ಮೇಣದಂತೆ ಬೇರೆಯವರಿಗೆ ಬೆಳಕು ನೀಡುವಂತವರಾಗಿ: ಎನ್.ಎಂ. ಬಿರಾದಾರ

KannadaprabhaNewsNetwork |  
Published : Jun 03, 2026, 03:00 AM IST
ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ | Kannada Prabha

ಸಾರಾಂಶ

ವಿಜಯಪುರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಚಾಣಕ್ಯ ಕರಿಯರ್‌ ಅಕಾಡೆಮಿ ಸಂಸ್ಥಾಪಕ ಎನ್.ಎಂ. ಬಿರಾದಾರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಐಸ್‌ಕ್ರೀಮ್ ಹಾಗೂ ಮೇಣದ ಬತ್ತಿಗೆ ಕರಗುವ ಗುಣವಿದೆ. ಆದರೆ ಕರಗುವಿಕೆಯ ಹಿಂದಿರುವ ಉದ್ದೇಶ ವಿಭಿನ್ನವಾಗಿರುತ್ತದೆ. ಐಸ್‌ಕ್ರೀಮ್ ಸಮಯ ಇರುವ ಮೊದಲೇ ನನ್ನನ್ನು ತಿಂದು ತೃಪ್ತನಾಗು ಎಂದು ಹೇಳಿದರೆ, ಮೇಣದ ಬತ್ತಿ ನಾನು ಕರಗುವ ಮೊದಲೇ ಈ ಜಗತ್ತಿಗೆ ಒಂದಷ್ಟು ಬೆಳಕನ್ನು ಕೊಡುತ್ತೇನೆ ಎನ್ನುವ ಸಾರ್ಥಕತೆ ತೋರುತ್ತದೆ. ನಮ್ಮ ಬದುಕು ಸಹ ಮೇಣದ ಬತ್ತಿಯಂತೆ ಬೇರೊಬ್ಬರಿಗೆ ಬೆಳಕು ನೀಡುವಂತಾಗಬೇಕು ಎಂದು ಚಾಣಕ್ಯ ಕರಿಯರ್‌ ಅಕಾಡೆಮಿ ಸಂಸ್ಥಾಪಕ ಎನ್.ಎಂ. ಬಿರಾದಾರ ಹೇಳಿದರು.

ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ 2026-27ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿ ವಾಗ್ಮಿ ಅಶೋಕ ಹಂಚಲಿ ಮಾತನಾಡಿ, ಒಬ್ಬ ಪೇಪರ್‌ ಹಾಕುವ ಹುಡುಗ ಈ ದೇಶಕ್ಕೆ ರಾಷ್ಟ್ರಪತಿಯಾಗುತ್ತಾನೆಂದ ಮೇಲೆ ನಮಗೇನಾಗಿದೆ ಎನ್ನುವ ಪ್ರಶ್ನೆಯನ್ನು ನಾವೇ ಮಾಡಿಕೊಳ್ಳಬೇಕು. ಕಾದ ಹಂಚಿನ ಮೇಲೆ ಬಿದ್ದ ನೀರಿನ ಹನಿಯೂ ಸಹ ಮುತ್ತಂತೆ ಭಾಸವಾಗುತ್ತದೆ. ಮುಂಜಾನೆ ಬಿದ್ದ ಮಂಜಿನ ಹನಿ ಬಿಸಿಲೇರಿದಂತೆ ಮುತ್ತಂತೆ ಹೊಳೆದು ಮಾಯವಾಗುತ್ತದೆ. ಆದರೆ ಸ್ವಾತಿ ಮಳೆಯ ಹನಿ ಕಪ್ಪೆ ಚಿಪ್ಪಿನಲ್ಲಿ ಬಿದ್ದಾಗ ಮಾತ್ರ ಅದು ಮುತ್ತಾಗಿ ಪರಿವರ್ತನೆಯಾಗುತ್ತದೆ ಅದು ಶಾಶ್ವತ ಮೌಲ್ಯ ಪಡೆಯುತ್ತದೆ. ಹಾಗೆಯೇ ವಿದ್ಯಾರ್ಥಿಗಳು ಸಹ ಇಂದು ಎಕ್ಸಲಂಟ್ ಎನ್ನುವ ಕಪ್ಪೆ ಚಿಪ್ಪಿನಲ್ಲಿ ಬಿದ್ದಾಗಿದೆ. ಇನ್ನು ಮುತ್ತಾಗುವುದು ಮಾತ್ರ ಬಾಕಿ ಇದೆ ಎಂದು ಹೇಳಿದರು.

