ಕನಕಪುರ: ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಬ್ಲಾಸಮ್ ಶಾಲೆಯಲ್ಲಿ ಕನಕಪುರ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಸೋಮವಾರ ಯಶಸ್ವಿಯಾಗಿ ನೆರೆವೇರಿತು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸತೀಶ್ ಮಾತನಾಡಿ, ಇಂದಿನ ದಿನಗಳಲ್ಲಿ ಪತ್ರಿಕೆಗಳನ್ನು ಓದುವ ಅಭ್ಯಾಸ ಕಡಿಮೆ ಆಗುತ್ತಿದ್ದು, ದೃಶ್ಯ ಮಾಧ್ಯಮದ ಹಾವಳಿಯಲ್ಲಿ ಜನ ಸಾಮಾನ್ಯರು ಓದುವ ಸಮಯವನ್ನು ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲಿ ಪ್ರತಿನಿತ್ಯ ಹಲವು ವೈವಿದ್ಯಗಳೊಂದಿಗೆ ಕ್ರಿಯಾತ್ಮಕವಾಗಿ ಹಲವು ವಿಷಯಗಳನ್ನು ಕಟ್ಟಿ ಕೊಡುವ ಕನ್ನಡಪ್ರಭ ಪತ್ರಿಕೆ ಪರಿಸರದ ಬಗೆಗೆ ಕಾಳಜಿ ವಹಿಸಿಕೊಂಡು ಮಕ್ಕಳ ಪ್ರತಿಭೆ ಹೊರತರಲು ಚಿತ್ರಕಲಾ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳು ತಮ್ಮ ಮನಸ್ಸಿನಲ್ಲಿರುವ ಪ್ರತಿಬಿಂಬ ಹಾಗೂ ಪರಿಸರದ ಬಗೆಗಿರುವ ಕಾಳಜಿಯನ್ನು ಚಿತ್ರಕಲೆಯಲ್ಲಿ ಬಿಡಿಸುವ ಮೂಲಕ ತಾಲೂಕು ಮಟ್ಟದಲ್ಲಿ ಆಯ್ಕೆಯಾಗಿ, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕನಕಪುರ ತಾಲೂಕಿನ ಕೀರ್ತಿಯನ್ನು ಪಸರಿಸಿ ಎಂದು ಸ್ಪರ್ಧಿಗಳಿಗೆ ಶುಭ ಕೋರಿದರು.ತೀರ್ಪುಗಾರ ರಾಜೇಶ್ ದೇಸಾಯಿ ಮಾತನಾಡಿ, ಪರಿಸರ, ಸಾಲುಮರದ ತಿಮ್ಮಕ್ಕ, ವನ್ಯಜೀವಿ ಸಂರಕ್ಷಣೆ ವಿಷಯಗಳ ಬಗ್ಗೆ ನಡೆಯುತ್ತಿರುವ ಸ್ಪರ್ಧೆಯಲ್ಲಿ ವಿಜೇತರನ್ನು ವಿಷಯ, ಕ್ರಿಯಾತ್ಮಕತೆ, ಬಣ್ಣಗಳ ಬಳಕೆ ಮತ್ತು ನೀಟ್ ನೆಸ್ ವಿಷಯಗಳನ್ನು ಪರಿಗಣಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು ಎಂದು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಬ್ಲಾಸಂ ಶಾಲೆಯ ಪ್ರಾಂಶುಪಾಲೆ ಗಂಗಾಂಬಿಕಾ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವಿಷಯ ಪರಿವೀಕ್ಷಕ ನಾಗರಾಜು ಎಂ.ಸಿ, ಬಹುಜನ ಜಾಗೃತ ವೇದಿಕೆ ಜಿಲ್ಲಾಧ್ಯಕ್ಷ ನೀಲಿ ರಮೇಶ್, ಕನಕಪುರ ತಾಲೂಕು ವರದಿಗಾರ ಕೆ.ವಿ.ಮನು, ಸಾಹಿತಿ ನಮನ ಚಂದ್ರು, ಡಾ.ಯು.ಸಿ.ಕುಮಾರ್, ಪತ್ರಕರ್ತರಾದ ಕಾ.ಪ್ರಕಾಶ್, ವೆಂಕಟೇಶ್, ತೀರ್ಪುಗಾರರಾದ ರಾಜೇಶ್ ದೇಸಾಯಿ, ಶಾಲಾ ಶಿಕ್ಷಕ ನಾಗೇಂದ್ರ ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 01:
ಕನಕಪುರದ ಬ್ಲಾಸಮ್ ಶಾಲೆಯಲ್ಲಿ ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ವತಿಯಿಂದ ತಾಲೂಕು ಮಟ್ಟದ ಪ್ರೌಢಶಾಲಾ ಮಕ್ಕಳಿಗೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ತಾಲೂಕಿನ ವಿವಿಧ ಶಾಲಾ ಮಕ್ಕಳು ಹಾಗೂ ಗಣ್ಯರು ಭಾಗವಹಿಸಿದ್ದರು.