ಸೊರಬ: ಈಗಾಗಲೇ ಬೇಸಿಗೆಯ ತಾಪ ಹೆಚ್ಚಾಗುತ್ತಿದ್ದು, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಬೇಕು. ಈ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ತಪ್ಪು ಮಾಹಿತಿ ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಎಚ್ಚರಿಸಿದರು.ಬುಧವಾರ ಪಟ್ಟಣದ ಡಾ.ರಾಜ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ರಚಿಸಲಾದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತಾಲೂಕಿನಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಕಷ್ಟು ಹಣವಿದ್ದು, ಸಮಸ್ಯೆ ಇರುವ ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಕುರಿತು ಎಲ್ಲಾ ಗ್ರಾ.ಪಂ. ಪಿಡಿಒ ಮತ್ತು ಸಂಬಂಧಿಸಿದ ಅಧಿಕಾರಿಗಳು ಸಮರ್ಪಕ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಮುಂದಿನ ೩ನೇ ವರ್ಷದಿಂದ ಜೆಜೆಎಂಗೆ ಶರಾವತಿಯಿಂದನೇ ನೀರು ಬರುತ್ತದೆ. ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇರುವ ಕುರಿತು ಹಾಗೂ ಕೊರತೆಗಳ ಸಂಪೂರ್ಣ ವರದಿ ನೀಡಿರಿ. ಸರಿಪಡಿಸಿಕೊಡಿತ್ತೇನೆ. ಅಂಡಿಗೆ ಗ್ರಾ.ಪಂಯ ಉರುಗನಹಳ್ಳಿ, ಬೆನ್ನೂರು ಗ್ರಾ.ಪಂ ವ್ಯಾಪ್ತಿಯ ಕಮರೂರು, ಬೆನ್ನೂರು, ಭಾರಂಗಿಯ ಜೋಗಿಹಳ್ಳಿ, ಯಲಿವಾಳ, ಬೆಣ್ಣೆ ಲಗೇರಿ, ಗುಡ್ಡದ ಬೆಣ್ಣೆಗೇರಿ, ಚಂದ್ರಗುತ್ತಿ ಬಸ್ತಿಕೊಪ್ಪ, ಕಡೆಜೋಳದಗುಡ್ಡೆ, ಮಳಲಿಕೊಪ್ಪ ಎಣ್ಣೆಕೊಪ್ಪ ಸೇರಿದಂತೆ ಸುಮಾರು ೩೫ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಹುದೆಂದು ಗುರುತಿಸಲಾಗಿದೆ. ಹಲವೆಡೆ ಹೊಸ ಬೋರ್ ಅವಶ್ಯಕತೆ ಇದೆ ಎಂದು ತಿಳಿಸಿದರು.ಕೊಳವೆಬಾವಿ, ಜಾಕ್ವೆಲ್ ಅಥವಾ ಖಾಸಗಿ ಕೊಳವೆಬಾವಿ ನೀರು ಇವುಗಳಲ್ಲಿ ಯಾವುದು ಅವಶ್ಯಕತೆ ಇದೆ ಎಂದು ಪಿಡಿಒಗಳು ತೀರ್ಮಾನ ಮಾಡಿ ಅಧಿಕಾರಿಗಳಿಗೆ ಕಳುಹಿಸಿ ಎಂದು ಸೂಚಿಸಿದ ಅವರು, ಶರಾವತಿಯಿಂದ ನೀರು ತರುವ ಯೋಜನೆಯಿಂದ ಮುಂದೆ ಕುಡಿಯುವ ನೀರು ಸಿಗಲಿದೆ. ಬೋರ್ವೆಲ್ ಅವಶ್ಯಕತೆ ಮುಂದೆ ಅಷ್ಟಾಗಿ ಬರಲಾರದು. ಆದ್ದರಿಂದ ಆದಷ್ಟು ಖಾಸಗಿ ಬೋರ್ವೆಲ್ನಿಂದ ನೀರು ತರಿಸಿಕೊಳ್ಳಲು ಕ್ರಮ ವಹಿಸಿರಿ. ತೀರಾ ಅವಶ್ಯಕತೆ ಇರುವೆಡೆ ಹೊಸ ಬೋರ್ ಕೊರೆಸುವಂತೆ ತಿಳಿಸಿದರು.ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದಾದ ೪೩ ಗ್ರಾಮಗಳಲ್ಲಿ ೯೪.೪೦ ಕೋಟಿ ರು. ವೆಚ್ಚದಲ್ಲಿ ಕೊಳವೆ ಬಾವಿ ಅಳವಡಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಜಿ.ಪಂ. ಮುಖ್ಯ ಯೋಜನಾಧಿಕಾರಿ ಹಾಗೂ ಸೊರಬ ತಾಲೂಕು ನೋಡಲ್ ಅಧಿಕಾರಿ ಹನುಮಾ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಹುದಾದ ಗ್ರಾಮಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಯೋಜಿಸಲಾಗಿದೆ. ಕೆಲವು ಗ್ರಾಮಗಳಲ್ಲಿ ಹೊಸ ಬೊರ್ವೆಲ್ ಅವಶ್ಯಕತೆ ಇದ್ದು, ೧೫ನೇ ಹಣಕಾಸು ಆಯೋಗದ ಅನುದಾನದಲ್ಲಿ ೮.೭೩ ಕೋಟಿ ರು. ಬಾಕಿ ಉಳಿದಿದೆ. ಈ ಅನುದಾನದಿಂದ ಅವಶ್ಯವಿರುವೆಡೆ ಬೋರ್ವೆಲ್ ಕೊರೆಸಬಹುದಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ತಾಲೂಕಿನ ಕ್ಷಯಮುಕ್ತ ೧೫ ಗ್ರಾ.ಪಂಗಳಿಗೆ ಬೆಳ್ಳಿ ಮತ್ತು ಕಂಚಿನ ಪದಕ ಮತ್ತು ಪ್ರಶಸ್ತಿಪತ್ರವನ್ನು ಸಚಿವ ಮಧು ಬಂಗಾರಪ್ಪ ವಿತರಿಸಿದರು.ಸಭೆಯಲ್ಲಿ ತಹಸೀಲ್ದಾರ್ ಮಂಜುಳಾ ಹೆಗಡಾಳ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಡಾ.ಪ್ರದೀಪ್ಕುಮಾರ್, ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲಗೌಡ ಅಂಕರವಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ ಸೇರಿದಂತೆ ಕೆಡಿಪಿ ಸದಸ್ಯರು ಪಾಲ್ಗೊಂಡಿದ್ದರು.