಕ್ರಮ ವಹಿಸುತ್ತೀರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡುವುದಾಗಿ ತಿಳಿಸಿದರು.
ಜಲ ಜೀವನ್ ಮಿಷನ್ ಮತ್ತು ರಸ್ತೆ ಅಭಿವೃದ್ಧಿ ಸೇರಿದಂತೆ ಯಾವುದೇ ಕಾಮಗಾರಿಯಲ್ಲಿ ಯಾರೇ ಗುತ್ತಿಗೆದಾರರು ವಿಳಂಬ ಮಾಡಿದ್ದರೆ, ನೋಟಿಸ್ ಜಾರಿ ಮಾಡಿ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸುವಂತೆ ತಿಳಿಸಿದರು.
ಕೊಳವೆ ಬಾವಿಯಿಂದ ಪೂರೈಸುವ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿ ಪ್ಲೊರೈಡ್ ಸೇರಿದಂತೆ ಯಾವುದೇ ಅಪಾಯಕಾರಿ ಅಂಶಗಳಿದ್ದರೆ ಕೂಡಲೇ ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಿದರು.
12ಕೆಡಿಬಿಪಿ9-