ಗುಂಡ್ಲುಪೇಟೆ: ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ, ಕಂದಕ ಬದು, ಟಾರ್ಪಾಲೀನ್, ಡಿಸೇಲ್ ಪಂಪ್ ಸೆಟ್, ತುಂತುರು ನೀರಾವರಿ ಉಪಕರಣ ಹಾಗೂ ಕೃಷಿ ಹೊಂಡದ ತಂತಿ ಬೇಲಿಗೆ ಸಹಾಯ ಧನ ನೀಡಲಾಗುತ್ತಿದೆ. ಕೃಷಿ ಹೊಂಡ, ಕಂದಕ ಬದು, ಟಾರ್ಪಾಲೀನ್ಗೆ ಸಾಮಾನ್ಯ ವರ್ಗಕ್ಕೆ ಶೇ.80 ಸಹಾಯ ಧನ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ.90 ರಷ್ಟು ಸಹಾಯ ಧನ ನೀಡಲಾಗುತ್ತಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಶಶಿಧರ್ ಮಾಹಿತಿ ನೀಡಿದ್ದಾರೆ.
ರಂಗೂಪುರ ಶಿವಕುಮಾರ್
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕೃಷಿ ಭಾಗ್ಯ ಯೋಜನೆಯಡಿ ರೈತರ ಪಾಲಿಗೆ ವರದಾನವಾದ ಕೃಷಿ ಹೊಂಡಗಳಿಗೆ ರೈತರು ಆಸಕ್ತಿ ವಹಿಸಿದಷ್ಟು ಹೊಂಡಗಳಿಗೆ ತಂತಿ ಬೇಲಿ ಹಾಕಲು ಮುಂದೆ ಬರುತ್ತಿಲ್ಲ, ಇನ್ನಾದರೂ ತಂತಿ ಬೇಲಿ ಹಾಕಿಸಿ ಅವಘಡ ತಪ್ಪಿಸಬೇಕಾಗಿದೆ.
ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ, ಕಂದಕ ಬದು, ಟಾರ್ಪಾಲೀನ್, ಡಿಸೇಲ್ ಪಂಪ್ ಸೆಟ್, ತುಂತುರು ನೀರಾವರಿ ಉಪಕರಣ ಹಾಗೂ ಕೃಷಿ ಹೊಂಡ ತಂತಿ ಬೇಲಿಗೆ ಸಹಾಯ ಧನ ನೀಡಲಾಗುತ್ತಿದೆ. ಆದರೂ ಕೃಷಿ ಹೊಂಡ ಫಲಾನುಭವಿ ರೈತರಲ್ಲಿ ಶೇ.70ರಷ್ಟು ಮಂದಿ ತಂತಿ ಬೇಲಿ ಹಾಕಿಸಿಕೊಳ್ಳಲು ಮುಂದಾಗಿಲ್ಲ.
ಈ ಹೊಂಡಗಳಿಗೆ ಜನ ಸಾಮಾನ್ಯರು ಬಿದ್ದು ಪ್ರಾಣ ಕಳೆದುಕೊಂಡ ಸಾಕಷ್ಟು ಉದಾಹರಣೆಗಳಿವೆ, ಆದರೂ ಫಲಾನುಭವಿ ಬಹುತೇಕ ರೈತರು ಕೃಷಿ ಹೊಂಡಕ್ಕೆ ತಂತಿ ಬೇಲಿ ಹಾಕಿಸುತ್ತಿಲ್ಲ ಎಂಬುದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಕೃಷಿ ಹೊಂಡಕ್ಕೆ ಕಡ್ಡಾಯವಾಗಿ ತಂತಿ ಬೇಲಿ ಹಾಕಬೇಕು ಎಂದು ಕೃಷಿ ಇಲಾಖೆ ತಾಕೀತು ಮಾಡಿದೆ. ಆದರೆ ರೈತರಲ್ಲಿ ಬಹುತೇಕರು ತಂತಿ ಬೇಲಿ ಹಾಕಿಸುತ್ತಿಲ್ಲ. ಕೃಷಿ ಇಲಾಖೆ ಹಿಡಿದಿರುವ ಶೇ.25 ರಷ್ಟು ಸಹಾಯ ಧನ ಪಡೆದಿಲ್ಲ ಎಂದು ಕೃಷಿ ಸಹಾಯಕ ನಿರ್ದೇಶಕ ಶಶಿಧರ್ ಹೇಳಿದ್ದಾರೆ.
