ಬೇನಾಮಿ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ನಕಲಿ ಚಿನ್ನವನ್ನೇ ಅಡವಿಟ್ಟು ಅದರ ಮೇಲೆ ಸಾಲ ಪಡೆದ ಬ್ಯಾಂಕ್ ವ್ಯವಸ್ಥಾಪಕ 10.97 ಕೋಟಿ ವಂಚಿಸಿರುವ ಘಟನೆ ಶುಕ್ರವಾರ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು : ಬೇನಾಮಿ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ನಕಲಿ ಚಿನ್ನವನ್ನೇ ಅಡವಿಟ್ಟು ಅದರ ಮೇಲೆ ಸಾಲ ಪಡೆದ ಬ್ಯಾಂಕ್ ವ್ಯವಸ್ಥಾಪಕ 10.97 ಕೋಟಿ ವಂಚಿಸಿರುವ ಘಟನೆ ಶುಕ್ರವಾರ ರಾಯಚೂರಿನಲ್ಲಿ ನಡೆದಿದೆ.
ಸ್ಥಳೀಯ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯ ವ್ಯವಸ್ಥಾಪಕ ಕೆ.ನರೇಂದ್ರ ರೆಡ್ಡಿ ವಂಚಕ. ಇವರು ಕಳೆದ 3 ವರ್ಷಗಳಿಂದ ಬೇನಾಮಿ ಹೆಸರುಗಳಲ್ಲಿ 105 ಖಾತೆಗಳನ್ನು ತೆರೆದು ಆ ಖಾತೆಗಳ ಮೂಲಕ ನಕಲಿ ಚಿನ್ನವನ್ನು ಅಡವಿಟ್ಟು ಸುಮಾರು ₹10.97 ಕೋಟಿ ಸಾಲವನ್ನು ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಿದ್ದು, ಇದೀಗ ಬ್ಯಾಂಕ್ನ ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ವಂಚನೆಯ ಪ್ರಕರಣ ಪತ್ತೆಯಾಗಿದೆ.
ನಕಲಿ ಗೋಲ್ಡ್ ಲೋನ್ ಖಾತೆಗಳಿಂದ 8 ಸಂಬಂಧಿಕರ ಅಕೌಂಟ್ಗೆ ಹಣ ವರ್ಗಾಯಿಸಿದ್ದಾರೆ. ಹಿಂದಿನ ಬ್ಯಾಂಕ್ನ ಸಹೋದ್ಯೋಗಿ ಹೆಸರಿಗೆ ₹88 ಲಕ್ಷ ವರ್ಗಾವಣೆ ಮಾಡಿದ್ದರು. ವಂಚನೆ ಬಯಲು ಆಗುತ್ತಿದ್ದಂತೆ ಬ್ಯಾಂಕ್ನಿಂದ ವ್ಯವಸ್ಥಾಪಕ ನರೇಂದ್ರ ರೆಡ್ಡಿ ಪರಾರಿಯಾಗಿದ್ದು, ಬ್ಯಾಂಕ್ ಆಫ್ ಮಹಾರಾಷ್ಟ ಪ್ರಾದೇಶಿಕ ವ್ಯವಸ್ಥಾಪಕ ಸುಚೇತ್ ನೀಡಿರುವ ದೂರಿನ ಮೇರೆಗೆ ಸ್ಥಳೀಯ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.