ಬಸವನ ಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತಮಾಡಿ, ಹುಟ್ಟು ಅನಿಶ್ಚಿತ ಸಾವು ಖಚಿತ. ಅದರ ನಡುವಿನ ಸಮಯದಲ್ಲಿ ಸಾಧನೆ ಮಾಡಿ ಶಾಶ್ವತವಾಗಿ ಉಳಿಯುವುದು ಸಾರ್ಥಕ ಬದುಕಾಗುತ್ತದೆ. ತಮ್ಮ ಹೆತ್ತವರ ಕನಸನ್ನು ಈಡೇರಿಸುವುದು ಪ್ರತಿಯೊಬ್ಬ ಮಗನ ಕನಸಾಗಿರುತ್ತದೆ. ಆ ಕನಸನ್ನು ನನಸು ಮಾಡುವ ಕಡೆಗೆ ಸದಾ ತುಡಿತವಿರಲಿ. ಅದರ ಜೊತೆಗೆ ಓದಿನ ಮಿಡಿತವಿರಲಿ ಆಗ ಬದುಕು ಬಂಗಾರವಾಗುತ್ತದೆ ಎಂದು ಹೇಳಿದರು.

ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ, ಗೌರವ ನಿರ್ದೇಶಕ ರಾಜಶೇಖರ ಕೌಲಗಿ ಮಾತನಾಡಿದರು. ಇದೇ ವೇಳೆ ಶಾಲಾ ಶಿಕ್ಷಣ ಇಲಾಖೆಯ ನೂತನ ಉಪನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡ ಕೆ.ಎ. ಉಪ್ಪಾರ, ನಿಕಟಪೂರ್ವ ಉಪನಿರ್ದೇಶಕ ಡಾ.ಸಿ.ಕೆ. ಹೊಸಮನಿ, ನಿವೃತ್ತ ಪ್ರಾಂಶುಪಾಲ ಬಸವರಾಜ ಉಮರ್ಜಿ ಅವರನ್ನು ಸನ್ಮಾನಿಸಲಾಯಿತು.

ಕೂಡಿಗಿ ಸರ್ಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲ ಕೆ.ಜಿ. ಲಮಾಣಿ, ಎಕ್ಸಲಂಟ್ ವಿಜ್ಞಾನ ಪದವಿ ಪ.ಪೂ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಸೇರಿ ಎಲ್ಲ ಉಪನ್ಯಾಸಕರು, ಸಿಬ್ಬಂದಿ ಇದ್ದರು.

ಚಿನ್ಮಯಿ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ಸ್ವಾಗತಿಸಿದರು. ಆಂಗ್ಲ ಉಪನ್ಯಾಸಕ ಮುಸ್ತಾಕ ಮಲಘಾಣ ನಿರೂಪಿಸಿದರು.

ವಿದ್ಯೆ ಎನ್ನುವುದು ತಪಸ್ಸಿದ್ದಂತೆ. ಸಂತರು, ಋಷಿಮುನಿಗಳು ಏಕಾಗ್ರತೆಯಿಂದ ತಪಸ್ಸು ಮಾಡಿ ಆತ್ಮ ಸಾಕ್ಷಾತ್ಕಾರ ಮಾಡಿಕೊಂಡಂತೆ ವಿದ್ಯಾರ್ಥಿಗಳು ಸಹ ವಿದ್ಯೆ ಎನ್ನುವ ತಪಸ್ಸನ್ನು ಏಕಾಗ್ರತೆಯಿಂದ ಮಾಡಿದಲ್ಲಿ ಸಾಧನೆ ಎನ್ನುವ ಸಾಕ್ಷತ್ಕಾರ ಹೊಂದಬಹುದು. ಕತ್ತೆ ಕುದುರೆಯಾದರೆ ಸರಿ ಆದರೆ ಕುದುರೆ ಎಂದಿಗೂ ಕತ್ತೆಯಾಗಬಾರದು. ಹಾಗೆಯೇ ನೀವೂ ಸಹ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕಬೇಕೇ ವಿನಃ ಏನಾದರೂ ಸಮಸ್ಯೆ ಆಯಿತೆಂದು ಮುಂದಿಟ್ಟ ಹೆಜ್ಜೆ ಹಿಂದಿಡಬಾರದು.

- ಎನ್.ಎಂ. ಬಿರಾದಾರ ಚಾಣಕ್ಯ ಕರಿಯರ್‌ ಅಕಾಡೆಮಿ ಸಂಸ್ಥಾಪಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಳಕಲ್ಲ ನಗರಕ್ಕಿಲ್ಲ ವಿದ್ಯುತ್‌ ಚಿತಾಗಾರ ಭಾಗ್ಯ!
ಕನ್ನಡ ಜಾಗೃತಿ ಜಾಥಾದೊಂದಿಗೆ ಶಾಲಾ ಪ್ರಾರಂಭೋತ್ಸವ