ಕೃಷಿ ಹೊಂಡ ನಿರ್ಮಿಸುವ ರೈತರಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಗುಂಪು ಮಾಡಲಾಗಿದೆ. ಫಲಾನುಭವಿ ರೈತರಿಗೆ ಗುಂಪು ಕರೆ ಮಾಡಿ ಕೃಷಿ ಹೊಂಡಕ್ಕೆ ಕಡ್ಡಾಯವಾಗಿ ತಂತಿ ಬೇಲಿ ಹಾಕಿದ ಬಳಿಕ ಸಹಾಯ ಧನ ಪಡೆಯಿರಿ ಎಂದು ತಿಳಿವಳಿಕೆ ನೀಡಿದರೂ ರೈತ ಫಲಾನುಭವಿಗಳು ಮುಂದೆ ಬರುತ್ತಿಲ್ಲ ಎಂದರು.
2023- 24ನೇ ಸಾಲಿನಲ್ಲಿ 67 ಕೃಷಿ ಹೊಂಡ, 2024- 25ನೇ ಸಾಲಿನಲ್ಲಿ 131 ಕೃಷಿ ಹೊಂಡ, 2025- 26ನೇ ಸಾಲಿನಲ್ಲಿ 68 ಕೃಷಿ ಹೊಂಡದ ಜೊತೆಗೆ ಇನ್ನೂ 75 ಕೃಷಿ ಹೊಂಡ ನಿರ್ಮಾಣವಾಗಲಿವೆ. ಆದರೆ ಕೃಷಿ ಹೊಂಡದಲ್ಲಿ ಅಪಾಯ ತಡೆಗಟ್ಟಲು ಇನ್ನಾದರೂ ಫಲಾನುಭವಿ ರೈತರು ತಂತಿ ಬೇಲಿ ಹಾಕಿಸಿ ಸಹಾಯ ಧನ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಆಸಕ್ತಿ ಕೃಷಿ ಹೊಂಡಕ್ಕೆ:
ತಾಲೂಕಿನಲ್ಲಿ ಮಳೆ ಕೊರತೆಯಿಂದ ಅಂತರ್ಜಲ ಕುಸಿತಗೊಂಡು ಕೃಷಿ ಚಟುವಟಿಕೆಗೆ ನೀರು ಅಗತ್ಯವಾಗಿ ಬೇಕಾಗಿರುವ ಕಾರಣ ರೈತರು ಕೃಷಿ ಹೊಂಡ ನಿರ್ಮಿಸಲು ಆಸಕ್ತಿ ವಹಿಸಿದ್ದು, ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ.
ಆದರೆ, ರೈತರು ವಿವಿಧ ಇಲಾಖೆಗಳಿಂದ ಕೃಷಿ ಹೊಂಡ ನಿರ್ಮಿಸಲು ಸಹಾಯ ಧನ ಪಡೆದು ತಮ್ಮ ಕೃಷಿ ಜಮೀನಿನಲ್ಲಿ ನಿರ್ಮಿಸಿ ಕೊಂಡರೂ ಕೃಷಿ ಹೊಂಡದಿಂದಾಗುವ ಅನಾಹುತ/ಅವಘಡ ತಪ್ಪಿಸಲು ಮುಂದಾಗುತ್ತಿಲ್ಲ.
-----------
ಕೃಷಿಹೊಂಡ ತಂತಿ ಬೇಲಿಗೆ ಸಹಾಯಧನ
ಗುಂಡ್ಲುಪೇಟೆ: ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ, ಕಂದಕ ಬದು, ಟಾರ್ಪಾಲೀನ್, ಡಿಸೇಲ್ ಪಂಪ್ ಸೆಟ್, ತುಂತುರು ನೀರಾವರಿ ಉಪಕರಣ ಹಾಗೂ ಕೃಷಿ ಹೊಂಡದ ತಂತಿ ಬೇಲಿಗೆ ಸಹಾಯ ಧನ ನೀಡಲಾಗುತ್ತಿದೆ. ಕೃಷಿ ಹೊಂಡ, ಕಂದಕ ಬದು, ಟಾರ್ಪಾಲೀನ್ಗೆ ಸಾಮಾನ್ಯ ವರ್ಗಕ್ಕೆ ಶೇ.80 ಸಹಾಯ ಧನ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ.90 ರಷ್ಟು ಸಹಾಯ ಧನ ನೀಡಲಾಗುತ್ತಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಶಶಿಧರ್ ಮಾಹಿತಿ ನೀಡಿದ್ದಾರೆ.
ಕನ್ನಡಪ್ರಭದೊಂದಿಗೆ ಮಾತನಾಡಿ, ತುಂತುರು ನೀರಾವರಿ ಉಪಕರಣಗಳಿಗೆ ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ.90 ರಷ್ಟು ಸಹಾಯ ಧನ ನೀಡಲಾಗುತ್ತಿದೆ. ಕೃಷಿ ಹೊಂಡ ತಂತಿ ಬೇಲಿಗೆ ಸಾಮಾನ್ಯ ವರ್ಗಕ್ಕೆ ಶೇ.40ರಷ್ಟು ಸಹಾಯ ಧನ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ.50ರಷ್ಟು ಸಹಾಯ ಧನ ಸಿಗಲಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.