ಪೊಲೀಸರ ನಡವಳಿಕೆ ಹಾಗೂ ವೈದ್ಯರ ನಿರ್ಲಕ್ಷ್ಯ ಪುಟ್ಟ ಮಗುವಿನ ಜೀವವನ್ನೇ ಬಲಿ ತೆಗೆದುಕೊಂಡಿತು ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ವಿಷಾದಿಸಿದರು
ಮದ್ದೂರು : ಪೊಲೀಸರ ನಡವಳಿಕೆ ಹಾಗೂ ವೈದ್ಯರ ನಿರ್ಲಕ್ಷ್ಯ ಪುಟ್ಟ ಮಗುವಿನ ಜೀವವನ್ನೇ ಬಲಿ ತೆಗೆದುಕೊಂಡಿತು ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ವಿಷಾದಿಸಿದರು. ಮಂಡ್ಯ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಸಾವನ್ನಪ್ಪಿದ ಹೃತೀಕ್ಷಾ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಒಂದು ತಾಲೂಕು ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಇಂಜೆಕ್ಷನ್ ಇಲ್ಲದಿರುವುದು ದೊಡ್ಡ ದುರಂತ. ಆ ಇಂಜೆಕ್ಷನ್ ಹಾಕಿಸಲು ಮಂಡ್ಯಕ್ಕೆ ಬರುವ ವೇಳೆ ಟ್ರಾಫಿಕ್ ಪೊಲೀಸರ ದೌರ್ಜನ್ಯಕ್ಕೆ ಚಿಕ್ಕ ಮಗು ಪ್ರಾಣ ಕಳೆದುಕೊಂಡಿದೆ. ಇದರಲ್ಲಿ ಪೊಲೀಸರ ತಪ್ಪಿನಷ್ಟೇ ವೈದ್ಯರ ತಪ್ಪೂ ಇದೆ ಎಂದರು.
ಈ ಅನ್ಯಾಯ ಯಾರಿಗೂ ಆಗಬಾರದು. ಈ ಬಗ್ಗೆ ಸಂಬಂಧಪಟ್ಟವರಿಗೆ ಪ್ರಶ್ನೆ ಕೇಳೇ ಕೇಳ್ತೀನಿ. ಈಗ ಕುಟುಂಬದವರಿಗೆ ಏನೇ ಸಾಂತ್ವನ ಹೇಳಿದರೂ ಅವರ ನೋವು ಭರಿಸಲು ಆಗೋಲ್ಲ. ವೈಯಕ್ತಿಕ ಪರಿಹಾರ ಎನ್ನುವುದು ಸಣ್ಣದಾದ ಸಹಾಯವಷ್ಟೇ. ನಾವು ಏನೇ ಕೊಟ್ಟರೂ ಮಗುವಿನ ಜೀವ ತಂದುಕೊಡಲಾಗುವುದಿಲ್ಲ. ಜೀವನ ಪರ್ಯಂತ ಆ ನೋವು ಕುಟುಂಬದವರನ್ನು ಕಾಡುತ್ತಿರುತ್ತದೆ ಎಂದರು.
ಮಂಡ್ಯ ಪ್ರವಾಸದ ಬಗ್ಗೆ ನಿರ್ದಿಷ್ಟವಾದ ಪ್ಲಾನ್ ಹಾಕಿಲ್ಲ:
ಮುಂದಿನ ದಿನಗಳಲ್ಲಿ ಪ್ಲಾನ್ ಮಾಡುತ್ತೇನೆ. ಈಗ ಅಜ್ಜಿ ಆಗಿದ್ದೀನಿ. ಮನೆಯಲ್ಲಿ ಮೊಮ್ಮಗು ಇದೆ. ಮೊಮ್ಮಗು ಜೊತೆ ಸ್ವಲ್ಪ ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ. ಈ ಸಮಯ ಮತ್ತೆ ಸಿಗುವುದಿಲ್ಲ. ಅದಕ್ಕಾಗಿ ವಿರಾಮ ಕೊಟ್ಟಿದ್ದೇನೆ ಎಂದರು.
ರಾಜಕಾರಣದ ನಿರ್ಧಿಷ್ಟ ಪ್ಲಾನ್ ಮಾಡಿಲ್ಲ. ಅಗತ್ಯ ಇರುವ ಕಡೆ ಮಾತ್ರ ಹೋಗುತ್ತೇನೆ. ಬಿಜೆಪಿ ಪಕ್ಷದೊಳಗೆ ನನಗೆ ಯಾವ ಬೇಸರವೂ ಇಲ್ಲ. ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಒಳಗೆ ಕುಳಿತು ಚರ್ಚೆ ಮಾಡುತ್ತೇನೆ. ಸಾರ್ವಜನಿಕವಾಗಿ ನಾನು ಚರ್ಚೆ ಮಾಡುವುದಿಲ್ಲ ಎಂದರು.
ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಅನಕೇರೆ ಶಶಿಕುಮಾರ್, ಮುತ್ತನಹಳ್ಳಿ ಮಹೇಂದ್ರ ಇದ್ದರು.