)
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಧಾನಸೌಧದಲ್ಲಿ ಬುಧವಾರ ತಮ್ಮ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಿಡಬ್ಲ್ಯುಆರ್ಸಿ ತೀರ್ಮಾನದ ಕುರಿತು ಚರ್ಚೆ ನಡೆಸಿದ ಬಳಿಕ ಸುದ್ದಿಗೋ಼ಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸದ್ಯದ ಪರಿಸ್ಥಿತಿಯಲ್ಲಿ ಸಿಡಬ್ಲ್ಯುಆರ್ಸಿ ಆದೇಶದಂತೆ ತಮಿಳುನಾಡಿಗೆ ನಿತ್ಯ 3,500 ಕ್ಯುಸೆಕ್ನಂತೆ 15 ದಿನ ನೀರು ಹರಿಸುವುದು ಕಷ್ಟದಾಯಕ. ಹಾಗಾಗಿ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಅನೇಕ ವರ್ಷಗಳಿಂದ ಇಲಾಖೆಯ ಸಲಹೆಗಾರರಾಗಿರುವ ಶ್ರೀರಾಮಯ್ಯ ಅವರು ಮೇಲ್ಮನವಿ ಅರ್ಜಿಯ ಕರಡು ಸಿದ್ಧಪಡಿಸಿದ್ದಾರೆ. ಅದನ್ನು ನಮ್ಮ ರಾಜ್ಯದ ಪರ ವಕೀಲರಾದ ಮೋಹನ್ ಕಾತರಕಿ ಅವರಿಗೆ ಕಳುಹಿಸಲಾಗಿದೆ. ಅವರು ಒಪ್ಪಿದರೆ ಗುರುವಾರವೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯುಎಂಎ) ಮೇಲ್ಮನವಿ ಸಲ್ಲಿಸಲಾಗುವುದು ಎಂದರು.ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಿಗೆ (ಕಳೆದ ಜೂ.1ರಿಂದ ಜು.27ರವರೆಗೆ) ಸಂಚಿತ ಒಳಹರಿವು 30 ವರ್ಷಗಳ ಸರಾಸರಿಗಿಂತ ಶೇ.65.86 ಕಡಿಮೆಯಾಗಿದೆ. ಜಲಾಶಯಗಳಲ್ಲಿ ಪ್ರಸಕ್ತ 46 ಟಿಎಂಸಿಯಷ್ಟು ಮಾತ್ರ ನೀರಿದ್ದು, ಇದು ಕಾವೇರಿ ಜಲಾನಯನ ಪ್ರದೇಶದ ಮುಂಬರುವ ಕುಡಿಯುವ ನೀರು ಹಾಗೂ ಆಂತರಿಕ ಅಗತ್ಯತೆಗಳನ್ನು ಪೂರೈಸಲು ಮಾತ್ರ ಸಾಧ್ಯವಾಗಲಿದೆ. ಪ್ರತೀ ದಿನ ನಮಗೆ ಮೂರೂವರೆ ಟಿಎಂಸಿಯಷ್ಟು ನೀರು ಕುಡಿಯುವ ಬಳಕೆಗೆ ಬೇಕಾಗುತ್ತದೆ. ಹಾಗಾಗಿ ಸಿಡಬ್ಲ್ಯುಆರ್ಸಿ ಆದೇಶ ಪಾಲನೆ ಕಷ್ಟವಾಗಲಿದೆ. ಹಾಗಾಗಿ ಸಿಡಬ್ಲ್ಯುಎಂಎ ಮುಂದೆ ಮೇಲ್ಮನವಿ ಸಲ್ಲಿಸಲಾಗುವುದು. ಅಲ್ಲಿ ನ್ಯಾಯ ಸಿಗದಿದ್ದರೆ ಸುಪ್ರೀಂ ಕೋರ್ಟ್ಗೆ ಹೋಗಬೇಕಾಗುತ್ತದೆ. ಅದನ್ನು ಆ ನಂತರ ಯೋಚಿಸಲಾಗುವುದು ಎಂದರು.
ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ರಾಜ್ಯ ಸರ್ಕಾರ ನಮಗೇ ನೀರು ಇಲ್ಲದಿದ್ದರೂ ತಮಿಳುನಾಡಿಗೆ ಬಿಟ್ಟು ರಾಜ್ಯವನ್ನು ಅಡ ಇಡುತ್ತಿದೆ ಎಂಬ ಬಿಜೆಪಿಯವರ ಟೀಕೆ ಕುರಿತು ಕೇಳಿದಾಗ, ಇಂಗ್ಲೀಷ್ನಲ್ಲಿ ಕಾಮನ್ ಸೆನ್ಸ್ ಇಲ್ಲ ಎಂದರೆ ಬಿಜೆಪಿಯವರು ಸಿಟ್ಟಾಗುತ್ತಾರೆ. ಅದಕ್ಕೆ ಕನ್ನಡದಲ್ಲಿ ಹೇಳುವುದಾದರೆ ಬಿಜೆಪಿಯವರಿಗೆ ಸಾಮಾನ್ಯ ಜ್ಞಾನ ಸ್ವಲ್ಪ ಕಡಿಮೆ. ಹಾಗಾಗಿ ಹೀಗೆಲ್ಲಾ ಹೇಳುತ್ತಾರೆ. ಬಿಳಿಗುಂಡ್ಲುವಿಗೆ ಹೋಗಿ ನೋಡಲಿ ನಾವು ಎಷ್ಟು ನೀರು ಬಿಟ್ಟಿದ್ದೇವೆ ಇದುವರೆಗೂ ಎಂದು ತಿಳಿಯುತ್ತದೆ. ಇದುವರೆಗೆ ಬರೀ ಮೂರೂವರೆ ಟಿಎಂಸಿ ನೀರು ಅಷ್ಟೇ ಬಿಟ್ಟಿರೋದು ಎಂದು ಸ್ಪಷ್ಟಪಡಿಸಿದರು.
