ಸರ್ವ ಪಕ್ಷಗಳು, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ರೈತರ ಸಭೆಯಲ್ಲಿ ನಿರ್ಧಾರ
ಪಶ್ಚಿಮಘಟ್ಟ ಹಾಗೂ ಮಲೆನಾಡು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ತರುವ ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯನ್ನು ಕೈ ಬಿಡಲು ಒತ್ತಾಯಿಸಿ ಸೆ.10ರಂದು ಬಾಳೆಹೊನ್ನೂರು ಪಟ್ಟಣ ಸಂಪೂರ್ಣವಾಗಿ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಸರ್ವ ಪಕ್ಷಗಳು, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ರೈತರ ಸಭೆಯಲ್ಲಿ ಬಾಳೆಹೊನ್ನೂರು ಬಂದ್ ಮಾಡಿ, ಪಕ್ಷಾತೀತ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯುವ ಒಕ್ಕೊರಲಿನ ತೀರ್ಮಾನ ಮಾಡಲಾಯಿತು.ಸೆ.10ರಂದು ಬಾಳೆಹೊನ್ನೂರಿನ ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನಾ ಮೆರವಣಿಗೆ ಹೊರಟು, ಪಟ್ಟಣದ ಮುಖ್ಯರಸ್ತೆಯಲ್ಲಿ ಸಾಗಿ ಬಸ್ ನಿಲ್ದಾಣದ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ರದಿ ಜಾರಿಯಾದರೆ ಮಲೆನಾಡಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಮಲೆನಾಡಿಗೆ ಮಾರಕವಾದ ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯವನ್ನು ಕೈಬಿಡುವಂತೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಒತ್ತಾಯ ಹೇರಲು ನಿರ್ಧರಿಸಲಾಯಿತು.
ಸಭೆಯಲ್ಲಿ ಪರಿಸರ ಹೋರಾಟಗಾರ ದಿಗಂತ್ ಬಿಂಬೈಲ್ ಮಾತನಾಡಿ ಅರಣ್ಯ ಇಲಾಖೆ ಹಲವಾರು ದೌರ್ಜನ್ಯಗಳ ನಡುವೆ ಮಲೆನಾಡಿಗರು ಇಂದು ಬದುಕುತ್ತಿದ್ದು, ಈಗಾಗಲೇ ಮಲೆನಾಡು ವೃದ್ಧಾಶ್ರಮ ಗಳಾಗಿ ಪರಿವರ್ತನೆಯಾಗಿವೆ. ಇಂತಹ ಸನ್ನಿವೇಶದಲ್ಲಿ ಇಲ್ಲಿಗೆ ಮತ್ತಷ್ಟು ಬಿಗಿ ಕಾಯ್ದೆಗಳು ಬೇಕಿವೆಯೇ ಎಂದು ಪ್ರಶ್ನಿಸಬೇಕಾಗಿದೆ.
ರಾಜಕಾರಣಿಗಳು ಇಂದು ಉದ್ಯಮಿಗಳು, ಬಂಡವಾಳ ಶಾಹಿಗಳ ಪರವಾಗಿ ನಿಲ್ಲುತ್ತಿರುವುದು ವಿಶಾದನೀಯ. ಕೇರಳ ಸರ್ಕಾರ ಈ ವರದಿಗೆ ವೈಜ್ಞಾನಿಕವಾಗಿ ಆಕ್ಷೇಪಣೆ ಸಲ್ಲಿಸಿದ ಹಿನ್ನೆಲೆಯಲ್ಲಿ 3 ಸಾವಿರ ಚ. ಕಿಮೀ ವರದಿಯಿಂದ ಹೊರ ಬಂದಿದೆ. ಆದರೆ ನಮ್ಮ ರಾಜ್ಯದಲ್ಲಿ 1 ಚ.ಕಿಮೀ ಸಹ ವರದಿಯಿಂದ ಹೊರ ಬಂದಿಲ್ಲ. ಇದಕ್ಕೆ ಕಾರಣ ಯಾರು ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.
ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿಯನ್ನು ಅವರು ನೈಜವಾಗಿ ಬರೆದಿಲ್ಲ. ಅವರು ಕೇವಲ ಇದರ ಮುಖವಾಡವಾಗಿದ್ದು, ಇದನ್ನು ಬೇರೆಯವರು ಬರೆಸಿದ್ದಾರೆ. ವರದಿ ಯಾರಿಗಾಗಿ ಜಾರಿ ಯಾಗುತ್ತಿದೆ ಎಂದೂ ಸಹ ಅವರಿಗೆ ತಿಳಿದಿಲ್ಲ.
ಬಿಜೆಪಿ ಮುಖಂಡ ಟಿ.ಎಂ.ಉಮೇಶ್ ಕಲ್ಮಕ್ಕಿ ಮಾತನಾಡಿ ನಮ್ಮ ಜೀವನಕ್ಕಾಗಿ ನಾವು ಪಕ್ಷಾತೀತ ವಾಗಿ ಹೋರಾಟ ನಡೆಸಬೇಕಿದೆ. ಇಂದು ಮನೆ, ಆಸ್ತಿ ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದರೂ ಸಹ ಸಮಸ್ಯೆ ತೀವ್ರತೆ ಜನರಿಗೆ ಅರಿಯುತ್ತಿಲ್ಲವಾಗಿರುವುದು ವಿಷಾದನೀಯ. ರಾಜಕೀಯ ಮರೆತು ಹೋರಾಟ ನಡೆಸಬೇಕಿದೆ. ಸರ್ಕಾರ, ಅರಣ್ಯ ಇಲಾಖೆ ಯೋಜನೆಗಳನ್ನು ಹಣ ಮಾಡುವ ಉದ್ದೇಶಕ್ಕೆ ಮಾಡುತ್ತಿದ್ದಾರೆ ಎಂಬುದನ್ನು ಅರಿಯಬೇಕಿದೆ ಎಂದರು.
ಪ್ರಮುಖರಾದ ಕೆ.ಕೆ.ವೆಂಕಟೇಶ್, ಕೆ.ಟಿ.ವೆಂಕಟೇಶ್, ಎಂ.ಎಸ್.ಜಯಪ್ರಕಾಶ್, ರವಿಚಂದ್ರ, ಎಂ.ಜೆ. ಚಂದ್ರಶೇಖರ್, ಕೆ.ಎಸ್.ಚನ್ನಗಿರಿ, ಬಿ.ಕೆ.ಮಧುಸೂದನ್, ಎಂ.ಎನ್.ನಾಗೇಶ್, ಎಂ.ಕೆ.ಸುಂದರೇಶ್, ಹಿರಿಯಣ್ಣ, ಕೆ.ಟಿ.ಗೋವಿಂದೇಗೌಡ, ಎಸ್.ವಿ.ಶಂಕರ್, ಎಚ್.ಎಸ್.ಕೌಶಿಕ್ ಪಟೇಲ್ ಸೇರಿದಂತೆ ಪ್ರಮುಖರು ಹಾಜರಿದ್ದರು.೦೬ಬಿಹೆಚ್ಆರ್ ೧:
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು, ರೈತರು.