ಮೈಸೂರು : ಈ ಬಾರಿಯ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರವು ಆಹ್ವಾನಿಸಿದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಮಂಗಳವಾರ ಹಮ್ಮಿಕೊಂಡಿದ್ದ ಚಾಮುಂಡಿಬೆಟ್ಟ ಚಲೋಗೆ ಪೊಲೀಸರು ದಿಗ್ಭಂಧನ ಹಾಕಿದ್ದು, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ ಸೇರಿದಂತೆ ಹಲವನ್ನು ಬಂಧಿಸಿದ್ದಾರೆ.
ಧರ್ಮ, ಸಂಸ್ಕೃತಿ ಟೀಕಿಸಿರುವ ಬಾನು ಮುಷ್ತಾಕ್ ಅವರಿಗೆ ದಸರಾ ಉದ್ಘಾಟಿಸಲು ಅವಕಾಶ ನೀಡಬಾರದೆಂದು ಹಿಂದೂ ಜಾಗರಣ ವೇದಿಕೆಯು ಮೈಸೂರಿನ ಕುರುಬಾರಹಳ್ಳಿಯ ವೃತ್ತದಿಂದ ಚಾಮುಂಡಿಬೆಟ್ಟಕ್ಕೆ ಹಮ್ಮಿಕೊಂಡಿದ್ದ ಜನಜಾಗೃತಿ ಪಾದಯಾತ್ರೆಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಇಷ್ಟಾದರೂ ಪಾದಯಾತ್ರೆ ಕೈಗೊಳ್ಳುವುದಾಗಿ ಕುರುಬಾರಹಳ್ಳಿ ವೃತ್ತಕ್ಕೆ ದಕ್ಷಿಣ ಕನ್ನಡ, ಕೊಡಗು, ಮೈಸೂರು ಭಾಗದ ಹಿಂದೂ ಕಾರ್ಯಕರ್ತರು ತಂಡೋಪ ತಂಡವಾಗಿ ಜನರು ಆಗಮಿಸಿದ್ದರು.
ಸ್ಥಳಕ್ಕೆ ವಿವಿಧ ತಂಡಗಳೊಂದಿಗೆ ಆಗಮಿಸಿದ ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಗರಾಧ್ಯಕ್ಷ ಮಾಜಿ ಶಾಸಕ ಎಲ್.ನಾಗೇಂದ್ರ ಸೇರಿ ಬಿಜೆಪಿ ನಾಯಕರನ್ನು ಪೊಲೀಸರು ತಡೆದರು. ಆಗ ಮುಖಂಡರು ಹಾಗೂ ಪೊಲೀಸರು ನಡುವೆ ವಾಗ್ವಾದ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಲಕ್ಷಣ ಅರಿತ ಪೊಲೀಸರು, ಸ್ಥಳಕ್ಕೆ ಆಗಮಿಸುತ್ತಿದ್ದ ಹಿಂದೂಪರ ಮುಖಂಡರನ್ನು ಬಂಧಿಸಿದರು.ಬಾಕ್ಸ್ ಸುದ್ದಿ..))))))
ಬಾನು ಪರ ದಲಿತರ
ನಡಿಗೆಗೂ ಖಾಕಿ ತಡೆ
ಬಾನು ಮುಷ್ತಾಕ್ ಆಯ್ಕೆಯನ್ನು ಬೆಂಬಲಿಸಿ ದಲಿತ ಮಹಾಸಭಾ ಕರೆ ನೀಡಿದ್ದ ಚಾಮುಂಡಿ ನಡಿಗೆಗೂ ಪೊಲೀಸರು ಅನುಮತಿ ನೀಡಿರಲಿಲ್ಲ. ಆದರೂ ಕುರುಬಾರಹಳ್ಳಿಯ ವೃತ್ತಕ್ಕೆ ಆಗಮಿಸಿದ ದಲಿತ ಮುಖಂಡರನ್ನು ತಡೆದು ಅವರ ನಡೆಗೆಯನ್ನು ಪೊಲೀಸರು ವಿಫಲಗೊಳಿಸಿದರು.
ಚಾಮುಂಡಿಬೆಟ್ಟ ನಡಿಗೆಗೆ ಆಗಮಿಸಿದ್ದ ದಲಿತ ಮಹಾಸಭಾ ಅಧ್ಯಕ್ಷ ಎಸ್.ರಾಜೇಶ್ ವೃತ್ತದ ಬಳಿ ಘೋಷಣಾ ಫಲಕಗಳೊಂದಿಗೆ ಬಂದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ನೇತೃತ್ವದ ತಂಡದವರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಆಗ ರಾಜೇಶನನ್ನು ಪೊಲೀಸರಿಂದ ಬಿಡಿಸಿಕೊಂಡು, ನಡಿಗೆಗೆ ಅವಕಾಶ ನೀಡದಿದ್ದಾಗ ಎಲ್ಲರೂ ಹಿಂದಿರುಗಿದರು.