ಮೇಕೆದಾಟು ಯೋಜನೆ ಸಂಬಂಧ ಚರ್ಚೆಗೆ ಆ.3ರಂದು ಬರುವಂತೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ಆಹ್ವಾನ ನೀಡಿದ್ದು, ಸಭೆಗೆ ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.ಆದರೆ, ಕಾವೇರಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ವಿಜಯ್ ಅವರು ರಾಜ್ಯಕ್ಕೆ ಬರುತ್ತಾರೆಯೇ? ಅಥವಾ ಇಲ್ಲವೇ ಎಂಬುದರ ಬಗ್ಗೆ ತಮಿಳುನಾಡು ಸರ್ಕಾರ ಇನ್ನೂ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ರಾಜ್ಯಕ್ಕೆ ಬರುತ್ತಾರೆಯೇ? ಅಥವಾ ವರ್ಚುವಲ್ ಮೂಲಕ ಭಾಗವಹಿಸಲಿದ್ದಾರೆಯೇ? ಅಥವಾ ಚರ್ಚೆಯಿಂದ ಅಂತರ ಕಾಯ್ದುಕೊಳ್ಳಲಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.ಮೇಕೆದಾಟು ವಿಚಾರವಾಗಿ ಚರ್ಚಿಸಲು ವಿಜಯ್ ಆಸಕ್ತಿ ತೋರಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಭೆಗೆ ದಿನಾಂಕ ನಿಗದಿ ಮಾಡಿ ಆಹ್ವಾನ ಕಳುಹಿಸಿದ್ದರು. ಈ ಬಗ್ಗೆ ತಮಿಳುನಾಡಿನಿಂದ ಸ್ಪಷ್ಟತೆ ದೊರೆತಿಲ್ಲ.ಇದರ ನಡುವೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ವಿಜಯ್ ಅವರು ರಾಜ್ಯಕ್ಕೆ ಬರಲು ಆಸಕ್ತಿ ತೋರಿದ್ದರು. ಹೀಗಾಗಿ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ. ಜತೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿನ ಸ್ಥಿತಿ ತೋರಿಸಲು ಸಹ ಸಿದ್ಧತೆ ಮಾಡಿದ್ದೇವೆ. ಏನಾಗುತ್ತದೆಯೋ ನೋಡೋಣ ಎಂದಿದ್ದಾರೆ.ಇದರ ನಡುವೆ ಗುರುವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಹೊರ ಬೀಳಲಿದ್ದು, ಉಭಯ ರಾಜ್ಯಗಳಲ್ಲೂ ಕಾವೇರಿ ಹೋರಾಟ ಜೋರು ಪಡೆದಿದೆ. ತಮಿಳುನಾಡಿನಲ್ಲಿ ವಿಜಯ್ ಕರ್ನಾಟಕಕ್ಕೆ ತೆರಳುವ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ಈ ಎಲ್ಲ ಕಾರಣಗಳಿಂದ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಕರ್ನಾಟಕ ಭೇಟಿ ಬಗ್ಗೆ ಕುತೂಹಲ ಮೂಡಿದೆ.ದೆಹಲಿಯಲ್ಲಿಂದು ಕಾವೇರಿ ನೀರು ಪ್ರಾಧಿಕಾರದ ಸಭೆ:ಮುಂಗಾರು ಮಳೆ ಕೊರತೆ, ರಾಜ್ಯದಲ್ಲಿನ ತೀವ್ರ ಬರ ಹಾಗೂ ತಮಿಳುನಾಡಿಗೆ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ಬೆನ್ನಲ್ಲೇ ದೆಹಲಿಯಲ್ಲಿ ಗುರುವಾರ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದೆ. ಮುಂದಿನ 15 ದಿನ ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್ ನಂತೆ 4.5 ಟಿಎಂಸಿ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಯಲಿದೆ.
ಇದೇ ವೇಳೆ, ಕಾವೇರಿ ಜಲಾನಯನ ಪ್ರದೇಶದ ಜಲ-ಹವಾಮಾನ ಪರಿಸ್ಥಿತಿ ಕುರಿತಾಗಿಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಜೊತೆಗೆ, 2026-27ರ ಜಲ ವರ್ಷದಲ್ಲಿ ಪುದುಚೇರಿಯ ಯು.ಟಿ.ಯ ಬಿಳಿಗುಂಡ್ಲು ಮತ್ತು ಕಾರೈಕಲ್ ಪ್ರದೇಶದಲ್ಲಿ ಕಂಡು ಬಂದ ಸಂಚಿತ ಹರಿವಿನ ಕೊರತೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.