108 ಶಿವಲಿಂಗಗಳ ಬೈಕ್ ರ್ಯಾಲಿ । ಆಧ್ಯಾತ್ಮಿಕ ಸಾಧಕರಿಗೆ ಗೌರವ
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾನಿಲಯದ ದಾವಣಗೆರೆ ಶಾಖೆಯ ಸುವರ್ಣ ಮಹೋತ್ಸವ ಬ್ರಹ್ಮಾಕುಮಾರೀಸ್-ದಾವಣಗೆರೆ 50ರ ಸಮಾರಂಭ ಮೇ 25ರಂದು ಬೆಳಿಗ್ಗೆ 10ಕ್ಕೆ ನಗರ ಡಿ.ದೇವರಾಜ ಅರಸು ಬಡಾವಣೆ ಬಿ ಬ್ಲಾಕ್ನ ಶಿವಧ್ಯಾನ ಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಲೀಲಾಜಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 10ಕ್ಕೆ ಹುಬ್ಬಳ್ಳಿ ವಲಯ ನಿರ್ದೇಶಕ ರಾಜಯೋಗಿ ಬ್ರಹ್ಮಕುಮಾರ ಡಾ.ಬಸವರಾಜ ರಾಜಋಷಿ ಅಧ್ಯಕ್ಷತೆಯಲ್ಲಿ ರಷ್ಯಾದ ಬ್ರಹ್ಮಾಕುಮಾರಿ ಸಂಸ್ಥೆಯ ಪ್ರಧಾನ ನಿರ್ದೇಶಕಿ ಬ್ರಹ್ಮಕುಮಾರಿ ಚಕ್ರದಾರಿ ದೀದೀಜಿ ಸಾನಿಧ್ಯದಲ್ಲಿ ರಾಜಸ್ಥಾನದ ಅಬು ಪರ್ವತದ ಬ್ರಹ್ಮಕುಮಾರಿ ಸಂಸ್ಥೆ ಸಹ ಮುಖ್ಯ ಆಡಳಿತಾಧಿಕಾರಿ ರಾಜಯೋಗಿನಿ ಬ್ರಹ್ಮಕುಮಾರಿ ಸುದೇಶ್ ದೀದೀಜಿ ಸಮಾರಂಭ ಉದ್ಘಾಟಿಸುವರು ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಡಾ.ಎಸ್.ಎ.ರವೀಂದ್ರನಾಥ, ಶಾಸಕರಾದ ಕೆ.ಎಸ್.ಬಸವಂತಪ್ಪ, ಬಿ.ಪಿ.ಹರೀಶ, ಬಸವರಾಜ ವಿ.ಶಿವಗಂಗಾ, ಬಿ.ದೇವೇಂದ್ರಪ್ಪ, ಡಿ.ಜಿ.ಶಾಂತನಗೌಡ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ, ಎಸ್ಪಿ ಉಮಾ ಪ್ರಶಾಂತ, ಜಿಪಂ ಸಿಇಒ ಸುರೇಶ ಬಿ.ಇಟ್ನಾಳ, ಅಥಣಿ ಎಸ್.ವೀರಣ್ಣ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಹೇಳಿದರು.
ಸಂಸ್ಥೆಯ ಸುವರ್ಣ ಮಹೋತ್ಸವ ಅಂಗವಾಗಿ ಮೇ 24ರಂದು ನಗರದಲ್ಲಿ 108 ಶಿವಲಿಂಗಗಳ ಬೈಕ್ ರ್ಯಾಲಿ ನಡೆಯಿತು. 1975ರಲ್ಲಿ ದಾವಣಗೆರೆಯಲ್ಲಿ ಸ್ಥಾಪನೆಯಾದ ಬ್ರಹ್ಮಕುಮಾರಿ ಸಂಸ್ಥೆಯು ಇದೀಗ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ದಾವಣಗೆರೆ ಸುತ್ತಮುತ್ತ 10 ಉಪ ಸೇವಾ ಕೇಂದ್ರಗಳು ಹಾಗೂ 75ಕ್ಕೂ ಹೆಚ್ಚು ಗೀತ ಪಾಠಶಾಲೆಗಳಲ್ಲಿ ಆಧ್ಯಾತ್ಮಿಕ ಹಾಗೂ ರಾಜಯೋಗದ ಶಿಕ್ಷಣವನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುವುದು ಎಂದು ವಿವರಿಸಿದರು.
ಸಂಸ್ಥೆಯ ಏಕಬೋಟೆ ಮಂಜುನಾಥ, ಕಡೂರು ಶಾಖೆಯ ವೈ.ಎನ್.ಜ್ಞಾನೇಶ್ವರಿ, ಹೊಸಕೋಟೆ ಶಾಖೆಯ ರಾಜೇಶ್ವರಿ, ಸೀತಮ್ಮ ಸರ್ಕಾರಿ ಪಿಯು ಕಾಲೇಜಿನ ಬೋಧಕ ಬಿ.ಕೆ.ರಾಜಣ್ಣ, ಶಾಬನೂರಿನ ವರ್ತಕ ಸುರೇಶ ಶಾಬನೂರು ಇತರರು ಇದ್ದರು.