ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಪತಿ ಸೇರಿ ಇತರರ ಸಹಿ ನಕಲು ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಹಣಕಾಸು ಅಧಿಕಾರಿ, ಆಡಳಿತ ಕುಲಸಚಿವರು ಸೇರಿ 9 ಜನರ ತನಿಖಾ ಸಮಿತಿ ರಚಿಸಲಾಗಿದೆ
ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಪತಿ ಸೇರಿ ಇತರರ ಸಹಿ ನಕಲು ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಹಣಕಾಸು ಅಧಿಕಾರಿ, ಆಡಳಿತ ಕುಲಸಚಿವರು ಸೇರಿ 9 ಜನರ ತನಿಖಾ ಸಮಿತಿ ರಚಿಸಲಾಗಿದೆ. ತನಿಖೆಯನ್ನು ಫೆ. 28ರೊಳಗೆ ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚಿಸಲಾಗಿದೆ.
]ವಿವಿ ಕೆಲ ಗುತ್ತಿಗೆ ನೌಕರರು, ವಿವಿ ಕುಲಪತಿ ಸೇರಿ ಇತರರ ನಕಲಿ ಸಹಿ ಮಾಡಿ 60ಕ್ಕೂ ಹೆಚ್ಚು ಜನರಿಗೆ ಘಟಿಕೋತ್ಸವ ಪ್ರಮಾಣಪತ್ರ ವಿತರಣೆ ಮಾಡಿರುವ ಪ್ರಕರಣ ಶುಕ್ರವಾರ ಹೊರ ಬರುತ್ತಿದ್ದಂತೆಯೇ ಕುಲಪತಿ ಸೂಚನೆ ಮೇರೆಗೆ ಮೌಲ್ಯಮಾಪನ ಕುಲಸಚಿವರು ತನಿಖಾ ಸಮಿತಿ ರಚಿಸಿದ್ದಾರೆ. ಸಮಿತಿ ನೀಡುವ ವರದಿ ಆಧರಿಸಿ ವಿವಿ ಸೂಕ್ತ ಕಾನೂನು ಕ್ರಮ ಜರುಗಿಸಲಿದೆ. ಸದ್ಯಕ್ಕೆ 60 ಜನರಿಗೆ ಮಾತ್ರ ಪ್ರಮಾಣಪತ್ರ ವಿತರಣೆ ಮಾಡಿರುವುದು ಗೊತ್ತಾಗಿದ್ದು, ತನಿಖೆಯ ಬಳಿಕ ಇನ್ನೂ ಎಷ್ಟು ಜನರಿಗೆ ಈ ರೀತಿ ವಂಚನೆ ಮಾಡಲಾಗಿದೆ ಎಂಬುದು ಹೊರ ಬರುವ ಸಾಧ್ಯತೆಯಿದೆ.
ವಿಶ್ವವಿದ್ಯಾಲಯದ ಗುತ್ತಿಗೆ ನೌಕರರೊಬ್ಬರು ವಿದ್ಯಾರ್ಥಿನಿಯೊಬ್ಬರಿಂದ ಹಣ ಪಡೆದು ನಕಲಿ ಸಹಿ ಬಳಸಿ ಘಟಿಕೋತ್ಸವ ಪ್ರಮಾಣಪತ್ರ ವಿತರಣೆ ಮಾಡಿದ್ದಾರೆ. ಘಟಿಕೋತ್ಸವ ಪ್ರಮಾಣಪತ್ರ ಪಡೆದ ಬಳಿಕ ಶುಲ್ಕ ಪಾವತಿಯ ರಶೀದಿ ನೀಡದ ಗುತ್ತಿಗೆ ನೌಕರನ ನಡೆಯಿಂದ ಅನುಮಾನಗೊಂಡ ವಿದ್ಯಾರ್ಥಿನಿ ವಿಶ್ವವಿದ್ಯಾಲಯಕ್ಕೆ ಆಗಮಿಸಿ ವಿಚಾರಿಸಿದಾಗ ಪ್ರಕರಣ ಹೊರ ಬಿದ್ದಿದೆ.
2021/22 ರಿಂದ ವಿತರಣೆ ಮಾಡಲಾದ ಘಟಿಕೋತ್ಸವ ಪ್ರಮಾಣಪತ್ರ ಪರಿಶೀಲಿಸಬೇಕಾಗಿದೆ. ವರದಿ ಬರುತ್ತಿದ್ದಂತೆಯೇ ಮತ್ತೊಂದು ಸಮಿತಿಯಿಂದ ತನಿಖೆ ಮಾಡಲಾಗುವುದು. ಬಳಿಕ ಆರೋಪಿತರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗುವುದು ಎಂದು ವಿವಿ ಕುಲಪತಿ ಪ್ರೊ. ಮುನಿರಾಜು ಕನ್ನಡಪ್ರಭಕ್ಕೆ ತಿಳಿಸಿದರು.