ಹುಟ್ಟುಹಬ್ಬದ ಅಂಗವಾಗಿ ಅರವಿಂದ ಲಿಂಬಾವಳಿ ಅವರು 1500 ಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ ವಿತರಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಅವರ 59ನೇ ಹುಟ್ಟುಹಬ್ಬವನ್ನು ಭಾನುವಾರ ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು.ಕ್ಷೇತ್ರದ ವಿವಿಧೆಡೆಗಳಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಸೇವಾ ಕಾರ್ಯಕ್ರಮಗಳು ನಡೆದವು. ನೂರಾರು ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಂತೋಷದಿಂದ ಭಾಗಿಯಾಗಿ ಲಿಂಬಾವಳಿ ಅವರಿಗೆ ಶುಭ ಕೋರಿದರು.ಕ್ಷೇತ್ರದ ಎಇಸಿಎಸ್ ಲೇಔಟ್ ಇ-ಬ್ಲಾಕ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋ ಪೂಜೆ ಮಾಡುವ ಮೂಲಕ ಲಿಂಬಾವಳಿ ಅವರು ಗೋಮಾತೆಯ ಆಶೀರ್ವಾದ ಪಡೆದರು.ಭಾರತ್ ಐಕ್ಯ ವಾರ್ಡ್, ಪ್ರಿಯದರ್ಶಿನಿ ವಾರ್ಡ್ ಹಾಗೂ ಕುಂದಲಹಳ್ಳಿ ವಾರ್ಡ್ಗಳ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ತವಾ ಪ್ಯಾನ್ ಸೆಟ್ ವಿತರಣೆ ಮಾಡಿದ ಲಿಂಬಾವಳಿ ಅವರು ನಲ್ಲೂರಹಳ್ಳಿಯ ವಿಕ್ಟೋರಿಯನ್ ವ್ಯೂ ಲೇಔಟ್ನಲ್ಲಿ ವೈಟ್ಫೀಲ್ಡ್ ಜೈನ್ ಸಂಘದ ವತಿಯಿಂದ ಜೈನ್ ಮಂದಿರ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಹೂಡಿ ಸ್ಪೋರ್ಟ್ಸ್ ಕ್ಲಬ್ನಲ್ಲಿ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿಗಳ ಸಮಾರೋಪ ಸಮಾರಂಭದಲ್ಲಿ ಲಿಂಬಾವಳಿ ಅವರು ಪಾಲ್ಗೊಂಡರು. ಅಶ್ವಥನಗರದಲ್ಲಿ ಸುಮಾರು 1500 ಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾದರು.ಕಾಡುಬಿಸನಹಳ್ಳಿಯಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಲಾದ ಉಚಿತ ಆರೋಗ್ಯ ಶಿಬಿರಕ್ಕೆ ಭೇಟಿ ನೀಡಿದ ಲಿಂಬಾವಳಿ ಅವರು ಈ ವೇಳೆ ಸ್ಥಳೀಯರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆ ಮಾಡಿದರು. ಜತೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ಸ್ಪೋರ್ಟ್ಸ್ ಜಾಕೆಟ್ ವಿತರಣೆ ಮಾಡಿದರು.
ಮುನ್ನೇಕೊಳಲದ ಮಂಜುನಾಥ ಲೇಔಟ್ನಲ್ಲಿ 350ಕ್ಕೂ ಹೆಚ್ಚು ಜನರಿಗೆ ದಿನಸಿ ಕಿಟ್ ವಿತರಣೆ ಮಾಡಿದರು. ಅಲ್ಲದೆ, ಸ್ನೇಹ ಜೀವಿ ಆಶ್ರಮಕ್ಕೆ ಮಂಜುನಾಥ್ ಹಾಗೂ ಸ್ಟೀಫನ್ ಅವರ ಕೊಡುಗೆಯಾಗಿ ಹೊಸ ಆಂಬ್ಯುಲೆನ್ಸ್ ನೀಡಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಎನ್.ಆರ್.ಶ್ರೀಧರ್ ರೆಡ್ಡಿ, ಮುಖಂಡರಾದ ರಾಜೇಶ್ ಎಲ್. ಮತ್ತಿತರರು ಉಪಸ್ಥಿತರಿದ್ದರು.