ಸಂಚಾರಕ್ಕೆ ಅಯೋಗ್ಯವಾದ ಭಟ್ಕಳ ಸರ್ಕಾರಿ ಆಸ್ಪತ್ರೆ ರಸ್ತೆ

KannadaprabhaNewsNetwork | Published : Jun 12, 2024 12:31 AM

ಸಾರಾಂಶ

ಮಳೆಗಾಲ ಆರಂಭವಾದರೂ ರಸ್ತೆಗೆ ಮರುಡಾಂಬರೀಕರಣ ಮಾತ್ರ ಮಾಡಲಿಲ್ಲ. ಇದೀಗ ಮಳೆಗಾಲ ಆರಂಭವಾಗಿದ್ದರಿಂದ ಮಳೆ ನೀರು ರಸ್ತೆಯ ಮೇಲೆಯೇ ಹರಿಯುತ್ತಿದ್ದು, ಸಂಚರಿಸಲು ತೊಂದರೆಯಾಗಿದೆ.

ಭಟ್ಕಳ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ರಸ್ತೆ ಸಂಚರಿಸಲು ಅಯೋಗ್ಯವಾಗಿದ್ದು, ಕಳೆದ ಹಲವು ವರ್ಷಗಳಿಂದ ರಸ್ತೆ ಹೊಂಡಮಯವಾಗಿದ್ದರೂ ರಿಪೇರಿಗೆ ಮುಂದಾಗದೇ ಇರುವುದರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ವರ್ಷ ಸರ್ಕಾರಿ ಆಸ್ಪತ್ರೆಯ ರಸ್ತೆಯನ್ನು ಒಳಚರಂಡಿ ಕಾಮಗಾರಿಗಾಗಿ ಅಗೆಯಲಾಗಿತ್ತು. ಕಾಮಗಾರಿ ಮುಗಿದ ನಂತರ ಕಾಟಾಚಾರಕ್ಕೆಂಬಂತೆ ತೇಪೆ ಹಾಕಲಾಗಿತ್ತು. ಪೂರ್ಣ ಪ್ರಮಾಣದ ರಸ್ತೆ ಕಾಮಗಾರಿ ಸದ್ಯದಲ್ಲೇ ಆಗಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದರು.

ಆದರೆ ಮಳೆಗಾಲ ಆರಂಭವಾದರೂ ರಸ್ತೆಗೆ ಮರುಡಾಂಬರೀಕರಣ ಮಾತ್ರ ಮಾಡಲಿಲ್ಲ. ಇದೀಗ ಮಳೆಗಾಲ ಆರಂಭವಾಗಿದ್ದರಿಂದ ಮಳೆ ನೀರು ರಸ್ತೆಯ ಮೇಲೆಯೇ ಹರಿಯುತ್ತಿದ್ದು, ಸಂಚರಿಸಲು ತೊಂದರೆಯಾಗಿದೆ. ಅದೂ ಅಲ್ಲದೇ ರಸ್ತೆಯಲ್ಲಿ ಹೊಂಡಮಯವಾಗಿರುವುದರಿಂದ ನೀರು ತುಂಬಿಕೊಂಡಿದ್ದು, ಆಸ್ಪತ್ರೆಗೆ ಬರುವವರಿಗೆ, ಹೋಗುವವರಿಗೆ ಭಾರೀ ತೊಂದರೆ ಆಗಿದೆ. ಪಟ್ಟಣದ ಬೇರೆ ಬೇರೆ ಕಡೆ ರಸ್ತೆ ಡಾಂಬರೀಕರಣ ಮಾಡಿದ್ದರೂ ಸರ್ಕಾರಿ ಆಸ್ಪತ್ರೆಯ ರಸ್ತೆಯ ಬಗ್ಗೆ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರು ಆಕ್ರೋಶದಿಂದ ಪ್ರಶ್ನಿಸಿದ್ದಾರೆ.

ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಿನಂಪ್ರತಿ ನೂರಾರು ಜನರು ಆಗಮಿಸುತ್ತಾರೆ. ಅದರಂತೆ ಈ ರಸ್ತೆಯಲ್ಲಿ ಹೆಚ್ಚು ಜನರು ಸಂಚರಿಸುತ್ತಾರೆ. ರಸ್ತೆ ಹೊಂಡಮಯವಾಗಿದ್ದರಿಂದ ತಿರುಗಾಡುವವರು ತೀರಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆಗೆ ಸಮರ್ಪಕ ಗಟಾರದ ವ್ಯವಸ್ಥೆ ಇಲ್ಲದ್ದರಿಂದ ಮಳೆ ನೀರು ರಸ್ತೆ ಮೇಲೆಯೇ ಹರಿಯುವಂತಾಗಿದೆ. ಆದಷ್ಟು ಬೇಗ ಈ ರಸ್ತೆಯನ್ನು ದುರಸ್ತಿಪಡಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕೆನ್ನುವ ಆಗ್ರಹ ವ್ಯಕ್ತವಾಗಿದೆ. ರಸ್ತೆ ಹೊಂಡಮಯ: ಭಟ್ಕಳ ಸರ್ಕಾರಿ ಆಸ್ಪತ್ರೆಯ ರಸ್ತೆ ಹೊಂಡಮಯವಾಗಿದ್ದು, ಮರುಡಾಂಬರೀಕರಣ ಮಾಡಿಲ್ಲ. ರಸ್ತೆ ಹಾಳಾಗಿರುವುದರಿಂದ ಸರ್ಕಾರಿ ಆಸ್ಪತ್ರೆಗೆ ಆಗಮಿಸುವವರಿಗೆ, ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು, ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಆಟೋ ಚಾಲಕ ಗಣಪತಿ ನಾಯ್ಕ ತಿಳಿಸಿದರು.

Share this article