ಕನ್ನಡಪ್ರಭ ವಾರ್ತೆ ಶಿವಮೊಗ್ಗವಿಜ್ಞಾನದ ವಿಸ್ಮಯಗಳು ಮಕ್ಕಳಲ್ಲಿ ತೀವ್ರ ಕೂತೂಹಲ ಮೂಡಿಸುತ್ತದೆ. ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಪ್ರತಿ ನಿತ್ಯ ಹೊಸ ಅವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಪ್ರತಿಯೊಂದು ಮಗುವಿಗೂ ಬಾಲ್ಯದಿಂದಲೇ ವಿಜ್ಞಾನದ ಅರಿವು ಮೂಡಿಸುವುದು ಅಗತ್ಯ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.ಶಿವಮೊಗ್ಗ ಜಿಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಡ್ವಾನ್ಸಡ್ ಸ್ಕಿಲ್ ಅಕಾಡೆಮಿ, ಹಿಮಾಲಯ ಬಾಹ್ಯಾಕಾಶ ಕೇಂದ್ರ ಹಾಗೂ ಓಪನ್ ಮೈಂಡ್ಸ್ ವರ್ಲ್ಡ್ ವತಿಯಿಂದ ಆಯೋಜಿಸಿದ್ದ 7 ದಿನಗಳ ಯುವ ಗಗನಯಾತ್ರಿ ಕಾರ್ಯಾಗಾರದಲ್ಲಿ ಮಾತನಾಡಿದರು.ಇಸ್ರೋದಲ್ಲಿ ಕೆಲಸ ಮಾಡಲು ವಿಜ್ಞಾನಿಗಳ ಕೊರತೆಯಾಗುವ ಸಾಧ್ಯತೆ ಇದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಇರುವ ಅವಕಾಶಗಳ ಬಗ್ಗೆ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ವೃತ್ತಿಯಾಗಿ ಸ್ವೀಕರಿಸಿ ದೇಶದ ಸಾಧನೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.ಖಗೋಳಶಾಸ್ತ್ರ ಪ್ರಾತ್ಯಕ್ಷಿಕೆಯನ್ನು ಶಿವಮೊಗ್ಗದಲ್ಲಿ ಮೊದಲ ಬಾರಿ ಆಯೋಜಿಸಿದ್ದು, ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಡಿಯಲ್ಲಿ ಗಗನಯಾನ ಬಾಹ್ಯಾಕಾಶ ಪ್ರಯೋಗಾಲಯ ಮಾಡಲು ಉದ್ದೇಶಿಸಲಾಗಿದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಜತೆಯಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರೆಪಿಸಲಾಗುವುದು ಎಂದರು.ಹಿಮಾಲಯ ಬಾಹ್ಯಾಕಾಶ ಕೇಂದ್ರದ ಸಿಇಒ ಅಫ್ರೋಜ್ ಮಾತನಾಡಿ, ಖಗೋಳ ವಿಜ್ಞಾನದ ಬಗ್ಗೆ ಮಕ್ಕಳಿಗೆ ಹೆಚ್ಚಿನ ಮಾಹಿತಿ ನೀಡಬೇಕು. ಆಸಕ್ತಿ ಬೆಳೆಸುವಂತೆ ಮಾಡಬೇಕು ಎಂದರು. ನಂತರ ಬಾಹ್ಯಾಕಾಶ ಮತ್ತು ರಾಕೆಟ್ ತಯಾರಿಕೆ, ಉಡಾವಣೆ ಬಗ್ಗೆ ಮಾಹಿತಿ ನೀಡಿದರು.ಓಪನ್ ಮೈಂಡ್ಸ್ ವರ್ಲ್ಡ್ ಮ್ಯಾನೇಜಿಂಗ್ ಟ್ರಸ್ಟಿ ಕಿರಣಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಮಕ್ಕಳಿಗೆ ಹೊಸ ಹೊಸ ವಿಷಯಗಳ ಕಲಿಕೆಗೆ ಹೆಚ್ಚಿನ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು. ಶೂನ್ಯ ಗುರುತ್ವಾಕರ್ಷಣ, ರಾಕೆಟ್ ಉಡಾವಣೆ ಕುರಿತ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ಬೆಂಗಳೂರು, ಮೈಸೂರು, ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ 70 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ. ವಿಜಯಕುಮಾರ್, ಅಡ್ವಾನ್ಸ್ಡ್ ಸ್ಕಿಲ್ ಅಕಾಡೆಮಿ ಸಿಇಒ ಸವಿತಾ ಮಾಧವ್, ಹಿಮಾಲಯ ಬಾಹ್ಯಾಕಾಶ ಕೇಂದ್ರದ ಸಂಸ್ಥಾಪಕರಾದ ವೀರೇಶ್ ಪಾಟೀಲ್, ಶ್ರೀದೇವಿ ರೂಗಿ, ನೇಹಾ ಮತ್ತಿತರರು ಉಪಸ್ಥಿತರಿದ್ದರು.