ಅಧಿಕಾರಿಗಳು ಅನಿರೀಕ್ಷಿತವಾಗಿ ತಂಡದೊಂದಿಗೆ ತಪಾಸಣೆ ಮಾಡಿ ಮಕ್ಕಳು ಶಾಲೆಗೆ ಹೋಗುವಂತೆ ನೋಡಿಕೊಳ್ಳಬೇಕು. ಕಿಶೋರ ಕಾರ್ಮಿಕರಾಗಿ ಗುರುತಿಸಿದ ಮಕ್ಕಳಿಗೆ ಕೌಶಲ್ಯಾಧಾರಿತ ತರಬೇತಿ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರಬೇಕು.
ಹುಬ್ಬಳ್ಳಿ:
ಸಂವಿಧಾನವು ನೀಡಿರುವ ಹಕ್ಕುಗಳಿಂದ ಜಿಲ್ಲೆಯ ಮಕ್ಕಳು ವಂಚಿತರಾಗುತ್ತಿದ್ದಾರೆ. ಶಿಕ್ಷಣ ಹಕ್ಕನ್ನು ಪ್ರತಿ ಮಗುವಿಗೂ ಖಾತ್ರಿಪಡಿಸುವುದಕ್ಕಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಜಿಲ್ಲಾಡಳಿತೊಂದಿಗೆ “ಕೂಲಿಗಲ್ಲ ಶಾಲೆಗೆ” ಆಭಿಯಾನ ಆರಂಭಿಸುತ್ತಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.
ಇಲ್ಲಿನ ಕಾರ್ಮಿಕ ಇಲಾಖೆಯ ಸಭಾಂಗಣದಲ್ಲಿ ಕೂಲಿಗಲ್ಲ ಶಾಲೆಗೆ ಅಭಿಯಾನದ ಕುರಿತು ವಿವಿಧ ಭಾಗೀದಾರರ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ಅಧಿಕಾರಿಗಳು ಅನಿರೀಕ್ಷಿತವಾಗಿ ತಂಡದೊಂದಿಗೆ ತಪಾಸಣೆ ಮಾಡಿ ಮಕ್ಕಳು ಶಾಲೆಗೆ ಹೋಗುವಂತೆ ನೋಡಿಕೊಳ್ಳಬೇಕು. ಕಿಶೋರ ಕಾರ್ಮಿಕರಾಗಿ ಗುರುತಿಸಿದ ಮಕ್ಕಳಿಗೆ ಕೌಶಲ್ಯಾಧಾರಿತ ತರಬೇತಿ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದರು.
2025-26ನೇ ಸಾಲಿನಲ್ಲಿ 358 ತಪಾಸಣೆ ಕೈಗೊಳ್ಳಲಾಗಿದ್ದು, 19 ಮಕ್ಕಳನ್ನು ಗುರುತಿಸಲಾಗಿದೆ. ಅದರಲ್ಲಿ 3 ಮಕ್ಕಳು ಬಾಲ ಕಾರ್ಮಿಕರಾಗಿದ್ದು, 16 ಮಕ್ಕಳು ಕಿಶೋರ ಕಾರ್ಮಿಕರಾಗಿರುತ್ತಾರೆ. 2 ಪ್ರಕರಣ ಇತ್ಯರ್ಥಗೊಂಡಿದ್ದು, 17 ಪ್ರಕರಣಗಳು ಚಾಲ್ತಿಯಲ್ಲಿವೆ ಮತ್ತು ತಪಾಸಣೆಯಲ್ಲಿ ಕಂಡು ಬಂದಂತಹ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಗುತ್ತಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಸಭೆಗೆ ತಿಳಿಸಿದರು.
ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಸಚಿನ್ ಹಳೆಮನಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ, ಕಾರ್ಮಿಕ ಅಧಿಕಾರಿಗಳಾದ ಅಕ್ಬರ್ ಮುಲ್ಲಾ, ಮಾರಿಕಾಂಬ ಹುಲಕೋಟಿ, ಕಾರ್ಮಿಕ ಯೋಜನಾಧಿಕಾರಿ ಬಸವರಾಜ ಹಿರೇಮಠ, ವಿವಿಧ ವಲಯಗಳ ಕಾರ್ಮಿಕ ನಿರೀಕ್ಷಕರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.