ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ದ.ಕ ಜಿಲ್ಲಾ ಸಹಕಾರಿ ಯೂನಿಯನ್, ದ.ಕ. ಹಾಲು ಒಕ್ಕೂಟ ನಿಯಮಿತ ಮಂಗಳೂರು ಹಾಗೂ ಸಹಕಾರ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಹಾಗೂ ಮೂಡುಬಿದಿರೆ ತಾಲೂಕಿನ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವಿಶೇಷ ತರಬೇತಿ ಶಿಬಿರ ದ.ಕ. ಸಹಕಾರಿ ಹಾಲು ಒಕ್ಕೂಟದ ಡಾ. ವರ್ಗೀಸ್ ಕುರಿಯನ್ ಸಭಾಂಗಣದಲ್ಲಿ ನಡೆಯಿತು.
ತರಬೇತಿ ಉದ್ಘಾಟಿಸಿ ಮಾತನಾಡಿದ ದ.ಕ. ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಮಾತನಾಡಿ, ಸಹಕಾರ ಕಾಯಿದೆ ತಿಳುವಳಿಕೆ ಕೊರತೆ ಇದ್ದರೆ ಸಹಕಾರ ಸಂಘಗಳನ್ನು ನಡೆಸುವುದು ಕಷ್ಟಕರವಾಗುತ್ತದೆ. ಆದ್ದರಿಂದ ಸಹಕಾರ ಕಾಯಿದೆ, ಬೈಲಾ ಈ ಎರಡನ್ನು ತಿಳಿದುಕೊಂಡರೆ ಯಾವುದೇ ರೀತಿಯ ಅಡ್ಡಿ ಆತಂಕಗಳು ಬರದೇ ಉತ್ತಮ ರೀತಿಯ ಸಹಕಾರ ಸಂಘಗಳನ್ನು ಮುನ್ನಡೆಸಬಹುದು ಎಂದರು.ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ದೇಶದ ಕ್ಷೀರ ಕ್ರಾಂತಿಗೆ ಹೈನುಗಾರರ ಪಾತ್ರ ಮಹತ್ವದ್ದಾಗಿದೆ ರಾಸುಗಳ ಖರೀದಿಗೆ ಒಂದು ಎಕರೆ ಇರುವವರಿಗೂ ೩ ಲಕ್ಷ ರು. ವರೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಇದರ ಸದುಪಯೋಗ ಹೈನುಗಾರ ಸದಸ್ಯರಿಗೆ ತಿಳಿಯಪಡಿಸಬೇಕು. ಕಳೆದ ೬ ತಿಂಗಳಿಂದ ಹಾಲು ಒಕ್ಕೂಟ ೨೫ ಸಾವಿರ ಲೀ. ನಿಂದ ೭೫ ಸಾವಿರ ಲೀ. ಗೆ ಹಾಲು ಉತ್ಪಾದನೆಯನ್ನು ಹೆಚ್ಚಳ ಮಾಡಲಾಗಿದೆ ಎಂದರು. ಹಾಲು ಒಕ್ಕೂಟದ ನಿರ್ದೇಶಕರಾದ ಸುಚರಿತ ಶೆಟ್ಟಿ ಸವಿತಾ ಎನ್. ಶೆಟ್ಟಿ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಸುಧಾಕರ ಶೆಟ್ಟಿ, ಜೋಯ್ಲಸ್ ವಿಲ್ಫ್ರೇಡ್ ಡೀಸೋಜಾ, ಸಾವಿತ್ರಿ ರೈ ದ.ಕ. ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ವಿವೇಕ್ ಡಿ, ವ್ಯವಸ್ಥಾಪಕ ರವಿರಾಜ ಉಡುಪ ಇದ್ದರು.
ಬಳಿಕ ತರಬೇತಿ ಶಿಬಿರದಲ್ಲಿ ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ. ಚಂದ್ರಶೇಖರ್ ಭಟ್ ಇವರು ಹಾಲಿನ ಗುಣಮಟ್ಟ, ರಾಸುಗಳ ನಿರ್ವಹಣೆ ಮತ್ತು ಒಕ್ಕೂಟದ ಯೋಜನೆಗಳು, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ದ.ಕ ಸಹಕಾರಿ ಹಾಲು ಒಕ್ಕೂಟದ ನಿವೃತ್ತ ಸಹಾಯಕ ವ್ಯವಸ್ಥಾಪಕ ಕೆ.ಸುಬ್ಬರಾವ್ ಲೆಕ್ಕಪತ್ರಗಳ ನಿರ್ವಹಣೆ, ಸಂಘದಲ್ಲಿ ಇರಬೇಕಾದ ಪ್ರಮುಖ ದಾಖಲೆ ಪುಸ್ತಕಗಳು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.ದ.ಕ ಜಿಲ್ಲಾ ಸಹಕಾರಿ ಯೂನಿಯನ್ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ವಿ.ಹಿರೇಮಠ ಸ್ವಾಗತಿಸಿ, ವಂದಿಸಿದರು.