ಬೆಣ್ಣಿಹಳ್ಳ: ಕುಂದಗೋಳದಿಂದ ಕಾಮಗಾರಿ ಆರಂಭಿಸಿ: ಎಂಆರ್‌ಪಿ

KannadaprabhaNewsNetwork |  
Published : Aug 20, 2025, 01:30 AM IST
ಎಂ.ಆರ್‌.ಪಾಟೀಲ | Kannada Prabha

ಸಾರಾಂಶ

ಪ್ರವಾಹದಿಂದಾಗಿ ಕುಂದಗೋಳ ತಾಲೂಕಿನಲ್ಲಿ ಪ್ರತಿ ವರ್ಷ 2100 ಎಕರೆಗೂ ಹೆಚ್ಚು ಬೆಳೆ ನಾಶವಾಗುತ್ತಿದೆ ಹಾಗೂ ಈ ಬಾರಿ ಕಟಾವಿಗೆ ಬಂದಿರುವ ರೈತರ ಹೆಸರು ಬೆಳೆ ಸಹ ಪ್ರವಾಹದಿಂದ ನಾಶವಾಗಿದೆ.

ಕುಂದಗೋಳ: ಪ್ರತಿ ವರ್ಷ ಪ್ರವಾಹದಿಂದ ರೈತರಿಗೆ ಅಪಾರ ನಷ್ಟ ಉಂಟು ಮಾಡುತ್ತಿರುವ ಬೆಣ್ಣೆಹಳ್ಳದ ಉಪಹಳ್ಳಗಳ ಕಾಮಗಾರಿಯನ್ನು ಕುಂದಗೋಳ ತಾಲೂಕಿನಿಂದಲೇ ಆರಂಭಿಸಬೇಕು ಎಂದು ಶಾಸಕ ಎಂ.ಆರ್. ಪಾಟೀಲ್ ಆಗ್ರಹಿಸಿದ್ದಾರೆ.

ವಿಧಾನಸೌಧದ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಣ್ಣಿಹಳ್ಳದ ಉಪಹಳ್ಳಗಳಾದ ಕಗ್ಗೋಡಿ, ಗೂಗಿ, ದೇಸಾಯಿ ಮತ್ತು ಮಾಸ್ತಿ ಹಳ್ಳಗಳಿಂದ ದೊಡ್ಡ ಪ್ರಮಾಣದ ಪ್ರವಾಹ ಉಂಟಾಗುತ್ತದೆ. ಇದು ಕುಂದಗೋಳ ತಾಲೂಕಿನ 33 ಕಿ.ಮೀ. ವಿಸ್ತಾರ ಹೊಂದಿದ್ದು, 17 ಗ್ರಾಮಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಗಮನ ಸೆಳೆದರು.

ಪ್ರವಾಹದಿಂದಾಗಿ ಕುಂದಗೋಳ ತಾಲೂಕಿನಲ್ಲಿ ಪ್ರತಿ ವರ್ಷ 2100 ಎಕರೆಗೂ ಹೆಚ್ಚು ಬೆಳೆ ನಾಶವಾಗುತ್ತಿದೆ ಹಾಗೂ ಈ ಬಾರಿ ಕಟಾವಿಗೆ ಬಂದಿರುವ ರೈತರ ಹೆಸರು ಬೆಳೆ ಸಹ ಪ್ರವಾಹದಿಂದ ನಾಶವಾಗಿದೆ ಎಂದರು.

"ಬೆಣ್ಣಿಹಳ್ಳದ ಕಾಮಗಾರಿಗೆ ಸರ್ಕಾರ ಈಗಾಗಲೇ ₹200 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಆದರೆ, ಇದು ನವಲಗುಂದ ತಾಲೂಕಿನಿಂದ ಆರಂಭವಾಗುತ್ತಿದ್ದು, ಪ್ರವಾಹದ ಮೂಲವಾದ ಕುಂದಗೋಳ ತಾಲೂಕಿನಿಂದಲೇ ಕಾಮಗಾರಿ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೂ ಪತ್ರ ಬರೆದಿದ್ದು, ₹83 ಕೋಟಿಗಳ ಡಿಪಿಆರ್‌ಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದರೂ ಟೆಂಡರ್ ಆಗಿಲ್ಲ. ಕೂಡಲೇ ಈ ಪ್ರಕ್ರಿಯೆಗೆ ಮೊದಲ ಅನುಮೋದನೆ ನೀಡಬೇಕು ಎಂದರು.

ಪಾಟೀಲ್ ಅವರ ಮಾತಿಗೆ ದನಿಗೂಡಿಸಿದ ಶಾಸಕರಾದ ಅರವಿಂದ ಬೆಲ್ಲದ್ ಮತ್ತು ಸಿ.ಸಿ. ಪಾಟೀಲ್, "ಬೆಣ್ಣೆಹಳ್ಳದಿಂದಾಗಿ ಪ್ರತಿ ವರ್ಷ 8 ಟಿಎಂಸಿ ನೀರು ಪೋಲಾಗುತ್ತಿದೆ ಮತ್ತು ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗುತ್ತಿದೆ. ಕುಂದಗೋಳದಿಂದ ಆರಂಭವಾಗಿ ನರಗುಂದದವರೆಗೆ ಹರಿಯುವ ಈ ಹಳ್ಳದ ಸಂಪೂರ್ಣ ಹೂಳೆತ್ತಿ ಸಮಗ್ರವಾಗಿ ಅಭಿವೃದ್ಧಿಪಡಿಸಿದರೆ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಆಗ್ರಹಿಸಿದರು.

ಡಿಸಿಎಂ ಸ್ಪಂದನೆ: ಶಾಸಕರ ಕಳವಳಕ್ಕೆ ಸ್ಪಂದಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಣ್ಣೆಹಳ್ಳದ ಸಮಸ್ಯೆ ಮತ್ತು ಜನರ ಸಂಕಷ್ಟದ ಬಗ್ಗೆ ನನಗೆ ಅರಿವಿದೆ. ಸಣ್ಣಪುಟ್ಟ ಕಾಮಗಾರಿಗಳಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಹೀಗಾಗಿಯೇ, ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನೆರವಿನೊಂದಿಗೆ ₹1610 ಕೋಟಿಗಳ ಬೃಹತ್ ಯೋಜನೆ ರೂಪಿಸಿ ಕೇಂದ್ರದ ''''''''ತ್ವರಿತ ನೀರಾವರಿ ಪ್ರಯೋಜನ ಕಾರ್ಯಕ್ರಮ''''''''ದ (AIBP) ಅಡಿಯಲ್ಲಿ ಅನುದಾನ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ : ಸಿಎಂ ಸಿದ್ದರಾಮಯ್ಯ
ಸಿಎಂ ರೇಸಲ್ಲಿ ಡಿಕೆ ಒಬ್ಬರೇ ಇಲ್ಲ : ರಾಜಣ್ಣ