ಕೊಪ್ಪಳ: ಬಣಜಿಗ ಸಮಾಜ ನಾಡಿಗೆ ಅತ್ಯಂತ ಶ್ರೇಷ್ಠ ಕೊಡುಗೆ ನೀಡಿದ್ದು, ಏಳು ಮುಖ್ಯಮಂತ್ರಿಗಳನ್ನು ಸಮಾಜ ನೀಡಿರುವುದೇ ಇದಕ್ಕೆ ಸಾಕ್ಷಿ ಎಂದು ವಿಧಾನ ಪರಿಷತ್ ವಿಶ್ರಾಂತ ಸಭಾಪತಿ ವೀರಣ್ಣ ಮತ್ತಿಕಟ್ಟಿ ಹೇಳಿದರು.
ಏಳು ಮುಖ್ಯಮಂತ್ರಿಗಳನ್ನು ಬಣಜಿಗ ಸಮುದಾಯ ನೀಡಿದೆ. ಮುಖ್ಯಮಂತ್ರಿಯಾದ ನಮ್ಮ ಸಮುದಾಯದವರು ರಾಜ್ಯದ ಏಳಿಗೆಗೆ ಭದ್ರ ಬುನಾದಿ ಹಾಕಿ ರಾಜ್ಯದ ಸಾಮಾಜಿಕ ಆರ್ಥಿಕ ಔದ್ಯೋಗಿಕಕ್ಕೆ ಶಕ್ತಿ ಕೊಡುವ ಕೆಲಸ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ನಮ್ಮ ಸಮುದಾಯದವರು ಮುಂಚೂಣಿಯಲ್ಲಿದ್ದರು ಎಂದ ಅವರು, ರಾಜಕೀಯದ ತಮ್ಮ ಒಡನಾಡಿಗಳಾದ ಕೊಪ್ಪಳದ ದಿ.ಅಗಡಿ ಸಂಗಣ್ಣ, ವೀರಣ್ಣ ಮುದುಗಲ್ ಎಂ.ಬಿ. ದಿವಟರ್ ಅವರೊಂದಿಗೆ ನೆನಪು ಮೆಲುಕು ಹಾಕಿದರು.
ಕೊಪ್ಪಳದ ಅಭಿನವ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳ ಅನ್ನದಾಸೋಹ, ವಿದ್ಯಾ ದಾನ, ಧಾರ್ಮಿಕ ಕಾರ್ಯಗಳಿಂದ ಕೊಪ್ಪಳ ಈಗ ರಾಜ್ಯದಲ್ಲಿ ಹೆಸರಾಗಿದೆ ಎಂದರು.ಸಮಾಜದ ಅಭಿವೃದ್ಧಿ ಮಹಿಳೆಯರ ಕೈಯಲ್ಲಿದ್ದು, ಮಕ್ಕಳಿಗೆ ತಾಯಿ ಮೊದಲ ಗುರು ಹಾಗಾಗಿ ತಾಯಂದಿರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಒಳ್ಳೆಯ ಸಂಸ್ಕಾರ ಕೊಡಬೇಕು ಎಂದರು.
ಜಮಖಂಡಿಯ ಅಶೋಕ ಹಂಚಲಿ ವಿಶೇಷ ಉಪನ್ಯಾಸ ನೀಡಿದರು. ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ವೀರಣ್ಣ ಬುಳ್ಳಾ ಅಧ್ಯಕ್ಷತೆ ವಹಿಸಿದ್ದರು.
ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ, ಎಂಎಲ್ ಸಿ ಹೇಮಲತಾ ನಾಯಕ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಹು-ಧಾ ಮಹಾನಗರ ಪಾಲಿಕೆ ಸಹಾಯಕ ಆಯುಕ್ತ ಅರವಿಂದ ಜಮಖಂಡಿ, ಅಂದಪ್ಪ ಜವಳಿ, ಗವಿಸಿದ್ದಪ್ಪ ಕೊಪ್ಪಳ, ವಿಶ್ವನಾಥ ಬಳ್ಳೊಳ್ಳಿ, ಬಸವರಾಜ ಕಮಲಾಪುರ, ಗುರುರಾಜ ಹಲಗೇರಿ, ಅರವಿಂದ ಅಗಡಿ, ಅಪರ್ಣಾ ಬಳ್ಳೊಳ್ಳಿ , ಮಂಜುನಾಥ ಅಂಗಡಿ, ರೇಖಾ ಕಡ್ಲಿ , ಸುಧಾ ಶೆಟ್ಟರ್, ಚನ್ನಬಸಪ್ಪ ಬೆಲ್ಲದ ಇತರರು ಉಪಸ್ಥಿತರಿದ್ದರು.